Sankranti Special: ಶಬರಿಮಲೆಗೆ ಕರ್ನಾಟಕದಿಂದ ರೈಲು ಪ್ರಯಾಣ ಹೇಗೆ?
ತಿರುವನಂತಪುರಂ, ಜನವರಿ 10: ಕೊರೊನಾ ವೈರಸ್ ಸೋಂಕಿನ ನಿರ್ಬಂಧಗಳಿಂದಾಗಿ ಶಬರಿಮಲೆಗೆ ತೆರಳುವ ಭಕ್ತಾದಿಗಳ ಸಂಖ್ಯೆಯನ್ನು ಮಿತಿಗೊಳಿಸಲಾಗಿದೆ. ಕರ್ನಾಟಕ ಸೇರಿದಂತೆ ವಿವಿಧೆಡೆಯಿಂದ ರೈಲು ಮಾರ್ಗದಲ್ಲಿ ತೆರಳಲು ಬಯಸುವ ಭಕ್ತಾದಿಗಳಿಗೆ ಶುಭ ಸುದ್ದಿ ಸಿಕ್ಕಿದ್ದು, ಮಕರವಿಳಕ್ಕು ಸಂಭ್ರಮ ಇನ್ನಷ್ಟು ಹೆಚ್ಚಿದೆ. ಸುಮಾರು 23 ವರ್ಷಗಳಿಂದ ಬಾಕಿ ಉಳಿದಿದ್ದ ರೈಲ್ವೆ ಯೋಜನೆಯು ಕೊನೆಗೂ ಅನುಮೋದನೆಗೊಂಡಿದೆ.
ಶಬರಿಮಲೆ ರೈಲ್ವೆ ಮಾರ್ಗಕ್ಕೆ ತಗುಲುವ ವೆಚ್ಚದ ಶೇ 50ರಷ್ಟನ್ನು ಭರಿಸಲು ಕೇರಳ ಸರ್ಕಾರ ಒಪ್ಪಿಕೊಂಡಿದೆ. ಈ ಯೋಜನೆಗೆ 2,815 ಕೋಟಿ ರೂ ವೆಚ್ಚ ತಗುಲಲಿದ್ದು, ಅದರಲ್ಲಿ ಅರ್ಧದಷ್ಟು ವೆಚ್ಚವನ್ನು ಭರಿಸಲು ಕೇರಳ ಸರ್ಕಾರ ಕೊನೆಗೂ ಮುಂದಾಗಿರುವುದು ಭಕ್ತರಿಗೆ ಶುಭ ಸುದ್ದಿ ಸಿಕ್ಕಿದ್ದಂತಾಗಿದೆ.
ಶಬರಿಮಲೆ ರೈಲು ಯೋಜನೆಯು ಕೇರಳದ ಎರ್ನಾಕುಲಂ ಜಿಲ್ಲೆಯ ಅಂಗಮಲೈ ಮತ್ತು ಕೊಟ್ಟಾಯಂ ಜಿಲ್ಲೆಯ ಎರುಮೇಲಿ ನಡುವೆ ಸುಮಾರು 111 ಕಿಮೀ ಸಂಪರ್ಕ ಕಲ್ಪಿಸಲಿದೆ. ಶಬರಿಮಲೆ ಯಾತ್ರಿಕರ ಮೂಲ ನೆಲೆಯಾದ ಪಂಬಾದಿಂದ ಏರುಮೇಲಿ ರೈಲು ನಿಲ್ದಾಣದಿಂದ 18 ಕಿಮೀ ದೂರದಲ್ಲಿದೆ.

ನೇರ ರೈಲು ಸಂಪರ್ಕವಿಲ್ಲ: ಶಬರಿಮಲೆ ನೇರವಾಗಿ ಸಂಪರ್ಕ ಹೊಂದಿರುವ ಯಾವುದೇ ರೈಲಿನ ವ್ಯವಸ್ಥೆಯಿಲ್ಲ. ಬೆಂಗಳೂರು ಅಥವಾ ಮಂಗಳೂರಿನಿಂದ ತೆರಳುವ ಪ್ರಯಾಣಿಕರಿಗೆ ಹತ್ತಿರದ ರೈಲ್ವೇ ನಿಲ್ದಾಣ ಎಂದರೆ ಕೊಟ್ಟಾಯಂ. ಕರ್ನಾಟಕದಿಂದ ಹೊರಡುವ ಭಕ್ತರು ರೈಲಿನಲ್ಲೇ ಪ್ರಯಾಣಿಸಲು ಬಯಸಿದರೆ, ಕೊಟ್ಟಾಯಂ, ಚೆಂಗನ್ನೂರ್ ರೈಲು ನಿಲ್ದಾಣ ತಲುಪಬೇಕು. ಕೊಟ್ಟಾಯಂನಿಂದ ಶಬರಿಮಲೆಗೆ ಮತ್ತೆ ರಸ್ತೆ ಮಾರ್ಗವಾಗಿ ಏರುಮೇಲಿ ಮಾರ್ಗವಾಗಿ ಸುಮಾರು 90 ಕಿ.ಮೀ. ಪ್ರಯಾಣ ಮಾಡಬೇಕಾಗುತ್ತದೆ.
ಚೆಂಗನ್ನೂರ್ ರೈಲು ನಿಲ್ದಾಣದಿಂದ ಮಾವೆಲ್ಲಿಕ್ಕಾರ-ಕೊಳೆಂಚ್ಚೇರಿ ರಸ್ತೆ -ಕೀಕೊಝೂರ್ ರಸ್ತೆ ಮಾರ್ಗವಾಗಿ ಅಥವಾ ತಿರುವಳ್ಳ, ವೆನ್ನಿಕುಲಂ, ತಡಿಯೂರ್- ರನ್ನಿ ರಸ್ತೆ ಮಾರ್ಗವಾಗಿ ಪಂಬಾ ತಲುಪಬಹುದು. ಸರಿ ಸುಮಾರು 30 ಕಿ.ಮೀ ದೂರದ ಪ್ರಯಾಣ ಇದಾಗಿದೆ.












Click it and Unblock the Notifications