ಶಬರಿಮಲೆ, ಸುಪ್ರೀಂ ತೀರ್ಪು: ಹೆಚ್ಚುತ್ತಿರುವ ಒತ್ತಡ, ಅಡಕತ್ತರಿಯಲ್ಲಿ ಪಿಣರಾಯಿ ಸರಕಾರ
Recommended Video

ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶ ನೀಡಿರುವ ವಿಚಾರದಲ್ಲಿ, ಸುಪ್ರೀಂಕೋರ್ಟ್ ತೀರ್ಪಿನ ವಿರುದ್ದ ಅಸಮಾಧಾನ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ತೀರ್ಪಿನ ವಿರುದ್ದ ಮೇಲ್ಮನವಿ ಸಲ್ಲಿಸಲು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗೆ ಒತ್ತಡ ಹೆಚ್ಚಾಗುತ್ತಿದ್ದು, ಬಿಜೆಪಿ ಅಧಿಕೃತವಾಗಿ ಆಖಾಡಕ್ಕಿಳಿಯುವ ಮೂಲಕ, ಧಾರ್ಮಿಕ ವಿಚಾರದ ಹೋರಾಟವೊಂದು ರಾಜಕೀಯ ಆಯಾಮ ಪಡೆಯುವ ಸಾಧ್ಯತೆ ದಟ್ಟವಾಗಿದೆ.
ಶಬರಿಮಲೆ ವಿವಾದ, ಕೇರಳದ ಸಮಸ್ತ ಹಿಂದೂಗಳನ್ನು ಒಗ್ಗೂಡಿಸುವಲ್ಲಿ ಯಶಸ್ವಿಯಾಗುತ್ತಿದೆ ಎನ್ನುವ ಸಾಮಾಜಿಕ ತಾಣದಲ್ಲಿನ ಪ್ರಚಾರದ ನಡುವೆ, ಕೇರಳದ ನಾಯರ್ ಸೊಸೈಟಿ, ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಬೇಕೆಂದು ಆಗ್ರಹಿಸಿದೆ.
ಈಗಾಗಲೇ, ಹಿಂದೂಪರ ಸಂಘಟನೆಗಳು ಪ್ರತಿಭಟನೆಯಲ್ಲಿ ಮಂಚೂಣಿಯಲ್ಲಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘ ಕೂಡಾ, ಮೇಲ್ಮನವಿ ಸಲ್ಲಿಸದೇ ಇರುವ ಕೇರಳ ಸರಕಾರದ ಕ್ರಮದ ವಿರುದ್ದ ಹರಿಹಾಯ್ದಿದಿದೆ. ಭಕ್ತರ ಭಾವನೆಗೆ ಮೊದಲು ಬೆಲೆಕೊಡಿ ಎಂದು ಪಿಣರಾಯಿ ಸರಕಾರವನ್ನು ಆಗ್ರಹಿಸಿದೆ.
ಹಿಂದೂಗಳ ಭಾವನೆಗೆ ಅಡ್ಡಿ ಆಗುವಂತಿದ್ದರೆ, ಅದರ ವಿರುದ್ದ ನಾವು ಹೋರಾಡುತ್ತೇವೆ ಎಂದು ಬಿಜೆಪಿ ಮತ್ತು ಕಾಂಗ್ರೆಸ್ ಹೇಳಿದೆ. ತಿರುವನಂತಪುರದಲ್ಲಿರುವ ದೇವಸ್ವಂ ಮಂಡಳಿಯ ಕಚೇರಿ ಎದುರು ಬಿಜೆಪಿ ಮಹಿಳಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ನಾಯರ್ ಸರ್ವಿಸ್ ಸೊಸೈಟಿ
ನಾಯರ್ ಸರ್ವಿಸ್ ಸೊಸೈಟಿ ಶಬರಿಮಲೆ ತೀರ್ಪಿನ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಕೇರಳದ ಪ್ರಭಾವಿ ನಾಯರ್ ಸಮುದಾಯ, ತೀರ್ಪು ಒಂದು ದುರದೃಷ್ಟಕರ ಎಂದು ಹೇಳಿದೆ. ಪಿಣರಾಯಿ ಸರಕಾರ, ಮೇಲ್ಮನವಿ ಸಲ್ಲಿಸಬೇಕೆಂದು ಒತ್ತಡ ಹೇರಿರುವುದು, ಸರಕಾರಕ್ಕೆ ನುಂಗಲಾರದ ತುತ್ತಾಗಿದೆ.

ಪಿಣರಾಯಿ ಸರಕಾರದ ವಿರುದ್ದ ಕಿಡಿಕಾರಿರುವ ನಾಯರ್ ಸೊಸೈಟಿ
ತಿರುವಾಂಕೂರು ದೇವಸ್ವಂ ಮಂಡಳಿ ಮತ್ತು ಪಿಣರಾಯಿ ಸರಕಾರದ ವಿರುದ್ದ ಕಿಡಿಕಾರಿರುವ ನಾಯರ್ ಸೊಸೈಟಿಯ ಪ್ರಧಾನ ಕಾರ್ಯದರ್ಶಿ ಸುಕುಮಾರನ್ ನಾಯರ್, ನಾವು ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಗೌರವಿಸುತ್ತೇವೆ. ಸಮಾನತೆ ಬೇಕು ಎನ್ನುವುದಕ್ಕೂ ನಮ್ಮ ಸಹಮತವಿದೆ, ಆದರೆ ಈ ವಿಚಾರದಲ್ಲಿ ಶತಮಾನಗಳಿಂದ ನಡೆದುಕೊಂಡು ಬರುತ್ತಿರುವ ಸಂಪ್ರದಾಯವನ್ನು ರದ್ದುಗೊಳಿಸುವುದು ತಪ್ಪು ಎಂದು ನಾಯರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೇರಳ ಕಾಂಗ್ರೆಸ್ ಘಟಕದ ನಿಯೋಗ
ತಿರುವಾಂಕೂರು ದೇವಸ್ವಂ ಮಂಡಳಿಯ ಸದಸ್ಯರ ಜೊತೆ ಮಾತುಕತೆ ನಡೆಸಿದ ಕೇರಳ ಕಾಂಗ್ರೆಸ್ ಘಟಕದ ನಿಯೋಗ, ಹಿಂದೂಗಳ ಭಾವನೆಯ ಪರವಾಗಿ ನಾವು ನಿಲ್ಲುತ್ತೇವೆ. ಬಿಜೆಪಿಗೆ ನಿಜವಾಗಿಯೂ ಹಿಂದೂಗಳ ಭಾವನೆಯ ಮೇಲೆ ನಂಬಿಕೆಯಿದ್ದರೆ, ಸುಪ್ರೀಂಕೋರ್ಟ್ ತೀರ್ಪನ್ನು ಬದಿಗೆ ಸರಿಸಲು ಕಾನೂನು ರೂಪಿಸುವಂತೆ ಕೇಂದ್ರಕ್ಕೆ ಒತ್ತಡ ತರಲಿ ಎಂದು ಆಗ್ರಹಿಸಿದೆ.

ಶಬರಿಮಲೆ ದೇವಾಲಯದ ಮೇಲೆ ಗೌರವವಿಲ್ಲ
ಭಕ್ತರು ನಡೆಸುತ್ತಿರುವ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಎಲ್ಡಿಎಫ್ ಸರಕಾರಕ್ಕೆ ಶಬರಿಮಲೆ ದೇವಾಲಯದ ಮೇಲೆ ಗೌರವವಿಲ್ಲ. ಹಿಂದೂಗಳ ಸಂಪ್ರದಾಯಕ್ಕೆ ಬೆಲೆಕೊಡಬೇಕು ಎನ್ನುವ ಕನಿಷ್ಠ ಜ್ಞಾನ ಪಿಣರಾಯಿ ಸರಕಾರಕ್ಕೆ ಇಲ್ಲ. ದೇವಸ್ಥಾನದ ಮಹತ್ವಕ್ಕೆ ಧಕ್ಕೆ ತರಬೇಕು ಎನ್ನುವ ಉದ್ದೇಶವನ್ನು ಸರಕಾರ ಹೊಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಶ್ರೀಧರನ್ ಪಿಳ್ಳೈ ಹೇಳಿದ್ದಾರೆ.

ಹೆಚ್ಚುತ್ತಿರುವ ಒತ್ತಡ, ಅಡಕತ್ತರಿಯಲ್ಲಿ ಪಿಣರಾಯಿ ಸರಕಾರ
ಈ ನಡುವೆ, ವಿವಿಧ ಸಂಘಟನೆಗಳು ಶಬರಿಮಲೆ ಹೋರಾಟಕ್ಕೆ ಧುಮುಕುತ್ತಿದ್ದಾರೆ. ಪ್ರಮುಖವಾಗಿ ಮಹಿಳೆಯೆರೇ ಹೋರಾಟದ ನೇತೃತ್ವವನ್ನು ವಹಿಸಿಕೊಳ್ಳುತ್ತಿದ್ದಾರೆ. ಸಮಾನತೆ ನಮಗೆ ಬೇಕಾದರೂ, ನಮ್ಮ ಧಾರ್ಮಿಕ ನಂಬಿಕೆಯೂ ನಮಗೆ ಅಷ್ಟೇ ಮುಖ್ಯ. ಕೇರಳ ಸರಕಾರ ಮೇಲ್ಮನವಿ ಸಲ್ಲಿಸಬೇಕೆನ್ನುವ ಸಾರ್ವಜನಿಕರ ಒತ್ತಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜೊತೆಗೆ, ಇದೊಂದು ರಾಜಕೀಯ ವಿಚಾರವಾಗಿ ತಿರುಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.












Click it and Unblock the Notifications