ಪ್ರವಾಸೋದ್ಯಮಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಿದ ಕೇರಳ
ತಿರುವನಂತಪುರಂ, ಆಗಸ್ಟ್ 19 : ಕೇರಳ ರಾಜ್ಯದಲ್ಲಿ ಅತಿ ಹೆಚ್ಚು ಆದಾಯ ತಂದು ಕೊಡುವ ಕ್ಷೇತ್ರ ಪ್ರವಾಸೋದ್ಯಮ. ಈ ವರ್ಷ ಕೋವಿಡ್ ಭೀತಿಯ ಕಾರಣದಿಂದಾಗಿ ಪ್ರವಾಸೋದ್ಯಮ ಕ್ಷೇತ್ರಕ್ಕೆ ಅಪಾರವಾದ ನಷ್ಟ ಉಂಟಾಗಿದೆ. ರಾಜ್ಯ ಸರ್ಕಾರ ಪ್ರವಾಸೋದ್ಯಮ ವಲಯಕ್ಕೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ.
Recommended Video
ಕೇರಳದ ಪ್ರವಾಸೋದ್ಯಮ ಸಚಿವ ಕಡಂಪಲ್ಲಿ ಸುರೇಂದ್ರನ್ ಅವರು, "ಕೋವಿಡ್ ಪರಿಸ್ಥಿತಿಯ ಕಾರಣದಿಂದಾಗಿ ಪ್ರವಾಸೋದ್ಯಮಕ್ಕೆ ಸುಮಾರು 25,000 ಕೋಟಿ ನಷ್ಟ ಉಂಟಾಗಿದೆ" ಎಂದು ಹೇಳಿದ್ದಾರೆ.
ಪ್ರವಾಸೋದ್ಯಮ ಕ್ಷೇತ್ರಕ್ಕೆ ನಷ್ಟ ಉಂಟಾಗಿರುವುದರಿಂದ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುವ ಸಾವಿರಾರು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ, ಸರ್ಕಾರ ಪ್ರವಾಸೋದ್ಯಮ ಕ್ಷೇತ್ರಕ್ಕೆ 455 ಕೋಟಿ ರೂ. ವೆಚ್ಚದ ಪ್ಯಾಕೇಜ್ ಘೋಷಣೆ ಮಾಡಿದೆ.

ಪ್ರವಾಸೋದ್ಯಮ ಚಟುವಟಿಕೆಗಳನ್ನು ಪುನಃ ಆರಂಭಿಸಲು ಕೇರಳದ ಬ್ಯಾಂಕ್ಗಳು ಸಾಲವನ್ನು ನೀಡಲಿವೆ. ಇದರ ಬಡ್ಡಿ ದರ ಕೇವಲ ಶೇ 3ರಷ್ಟು ಆಗಿರುತ್ತದೆ. ಸಾಲ ಮರುಪಾವತಿ ಅವಧಿ 6 ತಿಂಗಳ ಬಳಿಕ ಆರಂಭವಾಗಲಿದೆ.
ಕೊಟ್ಟಾಯಂನಲ್ಲಿ ಸುಮಾರು 2,300 ಬೋಟ್ ಹೌಸ್ಗಳಿವೆ. ಆದರೆ, ಕೆಲವು ತಿಂಗಳುಗಳಿಂದ ಪ್ರವಾಸಿಗರು ಇಲ್ಲದೇ ಇವುಗಳಿಗೆ ನಷ್ಟವಾಗಿದೆ. ಇದರಿಂದಾಗಿ ಸುಮಾರು 20 ಸಾವಿರ ಕುಟುಂಬಗಳಿಗೆ ಜೀವನಾಧಾರಕ್ಕೆ ತೊಂದರೆಯಾಗಿದೆ.
2019ರಲ್ಲಿ ಕೇರಳ ರಾಜ್ಯಕ್ಕೆ 1.96 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದರು. ಇವರಲ್ಲಿ ದೇಶಿಯ ಮತ್ತು ವಿದೇಶಿ ಪ್ರವಾಸಿಗರು ಸೇರಿದ್ದರು. 2018ಕ್ಕೆ ಹೋಲಿಕೆ ಮಾಡಿದರೆ ಕಳೆದ ವರ್ಷ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಶೇ 17.2ರಷ್ಟು ಹೆಚ್ಚು ಆದಾಯ ಬಂದಿತ್ತು.
ಕೇರಳದಲ್ಲಿ ಪ್ರಸ್ತುತ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 47,898. ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಪ್ರವಾಸಿಗರ ಭೇಟಿಯೂ ಕಡಿಮೆಯಾಗಿದೆ.












Click it and Unblock the Notifications