ಲೋಕಸಭಾ ಚುನಾವಣೆ: ಕೇರಳದಲ್ಲಿ ಕಮ್ಯೂನಿಸ್ಟರು ನೆಲಕಚ್ಚಲು ಇದೇ ಕಾರಣ
ತಿರುವನಂತಪುರಂ, ಜೂನ್ 26: ಕಳೆದ ಲೋಕಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲಲು ಕಾರಣವಾದ ಅಂಶಗಳೇನು ಎಂದು ಸಿಪಿಐ(ಎಂ) ಆತ್ಮಾವಲೋಕನ ಮಾಡಿಕೊಂಡಿದೆ.
ಚುನಾವಣೆಗೆ ಕೆಲವು ತಿಂಗಳ ಹಿಂದೆ ಆರಂಭವಾದ ಶಬರಿಮಲೆ ದೇವಾಲಯದ ವಿವಾದವೇ, ಚುನಾವಣೆಯಲ್ಲಿ ಸೋಲಲು ಕಾರಣ ಎಂದು ಪಕ್ಷ ಹೇಳಿದೆ. ಪಕ್ಷದ ಸೆಂಟ್ರಲ್ ಕಮಿಟಿ, ಚುನಾವಣೋತ್ತರ ಸಮೀಕ್ಷಾ ವರದಿಯಲ್ಲಿ ಈ ವಿಚಾರವನ್ನು ಹೇಳಿದೆ.
ಕಳೆದ ಭಾನುವಾರ ಮತ್ತು ಸೋಮವಾರ ಪಕ್ಷದ ಸದಸ್ಯರ ಸಭೆಯನ್ನು ಕರೆಯಲಾಗಿತ್ತು. ಪಕ್ಷ ತನ್ನ ಮುಖವಾಣಿ 'ದೇಶಾಭಿಮಾನಿ'ಯಲ್ಲಿ ಚುನಾವಣಾ ಸೋಲಿಗೆ ಶಬರಿಮಲೆ ವಿವಾದವೇ ಕಾರಣ ಎಂದಿದೆ.

ಇಪ್ಪತ್ತು ಲೋಕಸಭಾ ಸ್ಥಾನವನ್ನು ಹೊಂದಿರುವ ಕೇರಳದಲ್ಲಿ, ಸಿಪಿಎಂ ನೇತೃತ್ವದ ಎಲ್ಡಿಎಫ್ ಕೇವಲ ಒಂದು ಸ್ಥಾನವನ್ನು ಗೆದ್ದು, ತೀವ್ರ ಮುಖಭಂಗ ಎದುರಿಸಿತ್ತು. ಕಾಂಗ್ರೆಸ್ ನೇತೃತ್ವದ ಯುಡಿಎಫ್ ಹತ್ತೊಂಬತ್ತು ಸ್ಥಾನಗಳನ್ನು ಗೆದ್ದಿತ್ತು.
ಜನವರಿ ಎರಡನೇ ತಾರೀಕಿನಂದು ಇಬ್ಬರು ಮಹಿಳೆಯರು (ಬಿಂದು ಮತ್ತು ಕನಕದುರ್ಗ) ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯವನ್ನು ಪ್ರವೇಶಿಸಿದ್ದರು. ದೇಶಾದ್ಯಂತ ಇದು ಭಾರೀ ವಿರೋಧಕ್ಕೆ ಇದು ಕಾರಣವಾಗಿತ್ತು.
ದೇವಾಲಯಕ್ಕೆ ಮಹಿಳೆಯರಿಗೂ ಪ್ರವೇಶ ನೀಡಬೇಕು ಎಂದು ಸರ್ವೋಚ್ಚ ನ್ಯಾಯಾಲಯ ಸೆಪ್ಟಂಬರ್ 28ರಂದು ಐತಿಹಾಸಿಕ ತೀರ್ಪನ್ನು ನೀಡಿತ್ತು. ಇದು ಹೊಸ ಸಂಘರ್ಷಕ್ಕೆ ನಾಂದಿ ಹಾಡಿ, ಬಿಜೆಪಿ ಮಂಚೂಣಿಯಲ್ಲಿ ಹೋರಾಟದಲ್ಲಿ ಭಾಗವಹಿಸಿತ್ತು.












Click it and Unblock the Notifications