ಶಬರಿಮಲೆ: ಕೇರಳ ಸಿಎಂ ಪಿಣರಾಯಿ ಮುಂದಿಟ್ಟ ಹೊಸ ಸೂತ್ರಕ್ಕೆ ತಂತ್ರಿಗಳೇ ಬೇಸ್ತು?
ತಿರುವನಂತಪುರಂ, ನ 15: ಶತಾಯಗತಾಯು ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಪಾಲಿಸಲೇಬೇಕು ಎಂದು ಹೊರಟಿರುವ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಶಬರಿಮಲೆ ದೇವಾಲಯದ ಪೂಜಾ ಕೈಂಕರ್ಯಗಳನ್ನು ನೋಡಿಕೊಳ್ಳುವ ತಂತ್ರಿಗಳ ಮುಂದೆ ಹೊಸ ಸೂತ್ರವನ್ನು ಮುಂದಿಟ್ಟಿದ್ದಾರೆ.
ಕಾಂಗ್ರೆಸ್ ಮತ್ತು ಬಿಜೆಪಿ, ಶಬರಿಮಲೆ ವಿಚಾರವನ್ನು ವೋಟ್ ಬ್ಯಾಂಕ್ ರೀತಿಯಲ್ಲಿ ನೋಡುತ್ತಿದೆ ಎಂದು ಹೇಳುತ್ತಿರುವ ಪಿಣರಾಯಿ, ಅತ್ತ ಸುಪ್ರೀಂಕೋರ್ಟ್ ಆದೇಶಕ್ಕೂ ಬೆಲೆಕೊಟ್ಟು, ಇತ್ತ ಮಹಿಳೆಯರ ಪ್ರವೇಶದ ವಿಚಾರದಲ್ಲಿರುವ ತೊಡಕನ್ನು ನಿವಾರಿಸಲು ಮುಂದಾಗಿದ್ದಾರೆ.
ಗುರುವಾರ (ನ 15) ಪಂದಳ ರಾಜಮನೆತನದವರ ಜೊತೆ ಮಾತುಕತೆ ನಡೆಸಿರುವ ಪಿಣರಾಯಿ, ನಂತರ ಶಬರಿಮಲೆ ದೇವಾಲಯದ ತಂತ್ರಿಗಳಾದ ರಾಜೀವರಾರು ಅವರ ಮುಂದೆ ಹೊಸ ಸೂತ್ರವನ್ನು ಮುಂದಿಟ್ಟಿದ್ದಾರೆ.
ಶಬರಿಮಲೆ: ಮಹಿಳೆಯರಿಗೆ ಪ್ರತ್ಯೇಕ ದಿನದ ವ್ಯವಸ್ಥೆ
ಮೂಲಗಳ ಪ್ರಕಾರ, ಸಿಎಂ ಮುಂದಿಟ್ಟ ಹೊಸ ಸೂತ್ರಕ್ಕೆ ತಂತ್ರಿ ರಾಜೀವರಾರು, ಇಕ್ಕಟ್ಟಿನಲ್ಲಿ ಬಿದ್ದಂತೆ ಕಾಣಿಸುತ್ತಿದ್ದು, ಮುಖ್ಯಮಂತ್ರಿಗಳ ಬಳಿ ಸಮಾಯವಕಾಶವನ್ನು ಕೇಳಿದ್ದಾರೆಂದು ವರದಿಯಾಗಿದೆ.
ಇದಕ್ಕೂ ಮುನ್ನ, ಗುರುವಾರ ನಡೆದ ಸರ್ವಪಕ್ಷ ಸಭೆಯಿಂದ ಕಾಂಗ್ರೆಸ್ ಮತ್ತು ಬಿಜೆಪಿ ಹೊರನಡೆದಿದೆ. ನವೆಂಬರ್ ಹದಿನೇಳರಿಂದ ಆರಂಭವಾಗಲಿರುವ ಎರಡು ತಿಂಗಳ ಮಂಡಳ ಮಕರವಿಳಕ್ಕು ಋತುವಿಗಾಗಿ ಸಿಎಂ ಸಭೆಯನ್ನು ಕರೆದಿದ್ದರು.
ಸುಪ್ರೀಂಕೋರ್ಟ್ ಆದೇಶ
ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂದು ಸುಪ್ರೀಂಕೋರ್ಟ್ ಆದೇಶ ಹೊರಡಿಸಿರುವುದರಿಂದ, ಇದನ್ನು ಪಾಲಿಸಲೇಬೇಕಾದ ಅನಿವಾರ್ಯತೆಯಲ್ಲಿ ಸರಕಾರವಿದೆ. ನಮ್ಮ ಸರಕಾರಕ್ಕೆ ಭಕ್ತರ ಭಾವನೆಯನ್ನು ನೋವಿಸಬೇಕು ಎನ್ನುವ ಉದ್ದೇಶವಿಲ್ಲ ಎಂದು ಸಭೆಯಲ್ಲಿ ಪಿಣರಾಯಿ ಹೇಳಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಇದರಲ್ಲಿ ರಾಜಕೀಯ ಮಾಡಬಾರದು ಎಂದು ಸಿಎಂ ಹೇಳಿದ್ದಾರೆ.
ಕೇರಳ ಸರ್ಕಾರದ ಕಮ್ಯುನಿಸ್ಟರ ಗೋಸುಂಬೆತನ
ಬಿಜೆಪಿ, ಕಾಂಗ್ರೆಸ್ ಸಭಾತ್ಯಾಗ
ದೇವಾಲಯದ ಇತಿಹಾಸದಲ್ಲೇ ಹೊಸ ಕ್ರಮ ತೆಗೆದುಕೊಳ್ಳುವ ಬಗ್ಗೆ ನಾವು ಆಲೋಚಿಸಬೇಕಿದೆ. ಬೇರೆ ದಿನಗಳಲ್ಲಿ ಶಬರಿಮಲೆ ದೇವಾಲಯಕ್ಕೆ ಮಹಿಳೆಯರಿಗೆ ಮಾತ್ರ ಅವಕಾಶ ನೀಡಬಹುದೇ ಎನ್ನುವುದರ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಿದೆ ಎಂದು ಪಿಣರಾಯಿ ಹೇಳಿದ್ದಾರೆ. ಮುಖ್ಯಮಂತ್ರಿಗಳ ಈ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿ ಬಿಜೆಪಿ, ಕಾಂಗ್ರೆಸ್ ಸಭಾತ್ಯಾಗ ಮಾಡಿದೆ.
ಶಬರಿಮಲೆ ಬರ್ತಿದ್ದಾರೆ ತೃಪ್ತಿ ದೇಸಾಯಿ, ಸರ್ಕಾರವೇ ಭರಿಸಬೇಕಂತೆ ವೆಚ್ಚ
ಪಿಣರಾಯಿ ವಿಜಯನ್ ಮಾತುಕತೆ
ಈ ನಡುವೆ ಪಂದಳ ರಾಜಮನೆತನದ ಸದಸ್ಯರೊಂದಿಗೆ ಪಿಣರಾಯಿ ವಿಜಯನ್ ಮಾತುಕತೆ ನಡೆಸಿದ್ದಾರೆ. ಜೊತೆಗೆ, ಶಬರಿಮಲೆ ದೇವಾಲಯದ ಪ್ರಧಾನ ಅರ್ಚಕ (ತಂತ್ರಿ) ಕಂಡರಾರು ರಾಜೀವರಾರು ಅವರ ಜೊತೆಯೂ ಮಾತುಕತೆ ನಡೆಸಿದ್ದಾರೆ. ಮಹಿಳೆಯರಿಗಾಗಿ ಪ್ರತ್ಯೇಕ ದಿನವನ್ನು ನಿಗದಿ ಪಡಿಸೋಣವೇ ಎನ್ನುವ ಹೊಸಸೂತ್ರವನ್ನು ಮುಖ್ಯಮಂತ್ರಿಗಳು ತಂತ್ರಿಗಳ ಮುಂದಿಟ್ಟಿದ್ದಾರೆ.
ಶಬರಿಮಲೆ ದೇವಾಲಯದ ತಂತ್ರಿ ರಾಜೀವರಾರು
ಕೆಲವೊಂದು ಮೂಲಗಳ ಪ್ರಕಾರ, ಮುಖ್ಯಮಂತ್ರಿಗಳ ಈ ಹೊಸ ಸೂತ್ರಕ್ಕೆ ತಂತ್ರಿ ರಾಜೀವರಾರು ಏನನ್ನೂ ಉತ್ತರಿಸದೇ, ಸ್ವಲ್ಪ ಸಮಯಾವಕಾಶ ಕೇಳಿದ್ದಾರೆಂದು ವರದಿಯಾಗಿದೆ. ಪಿಣರಾಯಿಯವರ ಈ ಆಲೋಚನೆಗೆ ತಂತ್ರಿಗಳೂ ಒಂದು ಕ್ಷಣ ಆವಕ್ಕಾದರು ಎನ್ನುವ ಮಾಹಿತಿಯಿದೆ. ಮುಖ್ಯಮಂತ್ರಿಗಳ ಹೊಸಸೂತ್ರಕ್ಕೆ ಯಾವುದೇ ಸ್ಪಷ್ಟ ಉತ್ತರವನ್ನು ನೀಡದೇ ಸಮಯ ಕೇಳಿ, ಸಭೆಯಿಂದ ತಂತ್ರಿ ರಾಜೀವರಾರು ಹೊರಬಂದರು ಎನ್ನಲಾಗುತ್ತಿದೆ.
ದೇವಸ್ವಂ ಬೋರ್ಡಿಗೆ ಅನುಮತಿ ನೀಡಿ
ಇದೇ ಶನಿವಾರದಿಂದ (ನ 17) ಶಬರಿಮಲೆ ದೇವಾಲಯದ ಬಾಗಿಲು ಭಕ್ತರಿಗೆ ತೆರೆಯಲಿದೆ. ಮಹಿಳಾ ಹೋರಾಟಗಾರ್ತಿ ಪ್ರಾಚಿ ದೇಸಾಯಿ ಶನಿವಾರದಂದು ಶಬರಿಮಲೆ ದೇವಾಲಯಕ್ಕೆ ತೆರಳುವುದಾಗಿ, ಜೊತೆಗೆ ತನಗೆ ಭದ್ರತೆ ನೀಡಬೇಕೆಂದು ಕೇರಳ ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಪಂದಳ ರಾಜಮನೆತನದ ಜೊತೆಗೆ ನಡೆದ ಸಭೆಯಲ್ಲಿ, ನ್ಯಾಯಾಲಯದ ಮೆಟ್ಟಲು ಹತ್ತಲು, ಸರಕಾರದ ವ್ಯಾಪ್ತಿಯಲ್ಲಿ ಬರುವ ದೇವಸ್ವಂ ಬೋರ್ಡಿಗೆ ಅನುಮತಿ ನೀಡಿ ಎಂದು ಕೇರಳ ಸರಕಾರವನ್ನು ಮನವಿ ಮಾಡಲಾಗಿದೆ ಎನ್ನಲಾಗುತ್ತಿದೆ.