ಹೊಗಳಿಕೆಗಿಂತ ನಮಗೆ ಹಣದ ಅವಶ್ಯಕತೆ ಇದೆ: ಕೇರಳ
ತಿರುವನಂತಪುರಂ, ಏಪ್ರಿಲ್ 14: ಕೇರಳದಲ್ಲಿ ಕೊವಿಡ್ ನಿಯಂತ್ರಣಕ್ಕೆ ಬಂದಿದೆ ಎನ್ನಲಾಗಿದೆ. ಕಳೆದ ಎರಡ್ಮೂರು ದಿನ ಅಂಕಿ ಅಂಶ ಗಮನಿಸಿದರೆ ಕೇರಳದಲ್ಲಿ ಕೊರೊನಾ ಸೋಂಕು ಹರಡುವಿಕೆ ಕಮ್ಮಿಯಾಗಿದ್ದು, ಸೋಂಕು ತಡೆಯುವಲ್ಲಿ ಕೇರಳ ಸರ್ಕಾರ ಯಶಸ್ಸಿನ ಹಾದಿಯಲ್ಲಿದೆ ಎಂದು ಹೇಳಲಾಗುತ್ತಿದೆ.
ಕೇರಳ ಹೋರಾಟಕ್ಕೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕೊವಿಡ್ ವಿರುದ್ಧ ಕೇರಳ ಸರ್ಕಾರ ಸಮರ್ಪಕವಾಗಿ ಫೈಟ್ ಮಾಡುತ್ತಿದೆ, ಬಹುಶಃ ಭಾರತದಲ್ಲಿ ಕೇರಳ ಮೊದಲ ಕೊರೊನಾ ಮುಕ್ತ ರಾಜ್ಯವಾಗಲಿದೆ ಎನ್ನುತ್ತಿದ್ದಾರೆ.
ಕೇರಳ ವಿಚಾರದಲ್ಲಿ ಇದು ಸಂತಸದ ಸುದ್ದಿಯಾದರೂ, ಈ ಬಗ್ಗೆ ಹಣಕಾಸು ಸಚಿವ ಥಾಮಸ್ ಐಸಾಕ್ ನಿರಾಸೆಯ ಮಾತುಗಳನ್ನಾಡಿದ್ದಾರೆ. ಮುಂದೆ ಓದಿ....

ಹೊಗಳಿಕೆಗಿಂತ ಹಣ ಅವಶ್ಯಕತೆ ಹೆಚ್ಚಿದೆ
ಮೇ 3ರ ತನಕ ಲಾಕ್ಡೌನ್ ವಿಸ್ತರಣೆಯ ಘೋಷಣೆ ಆದ ಬಳಿಕ ಪ್ರತಿಕ್ರಿಯೆ ನೀಡಿದ ಕೇರಳ ಹಣಕಾಸು ಸಚಿವ ಥಾಮಸ್ ಐಸಾಕ್, ''ಕೊರೊನಾ ವಿರುದ್ಧ ಹೋರಾಡಲು ಮತ್ತು ಅದಕ್ಕೆ ಸಂಬಂಧಿಸಿದ ಮುಂಜಾಗ್ರತೆ ಕ್ರಮ ಜರುಗಿಸಲು ಹೊಗಳಿಕೆಗಿಂತ ನಮಗೆ ಹಣದ ಅವಶ್ಯಕತೆ ಇದೆ'' ಎಂದಿದ್ದಾರೆ.

ನಮಗೆ ಸಿಕ್ಕಿದ್ದು 230 ಕೋಟಿ ಅಷ್ಟೇ
'ಕೊವಿಡ್ ವಿರುದ್ಧ ಸೆಣಸಾಡಲು ಕೇರಳಕ್ಕೆ ಸಿಕ್ಕಿರುವ ಹಣ ಕೇವಲ 230 ಕೋಟಿ ಮಾತ್ರ. ಇದರಿಂದ ರಾಜ್ಯದಲ್ಲಿ ಉಂಟಾಗಿರುವ ಆರ್ಥಿಕತೆಯನ್ನು ಬಲಪಡಿಸಲು ಹಾಗೂ ಆದಾಯದ ಕೊರತೆಯನ್ನು ಎದುರಿಸಲು ಬಹಳ ಕಷ್ಟವಾಗಿದೆ' ಎಂದು ಹೇಳುವ ಮೂಲಕ ಕೇಂದ್ರದಿಂದ ಹೆಚ್ಚಿನ ಅನುದಾನದ ನಿರೀಕ್ಷೆಯಲ್ಲಿದ್ದೇವೆ ಎಂದಿದ್ದಾರೆ.

ಹಣಕಾಸು ಸಚಿವರ ಜೊತೆ ಚರ್ಚಿಸಲಿ
'ಎಲ್ಲ ರಾಜ್ಯಗಳ ಹಣಕಾಸು ಸಚಿವರ ಜೊತೆ ಕೇಂದ್ರ ಸರ್ಕಾರವೂ ತಕ್ಷಣ ವಿಡಿಯೋ ಕಾನ್ಫೆರೆನ್ಸ್ ಮೂಲಕ ಸಭೆ ನಡೆಸುವುದು ಅಗತ್ಯ. ಕೇಂದ್ರವೂ ಆರ್ ಬಿ ಐನಿಂದ ಹಣವನ್ನು ಪಡೆದು ರಾಜ್ಯಗಳಿಗೆ ನೀಡಬೇಕಾಗಿದೆ. ಇಲ್ಲವಾದಲ್ಲಿ ಆರ್ಥಿಕತೆ ಭಾರಿ ಕುಸಿತ ಕಾಣಲಿದೆ. ಈ ಬಗ್ಗೆ ಬಹಳ ಗಂಭೀರವಾಗಿ ಪರಿಗಣಿಸಬೇಕು' ಎಂದು ಒತ್ತಾಯಿಸಿದ್ದಾರೆ.

ಚೇತರಿಕೆ ಕಂಡ ಕೇರಳ
ಭಾರತದಲ್ಲಿ ಮೊದಲ ಕೊರೊನಾ ಕೇಸ್ ಪತ್ತೆಯಾಗಿದ್ದು ಕೇರಳದಲ್ಲಿ. ಆರಂಭದ ದಿನಗಳಲ್ಲಿ ಕೇರಳ ಅಗ್ರಸ್ಥಾನದಲ್ಲಿತ್ತು. ಇದೀಗ, ಕೇರಳ ಹತ್ತನೇ ಸ್ಥಾನಕ್ಕೆ ಕುಸಿದಿದೆ. ಸದ್ಯದ ವರದಿ ಪ್ರಕಾರ, ಕೇರಳದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 378. ಇಬ್ಬರು ಮಾತ್ರ ಸಾವನ್ನಪ್ಪಿದ್ದಾರೆ. ಇನ್ನು 198 ಜನರು ಕೊರೊನಾದಿಂದ ಚೇತರಿಕೆ ಕಂಡಿದ್ದಾರೆ. ಚೇತರಿಕೆ ಕಂಡವರ ಪೈಕಿ ಕೇರಳ ಉಳಿದ ರಾಜ್ಯಗಳಿಗೆ ಹೋಲಿಸಿಕೊಂಡರೆ ಬಹಳ ದೊಟ್ಟ ಮಟ್ಟದ ಮುನ್ನಡೆ ಸಾಧಿಸಿದೆ.












Click it and Unblock the Notifications