ಪಲಾಯನವಾದಿ ಸಿದ್ದರಾಮಯ್ಯನಿಂದ ಕಾಂಗ್ರೆಸ್ ಗೆಲ್ಲಿಸೋಕಾಗಲ್ಲ:ಶಾ ಟೀಕೆ
ತುಮಕೂರು, ಮೇ 09: ಪಲಾಯನವಾದಿಗಳು ಎಂದಿಗೂ ತಮ್ಮ ಪಕ್ಷ ಗೆಲ್ಲಿಸಲು ಸಾಧ್ಯವಿಲ್ಲ, ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಿಂದ ಪಲಾಯನಗೈದು ಬದಾಮಿಗೆ ಓಡಿ ಹೋಗಿದ್ದಾರೆ. ಇಂತವರಿಂದ ಜನತೆ ಏನು ನಿರೀಕ್ಷಿಸಲು ಸಾಧ್ಯ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಲೇವಡಿ ಮಾಡಿದ್ದಾರೆ.
ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪರವಾಗಿ ಪ್ರಚಾರ ಮಾಡಲು ರಾಜ್ಯಕ್ಕೆ ಆಗಮಿಸಿರುವ ಅವರು ತುಮಕೂರಿನಲ್ಲಿ ತನ್ನ ಪ್ರಚಾರ ಭಾಷಣವನ್ನು ಮಾಡಿದರು. ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿಯಲ್ಲಿ ಸೋಲಿನ ಸುಳಿವು ಸಿಕ್ಕ ಮೇಲೆ ಬಾದಾಮಿಯಲ್ಲಿ ಸ್ಪರ್ಧಿಸಲು ಸಿದ್ದರಾಮಯ್ಯ ಬಾದಾಮಿಗೆ ಓಡಿ ಹೋಗಿದ್ದಾರೆ.
ಬೆನ್ನು ತೋರಿಸಿ ಓಡಿ ಹೋಗುವವರು ಎಂದೂ ಗೆಲ್ಲಲು ಸಾಧ್ಯವಿಲ್ಲ, ಪಕ್ಷವನ್ನು ಗೆಲ್ಲಿಸಲು ಯೋಗ್ಯರಲ್ಲ, ಬಾದಾಮಿಯಲ್ಲಿ ಸಿದ್ದರಾಮಯ್ಯ ಅವರಿಗೆ ಟಕ್ಕರ್ ನೀಡಲು ಶ್ರೀರಾಮುಲು ಇದ್ದಾರೆ ಎಂದರು.

ಕಾಂಗ್ರೆಸ್ ಸರ್ಕಾರವು ಕಳೆದ 5 ವರ್ಷಗಳಲ್ಲಿ ಕರ್ನಾಟಕವನ್ನು ಸಂಪೂರ್ಣವಾಗಿ ವಿನಾಶದತ್ತ ಕೊಂಡೊಯ್ದಿದೆ. ಆದರೆ ಈ ಬಾರಿಯೂ ಗೆಲ್ಲುತ್ತೇವೆ ಎಂಬ ಹಗಲು ಕನಸು ಕಾಣುತ್ತಿದ್ದಾರೆ. ಆದರೆ 2014 ರಿಂದ ಮಹಾರಾಷ್ಟ್ರ, ಹರಿಯಾಣ, ಜಾರ್ಖಂಡ್, ಕಾಶ್ಮೀರ, ಅಸ್ಸಾಂ, ಮಣಿಪುರ, ಉತ್ತರಖಂಡ್, ಉತ್ತರಪ್ರದೇಶ, ಗುಜರಾತ್, ಹಿಮಾಚಲ ಪ್ರದೇಶ, ಗೋವಾ, ಮೇಘಾಲಯ, ನಾಗಾಲ್ಯಾಂಡಗ, ತ್ರಿಪುರಾ ಹೀಗೆ ಒಟ್ಟು 14 ಕಡೆಗಳಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿದೆ ಎಂದು ಹೇಳಿದರು.
ಹೀಗಿರುವಾಗ ಕಾಂಗ್ರೆಸ್ ಸುಮ್ಮನೆ ತಾವು ಗೆಲ್ಲುತ್ತೇವೆ ಎಂದುಕ ಕನಸು ಕಾಣುತ್ತಿದ್ದಾರೆ. ಇದೀಗ 15 ನೇ ಚುನಾವಣೆ ಕರ್ನಾಟಕದಲ್ಲಿ ನಡೆಯುತ್ತಿದ್ದು, 14 ರಾಜ್ಯಗಳಲ್ಲಿ ಗೆದ್ದ ಬಿಜೆಪಿಗೆ ಇದೊಂದು ರಾಜ್ಯದಲ್ಲಿ ಗೆಲ್ಲವುದು ಕಷ್ಟವಲ್ಲ ಎಂದರು. ಕಾಂಗ್ರೆಸ್ ಸರ್ಕಾರದ ಅಧಿಕಾರ ಅವಧಿಯಲ್ಲಿ ಕರ್ನಾಟಕ 3500 ಕ್ಕಿಂತ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಾರಿ ಯಡಿಯೂರಪ್ಪ ಸರ್ಕಾರ ಅಧಿಕಾರಕ್ಕೆ ಬಂದರೆ ಒಂದು ಲಕ್ಷ ರೈತರ ಕೃಷಿ ಸಾಲವನ್ನು ಮನ್ನಾ ಮಾಡಲಾಗುತ್ತದೆ.ನೇಗಿಲಯೋಗಿ ಯೋಜನೆಯಡಿಯಲ್ಲಿ ತಕ್ಷಣ ಸಹಾಯಕ್ಕೆ ಬರುವಂತೆ 20 ಲಕ್ಷ ರೈತರಿಗೆ 10 ಸಾವಿರ ರೂ ಹಣ ನೀಡಲಾಗುತ್ತದೆ ಎಂದರು.
ಸಿದ್ದರಾಮಯ್ಯ ಸರ್ಕಾರ ತೆಂಗು ಬೆಳೆಗಾರರಿಗಾಗಿ ಯಾವ ಯೋಜನೆಯನ್ನೂ ರೂಪಿಸಿಲ್ಲ, ಆದರೆ ಮೋದಿ ಸರ್ಕಾರ ಚಿತ್ರದುರ್ಗ, ಮೈಸೂರು, , ಮಂಡ್ಯ ಸೇರಿದಂತೆ ಒಟ್ಟು ಐದು ಕಡೆ ತೆಂಗು ಸಂಸ್ಕರಣಾ ಘಟಕವನ್ನು ಸ್ಥಾಪನೆ ಮಾಡುತ್ತದೆ.
ಜನತಾದಳಕ್ಕೆ ಕಾಂಗ್ರೆಸ್ ಅನ್ನು ಸೋಲಿಸಲು ಸಾಧ್ಯವಿಲ್ಲ ಅಂತಹದರಲ್ಲಿ ಅವರಿಗೆ ಯೋಜನೆ ಮಾಡುವ ಅಗತ್ಯವಿಲ್ಲ. ಕರ್ನಾಟಕವನ್ನು ವಿಕಾಸದತ್ತ ಕೊಂಡೊಯ್ಯಬೇಕಾದರೆ ಕಾಂಗ್ರೆಸ್, ಹಾಗೂ ಜೆಡಿಎಸ್ ನನ್ನು ಸೋಲಿಸಲೇ ಬೇಕು ಎಂದು ಅಮಿತ್ ಶಾ ಕರೆ ನೀಡಿದರು.
ಬೆಂಗಳೂರಿನಲ್ಲಿ ಮಂಗಳವಾರ ರಾತ್ರಿ ಕಾಂಗ್ರೆಸಿಗರ ಮನೆಯಲ್ಲಿ 10 ಸಾವಿರ ನಕಲಿ ಮತದಾರರ ಪಟ್ಟಿ ದೊರೆತಿದೆ. ಇಂತಹ ವಾಮ ಮಾರ್ಗದಿಂದ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ, ಇದುವರೆಗೂ ಸಿದ್ದರಾಮಯ್ಯ ತಮ್ಮ 40 ಲಕ್ಷ ವಾಚಿನ ಕುರಿತು ಪ್ರತಿಕ್ರಿಯೆ ನೀಡುತ್ತಿರಲಿಲ್ಲ ಈಗ ಅದು ದುಬೈನಲ್ಲಿರುವ ಒಬ್ಬ ಡಾಕ್ಟರ್ ಕೊಟ್ಟಿರುವುದು ಎಂದು ಸಬೂಬು ಹೇಳುತ್ತಿದ್ದಾರೆ. ಜನರಿಗೋಸ್ಕರ ಕೆಲಸ ಮಾಡುತ್ತೇನೆ ಎಂದು ಅಧಿಕಾರಕ್ಕೆ ಬಂದು ತಾವು ದುಡ್ಡು ಮಾಡಿದ್ದಾರೆ ಎಂದು ದೂರಿದರು.












Click it and Unblock the Notifications