ಎರಡನೇ ಹೆಂಡತಿ ವಿಷಯ ಮುಚ್ಚಿಟ್ಟಿದ್ದೇಕೆ?; ಕೇರಳ ಎಡಪಕ್ಷದ ಅಭ್ಯರ್ಥಿ ಮುಂದೆದ್ದ ಪ್ರಶ್ನೆ
ಮಲಪ್ಪುರಂ, ಮಾರ್ಚ್ 23: ಏಪ್ರಿಲ್ 6ರಂದು ನಡೆಯಲಿರುವ ಕೇರಳ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಅಂತಿಮವಾಗಿದೆ. ಆದರೆ ಕೇರಳದ ಎಡಪಕ್ಷ ಅಭ್ಯರ್ಥಿ ಕೆ.ಟಿ. ಸುಲೈಮಾನ್ ಹಾಜಿ ಅವರ ನಾಮಪತ್ರದ ಬಗ್ಗೆ ಕೇಂದ್ರ ಸಚಿವ ವಿ. ಮುರಳೀಧರನ್ ಪ್ರಶ್ನೆ ಎತ್ತಿದ್ದಾರೆ. ಅವರ ಎರಡನೇ ಹೆಂಡತಿ ವಿವರವನ್ನು ಏಕೆ ಸಾರ್ವಜನಿಕ ವಲಯದಿಂದ ಮರೆ ಮಾಚಲಾಗಿದೆ ಎಂದು ಕೇಳಿದ್ದಾರೆ.
ಈ ಬಗ್ಗೆ ದೂರಿರುವ ಅವರು, "ಕೊಂಡೊಟ್ಟಿಯಲ್ಲಿ ಸಿಪಿಐಎಂ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ಕೆ.ಟಿ. ಸುಲೈಮಾನ್ ಹಾಜಿ ಅವರು ಪಾಕಿಸ್ತಾನದಲ್ಲಿರುವ ತಮ್ಮ ಎರಡನೇ ಹೆಂಡತಿ ವಿಷಯವನ್ನು ಮುಚ್ಚಿಟ್ಟಿದ್ದಾರೆ. ಈ ವಿಷಯದಲ್ಲಿ ತಮ್ಮನ್ನು ತಾವು ಉದಾರವಾದಿ ಎಂದು ಕರೆದುಕೊಂಡಿರುವ ಪಿಣರಾಯಿ ವಿಜಯನ್ ಅವರ ಮೌನದ ಮೇಲೆ ಯಾರೂ ಅವಲಂಬಿತವಾಗುವಂತಿಲ್ಲ" ಎಂದು ಟೀಕಿಸಿದ್ದಾರೆ. ಮುಂದೆ ಓದಿ...
"ಎರಡನೇ ಹೆಂಡತಿ ವಿಷಯ ಏಕೆ ಮುಚ್ಚಿಟ್ಟಿರಿ?"
ಕೆ.ಟಿ.ಸುಲೈಮಾನ್ ಅವರು ಸಲ್ಲಿಸಿರುವ ನಾಮಪತ್ರದಲ್ಲಿ, ಪಾಕಿಸ್ತಾನದಲ್ಲಿ ನೆಲೆಸಿರುವ ತಮ್ಮ ಎರಡನೇ ಹೆಂಡತಿ ಬಗ್ಗೆ ವಿವರ ನೀಡಿಲ್ಲ. 19 ವಯಸ್ಸಿನ ತಮ್ಮ ಎರಡನೇ ಹೆಂಡತಿ ಹೆಸರನ್ನು ನಾಮಪತ್ರದಲ್ಲಿ ಉಲ್ಲೇಖಿಸಿಲ್ಲ ಎಂದು ಟ್ವೀಟ್ ಮಾಡಿ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಜೆಪಿ ನಡ್ಡಾ ಹಾಗೂ ಪಕ್ಷದ ಅಧ್ಯಕ್ಷ ಕೆ ಸುರೇಂದ್ರನ್ ಅವರಿಗೆ ಟ್ಯಾಗ್ ಮಾಡಿದ್ದಾರೆ.
ಕೇರಳ ಚುನಾವಣೆ: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಸ್ತಿ ಘೋಷಣೆ
|
"ಜನರು ವಿವರಣೆ ಬಯಸುತ್ತಾರೆ"
ಈ ವಿಷಯದ ಕುರಿತು ಸಿಎಂ ಪಿಣರಾಯಿ ವಿಜಯನ್ ಅವರ ಮೌನವನ್ನು ಖಂಡಿಸಿರುವ ಅವರು, "ಜನರು ಈ ವಿಷಯದಲ್ಲಿ ವಿವರಣೆ ಬಯಸುತ್ತಾರೆ. ಅದರಲ್ಲೂ ಶಾಸಕನಾಗಲು ತಯಾರಿ ನಡೆಸುತ್ತಿರುವ ವ್ಯಕ್ತಿಯು ತನ್ನ ಹೆಂಡತಿ, ವಿದೇಶಿ ಪ್ರಜೆಯ ವಿವರಗಳನ್ನು ಮುಚ್ಚಿಟ್ಟಿದ್ದಾಗ ವಿವರಣೆ ಅವಶ್ಯಕವಾಗಿದೆ" ಎಂದು ಇನ್ನೊಂದು ಟ್ವೀಟ್ ಮಾಡಿದ್ದಾರೆ.
ನಾಮಪತ್ರ ತಡೆಹಿಡಿದಿದ್ದ ಚುನಾವಣಾ ಆಯೋಗ
ಕೆ.ಟಿ.ಸುಲೈಮಾನ್ ಅವರು ಸಲ್ಲಿಸಿದ್ದ ನಾಮಪತ್ರವನ್ನು ಮೊದಲ ಹಂತದ ಪರಿಶೀಲನೆ ಸಮಯ ಚುನಾವಣಾ ಆಯೋಗ ಮಾರ್ಚ್ 20ರಂದು ತಡೆಹಿಡಿದಿತ್ತು. ಆದರೆ ಆನಂತರ ಅದನ್ನು ಅಧ್ಯಕ್ಷರು ಸ್ವೀಕರಿಸಿದ್ದರು. ಈ ಬಗ್ಗೆ ಮುರಳೀಧರನ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು. ನಾಮಪತ್ರ ಸಲ್ಲಿಕೆಯಲ್ಲಿ ವಂಚನೆ ನಡೆದಿದೆ ಎಂದು ಪಿಣರಾಯಿ ವಿರುದ್ಧ ದೂರಿದ್ದರು.
ಕೇರಳ ಚುನಾವಣೆ: ಸಿಪಿಐ(ಎಂ)ನಿಂದ 83 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ, ಧರ್ಮದಂನಿಂದ ಪಿಣರಾಯಿ ವಿಜಯನ್ ಸ್ಪರ್ಧೆ
ದುಬೈನಲ್ಲಿ ಮದುವೆ ನಡೆದಿದ್ದಕ್ಕೆ ಸಾಕ್ಷ್ಯ
ಸುಲೈಮಾನ್ ಅವರು ದುಬೈನಲ್ಲಿ ಎರಡನೇ ಮದುವೆಯಾಗಿದ್ದಾರೆ ಎಂದು ಮುಸ್ಲಿಂ ಲೀಗ್ ಮುಖಂಡರು ದೂರಿದ್ದರು. ಎರಡನೇ ಹೆಂಡತಿ ಬೇರೆ ದೇಶದಲ್ಲಿ ನೆಲೆಸಿದ್ದಾರೆ ಎಂದು ದುಬೈನಲ್ಲಿ ನಡೆದಿದೆ ಎನ್ನಲಾದ ಲಗ್ನಪತ್ರಿಕೆ ಸಾಕ್ಷ್ಯವನ್ನೂ ನೀಡಿದ್ದರು. ಪಾಕಿಸ್ತಾನದ ರಾವಲ್ಪಿಂಡಿಯ ಹೀರಾ ಮೊಹಮದ್ ಸಫ್ದರ್ ಇವರ ಎರಡನೇ ಹೆಂಡತಿ ಎನ್ನಲಾಗಿದೆ.
140 ಸದಸ್ಯಬಲದ ಕೇರಳ ವಿಧಾನಸಭೆ ಚುನಾವಣೆಯು ಏಪ್ರಿಲ್ 6ರಂದು ನಡೆಯಲಿದೆ. ಚುನಾವಣೆಗೆ ರಾಜ್ಯದಲ್ಲಿ ಸರ್ವ ಸಿದ್ಧತೆ ನಡೆಯುತ್ತಿದೆ.