ಶಬರಿಮಲೆ ದೇವಾಲಯ ಪ್ರವೇಶಿಸಿದ 'ಅವಳು' ಬ್ರಾಹ್ಮಣ ಕುಟುಂಬದವಳು
Recommended Video

ಧಾರ್ಮಿಕ ಸಂಪ್ರದಾಯ, ಆಚರಣೆ ಪಾಲಿಸುವಲ್ಲಿ ಮಂಚೂಣಿಯಲ್ಲಿ ಬರುವ ಬ್ರಾಹ್ಮಣ ಕುಟುಂಬದರಿಂದಲೇ ಶಬರಿಮಲೆ ದೇವಾಲಯದಲ್ಲಿ ಶತಮಾನಗಳಿಂದ ನಡೆದುಕೊಂಡು ಬರುತ್ತಿರುವ ಕಟ್ಟುಪಾಡಿಗೆ ಧಕ್ಕೆಯಾಯಿತೇ?
ಹತ್ತರಿಂದ ಐವತ್ತು ವರ್ಷದೊಳಗಿನ ಮಹಿಳೆಯರಿಗೆ ದೇವಾಲಯ ಪ್ರವೇಶಕ್ಕೆ ಇದ್ದ ನಿರ್ಬಂಧವನ್ನು ಸುಪ್ರೀಂಕೋರ್ಟ್ ತೆರವುಗೊಳಿಸಿದ ನಂತರ, ಹಲವು ಮಹಿಳೆಯರು ಮತ್ತು ಮಹಿಳಾ ಹೋರಾಟಗಾರ್ತಿಯರು ದೇವಾಲಯ ಪ್ರವೇಶಕ್ಕೆ ವಿಫಲ ಯತ್ನ ನಡೆಸಿದ್ದರು.
ಆದರೆ, ಮಕರವಿಳಕ್ಕು ಆಚರಣೆಗೆ ಸಂಬಂಧ ದೇವಾಲಯ ತೆರೆದಿದ್ದ ಸಂದರ್ಭದಲ್ಲಿ, ಬುಧವಾರ (ಜ 2) ನಸುಕಿನ 3.30ಕ್ಕೆ ಇಬ್ಬರು ಮಹಿಳೆಯರು ಅಯ್ಯಪ್ಪ ದೇಗುಲ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆ ಮೂಲಕ, ಪಿಣರಾಯಿ ಸರಕಾರದ ಹಠ ಕೊನೆಗೂ ಗೆದ್ದಂತಾಗಿದೆ.
ಈ ಇಬ್ಬರ ಮನೆಯ ಮುಂದೆ ಕಳೆದ ಬಾರಿ ಭಾರೀ ಪ್ರತಿಭಟನೆಗಳು ನಡೆದಿದ್ದವು. ಏನೇ ಆಗಲಿ ಅಯ್ಯಪ್ಪನ ದರುಶನ ಮಾಡೇ ತೀರುತ್ತೇವೆ ಎಂದು ಪ್ರತಿಭಟನಾಕಾರರಿಗೆ ಸವಾಲು ಹಾಕಿದ್ದ ಇಬ್ಬರೂ, ಕಳೆದ ಬಾರಿ ಅಯ್ಯಪ್ಪ ದೇಗುಲದ ಬಳಿ ಬಂದಿದ್ದರು. ಆದರೆ, ಕಡೆಯ ಘಳಿಗೆಯಲ್ಲಿ ಪ್ರತಿಭಟನಾಕಾರರಿಗೆ ಮಣಿದು ಅವರನ್ನು ವಾಪಸ್ ಕಳುಹಿಸಬೇಕಾಗಿತ್ತು. ಆದರೆ, ಈ ಬಾರಿ ಪೊಲೀಸರ ಸಹಾಯದಿಂದ ಇಬ್ಬರೂ ದರ್ಶನ ಪಡೆಯಲು ಯಶಸ್ವಿಯಾಗಿದ್ದಾರೆ.
ದೇವಾಲಯ ಪ್ರವೇಶಿಸಿದ ಇಬ್ಬರು ಮಹಿಳೆಯರು ಅಂದರೆ ಒಬ್ಬರು ಬಿಂದು ಅಮ್ಮಣ್ಣಿ ದಲಿತ ಸಮುದಾಯದವರಾದರೆ, ಇನ್ನೊಬ್ಬರು ಮಹಿಳೆ ಕನಕದುರ್ಗ, ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು ಎನ್ನುವುದು ಗಮನಿಸಬೇಕಾದ ವಿಚಾರ. ಇವರ ಹಿನ್ನೆಲೆ ಏನು?

ಬೆಳ್ಳಂಬೆಳಗ್ಗೆ ದೇಶಾದ್ಯಂತ ಭಾರೀ ಸಂಚಲನ
ಶಬರಿಮಲೆ ದೇವಾಲಯಕ್ಕೆ ಇಬ್ಬರು ಮಹಿಳೆಯರು ಪ್ರವೇಶಿಸಿದ್ದಾರೆ ಎನ್ನುವ ಸುದ್ದಿ ಬೆಳ್ಳಂಬೆಳಗ್ಗೆ ದೇಶಾದ್ಯಂತ ಭಾರೀ ಸಂಚಲನ ಉಂಟುಮಾಡಿತ್ತು. ಬಿಂದು ಮತ್ತು ಕನಕದುರ್ಗ ದೇವಾಲಯಕ್ಕೆ ಇರುಮುಡಿ ಇಲ್ಲದೇ, ವಿಐಪಿ ಬಾಗಿಲಿನಿಂದ ಪ್ರವೇಶಿಸಿದ ವಿಡಿಯೋ ವೈರಲ್ ಆಗಿತ್ತು.

ದೇವಾಲಯದ ಪ್ರಮುಖ ಅರ್ಚಕ ರಾಜೀವರಾರು
ಮಹಿಳೆಯರು ದೇವಾಲಯ ಪ್ರವೇಶಿಸಿದ ಸುದ್ದಿ ತಿಳಿಯುತ್ತಿದ್ದಂತೆಯೇ, ಶುದ್ದೀಕರಣಕ್ಕಾಗಿ ದೇಗುಲದ ಬಾಗಿಲು ಮುಚ್ಚಿದ್ದು ಕೂಡಾ ಭಾರೀ ಚರ್ಚೆಗೆ ನಾಂದಿ ಹಾಡಿತ್ತು. ಪಂದಾಳ ರಾಜಮನೆತನದ ಆದೇಶದಂತೆ, ದೇವಾಲಯದ ಪ್ರಮುಖ ಅರ್ಚಕ ರಾಜೀವರಾರು, ದೇಗುಲ ಶುದ್ದಿಗೊಳಿಸುವಂತೆ ಅರ್ಚಕ ವೃಂದಕ್ಕೆ ಸೂಚಿಸಿದ್ದರು. ಇದು ಪಿಣರಾಯಿ ವಿಜಯನ್ ಸರಕಾರದ ಕೆಂಗಣ್ಣಿಗೂ ಕಾರಣವಾಗಿದೆ.

ಬ್ರಾಹ್ಮಣ ಸಮುದಾಯದ, ಅಪ್ಪಟ ಅಯ್ಯಪ್ಪ ಭಕ್ತೆ
ದೇವಾಲಯ ಪ್ರವೇಶಿಸಿದ್ದ ಕನಕದುರ್ಗ ಮೂಲತಃ ಬ್ರಾಹ್ಮಣ ಸಮುದಾಯದವರು. ಅಪ್ಪಟ ಅಯ್ಯಪ್ಪ ಭಕ್ತೆಯಾಗಿರುವ ಕನಕಗೆ ಹಿಂದಿನಿಂದಲೂ ಶಬರಿಮಲೆ ದೇವಾಲಯಕ್ಕೆ ಒಮ್ಮೆ ಹೋಗಬೇಕು ಎನ್ನುವ ಬಯಕೆ. ಕೇರಳದ ಮಲಪ್ಪುರಂ ಜಿಲ್ಲೆಯ ಅಂಗಡಿಪುರಂ ನಿವಾಸಿ. ಕೇರಳ ಸರಕಾರದ ನಾಗರಿಕ ಮತ್ತು ಪೂರೈಕೆ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ಇವರು ಕೆಲಸ ನಿರ್ವಹಿಸುತ್ತಿದ್ದಾರೆ.

ಬಿಂದು ಅಮ್ಮಣ್ಣಿ ದಲಿತ ಸಮುದಾಯದವರು
ಇನ್ನೊಬ್ಬರು ಬಿಂದು ಅಮ್ಮಣ್ಣಿ ದಲಿತ ಸಮುದಾಯದವರು. ಕೋಳಿಕ್ಕೋಡ್ ಜಿಲ್ಲೆಯ ನಿವಾಸಿಯಾಗಿರುವ ಬಿಂದು, ದಲಿತ ಹೋರಾಟಗಾರ್ತಿ ಕೂಡಾ. ಆರಂಭದಲ್ಲಿ ಕಮ್ಯೂನಿಸ್ಟ್ ಪಕ್ಷದ ಜೊತೆಗೆ ಗುರುತಿಸಿಕೊಂಡಿದ್ದರೂ, ನಂತರ ಭಿನ್ನಾಭಿಪ್ರಾಯ ತೋರಿದ ಹಿನ್ನಲೆಯಲ್ಲಿ ಯಾವುದೇ ರಾಜಕೀಯ ಪಕ್ಷದ ಜೊತೆಗೆ ತಮ್ಮನ್ನು ಗುರುತಿಸಿಕೊಂಡಿರಲಿಲ್ಲ.

ಪಿಣರಾಯಿ ಒಬ್ಬ ಆಧುನಿಕ ಔರಂಗಜೇಬ್
ಶಬರಿಮಲೆ ದೇವಾಯಲದಲ್ಲಿ ಬುಧವಾರ ನಡೆದ ಘಟನೆಯನ್ನು ಪ್ರತಿಭಟಿಸಿ, ಕೇರಳದಲ್ಲಿ ವಿವಿಧ ಹಿಂದೂಪರ ಸಂಘಟನೆಗಳು ಹರತಾಳಕ್ಕೆ ಕರೆನೀಡಿವೆ. ಕೇರಳದ ಹಲವು ಜಿಲ್ಲೆಗಳಲ್ಲಿ ಭಾರೀ ಪ್ರತಿಭಟನೆ ನಡೆಯುತ್ತಿದೆ. ಪಿಣರಾಯಿ ಸರಕಾರ ಭಾರೀ ಷಡ್ಯಂತ್ರ ನಡೆಸಿದೆ ಎನ್ನುವುದು ಕಾಂಗ್ರೆಸ್ ಆರೋಪವಾದರೆ, ಪಿಣರಾಯಿ ಒಬ್ಬ ಆಧುನಿಕ ಔರಂಗಜೇಬ್ ಎಂದು ಬಿಜೆಪಿ ಟೀಕಿಸಿದೆ.












Click it and Unblock the Notifications