ತುಮಕೂರು ರಸ್ತೆ ಅಪಘಾತ; ಶವ ನೋಡಿ ಕಣ್ಣೀರಿಟ್ಟ ಪೊಲೀಸ್
ತುಮಕೂರು, ಮಾರ್ಚ್ 06 : ಅವರು ಗರಿ-ಗರಿ ಖಾಕಿ ತೊಟ್ಟ ಪೊಲೀಸ್ ಅಧಿಕಾರಿ. ಆಸ್ಪತ್ರೆಯ ಮುಂದೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ಅಪಘಾತದಲ್ಲಿ ಮೃತಪಟ್ಟ ಶವಗಳನ್ನು ನೋಡಿ ಕರ್ತವ್ಯದ ನಡುವೆಯೇ ಕಣ್ಣೀರಿಟ್ಟರು.
ಶುಕ್ರವಾರ ಮುಂಜಾನೆ ತುಮಕೂರು ಜಿಲ್ಲೆಯ ಕುಣಿಗಲ್ನ ಬ್ಯಾಲದಕೆರೆ ಸಮೀಪ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಒಂದೂವರೆ ವರ್ಷದ ಹೆಣ್ಣು ಮಗು ಸೇರಿದಂತೆ 13 ಜನರು ಮೃತಪಟ್ಟಿದ್ದಾರೆ. ಮೃತಪಟ್ಟವರಲ್ಲಿ 8 ಜನರು ಒಂದೇ ಕುಟುಂಬದವರು.
ಬ್ಯಾಲದಕೆರೆ ಸಮೀಪ ನಡೆದ ಅಪಘಾತದಲ್ಲಿ ಮೃತಪಟ್ಟವರ ಶವಗಳನ್ನು ಕುಣಿಗಲ್ ತಾಲೂಕು ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ತರಲಾಗಿತ್ತು. ಆಗ ಅಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದ ಮಹಿಳಾ ಪೊಲೀಸ್ ಅಧಿಕಾರಿ ಶವಗಳನ್ನು ಕಂಡು ಕಣ್ಣೀರಿಟ್ಟರು.
ಎರಡು ಕಾರುಗಳ ನಡುವೆ ಸಂಭವಿಸಿದ ಡಿಕ್ಕಿಯಲ್ಲಿ ಒಂದು ಕಾರು ಸಂಪೂರ್ಣಗೊಂಡು ಜಖಂಗೊಂಡಿತ್ತು. ಕೆಲವು ಶವಗಳು ಗುರುತು ಸಿಗಲಾರದಷ್ಟು ಛಿದ್ರಗೊಂಡಿದ್ದವು. ಅದರಲ್ಲೂ ಒಂದೂವರೆ ವರ್ಷದ ಮಗುವಿನ ಶವ ನೋಡಿ ಪೊಲೀಸ್ ಅಧಿಕಾರಿ ಗಳಗಳನೆ ಅತ್ತರು.

ಮರಣೋತ್ತರ ಪರೀಕ್ಷೆ
ಕುಣಿಗಲ್ ತಾಲೂಕು ಆಸ್ಪತ್ರೆಗೆ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ತರಲಾಗಿತ್ತು. ಒಟ್ಟು 12 ಜನರು ಮೃತಪಟ್ಟಿದ್ದರು. ಶವಾಗಾರದ ತುಂಬ ಹೆಣಗಳನ್ನು ಮಲಗಿಸಲಾಗಿತ್ತು. ಒಂದು ಕಡೆ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಮಕ್ಕಳು, ಮಹಿಳೆಯರ ಶವಗಳನ್ನು ಕಂಡು ಮಹಿಳಾ ಪೊಲೀಸ್ ದುಃಖದ ಕಟ್ಟೆ ಒಡೆಯಿತು. ಶವಾಗಾರದಲ್ಲಿಯೇ ಕಣ್ಣೀರು ಹಾಕಿದರು.

ಮಗುವಿಗೆ ಮುಡಿ ಕೊಡಲು ಹೋಗಿದ್ದರು
ರಸ್ತೆ ಅಪಘಾತದಲ್ಲಿ ಮೃತಪಟ್ಟವರು ಧರ್ಮಸ್ಥಳದಿಂದ ವಾಪಸ್ ಆಗುತ್ತಿದ್ದರು. ಮಗುವಿನ ಮುಡಿ ಕೊಡಲು ಕುಟುಂಬ ಸಮೇತ ಧರ್ಮಸ್ಥಳಕ್ಕೆ ತೆರಳಿದ್ದರು. ಅಲ್ಲಿಂದ ತಮಿಳುನಾಡಿನ ಹೊಸೂರಿಗೆ ವಾಪಸ್ ಹೋಗುವಾಗ ಕುಣಿಗಲ್ ಬಳಿ ಅಪಘಾತ ನಡೆದಿದೆ.

ಟವೆರಾ, ಬ್ರೀಜಾ ನಡುವೆ ಡಿಕ್ಕಿ
ಧರ್ಮಸ್ಥಳದಿಂದ ಬೆಂಗಳೂರಿಗೆ ಬರುತ್ತಿದ್ದ ಟವೆರಾ ವಾಹನಕ್ಕೆ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಹೋಗುತ್ತಿದ್ದ ಬ್ರೀಜಾ ಕಾರು ಡಿಕ್ಕಿಯಾಗಿದೆ. ಟೆವೆರಾದಲ್ಲಿದ್ದ 10 ಜನರು ಮೃತಪಟ್ಟಿದ್ದಾರೆ. ಇವರಲ್ಲಿ 8 ಜನರು ಒಂದೇ ಕುಟುಂಬದವರು. ಒಂದೂವರೆ ಮತ್ತು ನಾಲ್ಕು ವರ್ಷದ ಇಬ್ಬರು ಮಕ್ಕಳು ಸಹ ಅಪಘಾತದಲ್ಲಿ ಸಾವನ್ನಪ್ಪಿವೆ.

ಕಾರಿನಲ್ಲಿದ್ದ ಮೂವರ ಸಾವು
ಬ್ರೀಜಾ ಕಾರು ನಿಯಂತ್ರಣ ಕಳೆದುಕೊಂಡು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಬಳಿಕ ಟವೆರಾಗೆ ಡಿಕ್ಕಿ ಹೊಡೆದಿದೆ. ಬೆಂಗಳೂರಿನ ರಾಮೋನಹಳ್ಳಿಯ ನಾಲ್ವರು ಕಾರಿನಲ್ಲಿದ್ದರು. ಇವರಲ್ಲಿ 3 ಜನರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಶವಗಳ ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಕ್ಕೆ ಹಸ್ತಾಂತರ ಮಾಡಲಾಗಿದೆ.












Click it and Unblock the Notifications