ಪೊಲೀಸ್ ಭದ್ರತೆಯಲ್ಲಿ ಅಯ್ಯಪ್ಪನ ದರ್ಶನ ಪಡೆದ 52ರ ಮಹಿಳೆ
ತಿರುವನಂತಪುರಂ, ನವೆಂಬರ್ 06 : ಐವತ್ತೆರಡು ವರ್ಷದ ಲಲಿತಾ ಎಂಬುವವರನ್ನು ಶಬರಿಮಲೆಯ ಅಯ್ಯಪ್ಪ ದೇಗುಲದೊಳಗೆ ಸಂಪೂರ್ಣ ಪೊಲೀಸ್ ಭದ್ರತೆಯಲ್ಲಿ ಕರೆದೊಯ್ಯಲಾಗಿದ್ದು, ಈ ಸಂದರ್ಭದಲ್ಲಿ ಕೆಲ ಭಕ್ತರು ಪ್ರತಿಭಟನೆ ನಡೆಸಿದ್ದಾರೆ.
ಈ ಘಟನೆಯನ್ನು ಚಿತ್ರೀಕರಿಸುತ್ತಿದ್ದ ಮಾಧ್ಯಮದವರ ಮೇಲೆ ಉಗ್ರರೂಪಿ ಭಕ್ತಾದಿಗಳು ಹಲ್ಲೆ ಮಾಡಿದ್ದರಿಂದ ಓರ್ವ ಕ್ಯಾಮೆರಾಮನ್ ಗೆ ಗಾಯಗಳಾಗಿವೆ. ಓರ್ವ ಮಹಿಳೆ ಸನ್ನಿಧಾನದೊಳಗೆ ಪ್ರವೇಶಿಸುತ್ತಿದ್ದಾರೆ ಎಂದು ತಿಳಿಯುತ್ತಿದ್ದಂತೆ ನೂರಾರು ಭಕ್ತರು ಅಲ್ಲಿ ಜಮಾಯಿಸಿದ್ದರು.
52 ವರ್ಷದ ತ್ರಿಸ್ಸೂರ್ ನ ಲಲಿತಾ ಅವರು ತಮ್ಮ ಕುಟುಂಬದವರೊಡನೆ ಅಯ್ಯಪ್ಪ ಸ್ವಾಮಿಯ ದರುಶನಕ್ಕೆ ಬಂದಿದ್ದರು. ಅವರು ಋತುಮತಿಯಾಗಿರಬಹುದು ಎಂದು ಊಹಿಸಿದ ಭಕ್ತಾದಿಗಳು ಲಲಿತಾ ಅವರ ಪ್ರವೇಶಕ್ಕೆ ಅಡ್ಡಿಯೊಡ್ಡಿ ಪ್ರತಿಭಟನೆಗಿಳಿದರು.

"ನನಗೆ (ಭಕ್ತಾದಿಗಳ) ಯಾವುದೇ ಭಯವಿಲ್ಲ. ನನಗೆ ಅಯ್ಯಪ್ಪ ದೇವರ ದರ್ಶನ ಸಿಗಬೇಕು ಅಷ್ಟೇ" ಎಂದು ಲಲಿತಾ ಅವರು ಮಾಧ್ಯಮಗಳೆದಿರು ಹೇಳಿಕೆ ನೀಡಿದರು. ಭಾರೀ ಬಿಗಿ ಭದ್ರತೆಯ ನಡುವೆ ಕೇವಲ ಎರಡು ದಿನಗಳ ವಿಶೇಷ ಪೂಜೆಗಾಗಿ ಸೋಮವಾರದಂದು ಅಯ್ಯಪ್ಪ ದೇವಸ್ಥಾನ ತೆರೆಯಲಾಗಿದೆ.
ಸೆಪ್ಟೆಂಬರ್ 28ರಂದು ಸರ್ವೋಚ್ಚ ನ್ಯಾಯಾಲಯ, ಮಹಿಳೆಯರಿಗೂ ದೇಗುಲ ಪ್ರವೇಶಿಸಲು ಅವಕಾಶ ಮಾಡಿಕೊಡಬೇಕು ಎಂದು ಐತಿಹಾಸಿಕ ತೀರ್ಪು ನೀಡಿದ ನಂತರ, 10ರಿಂದ 50 ವರ್ಷದೊಳಗಿನ ಯಾವ ಮಹಿಳೆಯೂ ಇಲ್ಲಿಯವರೆಗೆ ಅಯ್ಯಪ್ಪ ದೇವಸ್ಥಾನದ ಗರ್ಭಗುಡಿ ಪ್ರವೇಶಿಸಿಲ್ಲ. ಪ್ರವೇಶಿಸಲು ಅವಕಾಶವನ್ನೂ ಮಾಡಿಕೊಡಲಾಗಿಲ್ಲ.
#Kerala: Lalitha (Pic 1: in the centre), a 52-year-old woman devotee from Thrissur, whose entry to #SabarimalTemple was opposed by protesters, offered prayers at the temple under police protection. She had come along with her family. pic.twitter.com/RdJeWflhk4
— ANI (@ANI) November 6, 2018
ಸೋಮವಾರ, ತನ್ನ ಗಂಡ ಮತ್ತು ಇಬ್ಬರು ಮಕ್ಕಳೊಂದಿಗೆ 25 ವರ್ಷದ ಮಹಿಳೆಯೋರ್ವಳು ಪ್ರವೇಶಿಸಲು ಯತ್ನಿಸಿದ್ದರು. ಆದರೆ, ಅವರನ್ನು ಪಂಬ ಬಳಿಯೇ ತಡೆಗಟ್ಟಲಾಯಿತು. ಅಲ್ಲಿಂದಲೇ ಬೆಟ್ಟದ ಮೇಲಿನ ದೇಗುಲಕ್ಕೆ ನಡಿಗೆ ಆರಂಭವಾಗುತ್ತದೆ.
ಮಹಿಳೆಯರ ಪ್ರವೇಶಕ್ಕೆ ಸುಪ್ರೀಂ ಕೋರ್ಟ್ ಅವಕಾಶ ನೀಡಿದ್ದರೂ ಭಕ್ತಾದಿಗಳ ಭಾರೀ ಪ್ರತಿಭಟನೆಯಿಂದಾಗಿ ಶಬರಿಮಲೆಯಲ್ಲಿ ತ್ವೇಷಮಯ ಪರಿಸ್ಥಿತಿ ನಿರ್ಮಾಣವಾಗಿದೆ. ಇಡೀ ಶಬರಿಮಲೆ ಭದ್ರತಾ ಸಿಬ್ಬಂದಿಗಳಿಂದ ತುಂಬಿಹೋಗಿದೆ. ಕಮಾಂಡೋಗಳ ಸಹಿತ ನೂರಾರು ಪೊಲೀಸ್ ಸಿಬ್ಬಂದಿಗಳು ಯಾವುದೇ ಅವಘಡ ನಡೆಯದಂತೆ ಎಚ್ಚರಿಕೆ ವಹಿಸಿದ್ದಾರೆ.












Click it and Unblock the Notifications