ಶಬರಿಮಲೆ: 3 ಲಕ್ಷದಿಂದ 9 ಸಾವಿರಕ್ಕೆ ಇಳಿದ ಭಕ್ತರ ಸಂಖ್ಯೆ
ತಿರುವನಂತಪುರಂ, ನವೆಂಬರ್ 24: ಕಠಿಣ ಕೋವಿಡ್ ನಿಯಮಾವಳಿಗಳ ಹಿನ್ನೆಲೆಯಲ್ಲಿ ಪುರಾಣ ಪ್ರಸಿದ್ಧ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಭೇಟಿ ನೀಡುತ್ತಿರುವ ಭಕ್ತರ ಸಂಖ್ಯೆಯಲ್ಲಿ ಭಾರಿ ಇಳಿಕೆಯಾಗಿದೆ. ಎರಡು ತಿಂಗಳ ಅವಧಿಯ ವಾರ್ಷಿಕ ಶಬರಿಮಲೆ ಯಾತ್ರೆ ಪ್ರಾರಂಭವಾದ ಮೊದಲ ವಾರ ಕೇವಲ 9,000 ಮಂದಿ ಭಕ್ತರು ಸ್ವಾಮಿ ಅಯ್ಯಪ್ಪನ ಸನ್ನಿಧಿಗೆ ಭೇಟಿ ನೀಡಿದ್ದಾರೆ.
ಪಂಬಾದ ಬೆಟ್ಟದ ಮೇಲಿನ ಈ ಪವಿತ್ರ ಸ್ಥಳಕ್ಕೆ ಕಳೆದ ವರ್ಷ ಇದೇ ಅವಧಿಯಲ್ಲಿ 3 ಲಕ್ಷ ಮಂದಿ ಭಕ್ತರು ತೆರಳಿದ್ದರು ಎನ್ನುತ್ತದೆ ದೇವಸ್ಥಾನದ ಆಡಳಿತ ಮಂಡಳಿಯ ದಾಖಲೆಗಳು. ಅಂದರೆ ಈ ಬಾರಿ ಕೊರೊನಾ ವೈರಸ್ ಭೀತಿ ಮತ್ತು ಕಟ್ಟುನಿಟ್ಟಾದ ನಿಯಮಾವಳಿಗಳ ಕಾರಣದಿಂದ ಭಕ್ತರ ಸಂಖ್ಯೆಯಲ್ಲಿ ಹಿಂದೆಂದೂ ಕಾಣದಷ್ಟು ಇಳಿಕೆಯಾಗಿದೆ. ಪ್ರಸಕ್ತ ಸಾಲಿನ ಶಬರಿಮಲೆ ಯಾತ್ರೆಯ ಚಟುವಟಿಕೆಗಳು ನವೆಂಬರ್ 16ರಂದು ದೇವಾಲಯದ ಬಾಗಿಲು ತೆರೆಯುವುದರೊಂದಿಗೆ ಆರಂಭವಾಗಿತ್ತು.
ಕಳೆದ ಎಂಟು ತಿಂಗಳ ಹಿಂದೆ ಕೋವಿಡ್ ನಿಯಂತ್ರಣ ನಿಯಮಗಳು ಜಾರಿಗೆ ಬಂದಾಗಿನಿಂದ ಭಕ್ತರ ದೈನಂದಿನ ಭೇಟಿಯ ಗರಿಷ್ಠ ಸಂಖ್ಯೆಗೆ ಭಾರಿ ಹೊಡೆತ ಬಿದ್ದಿದೆ ಎಂದು ಟ್ರಾವಂಕೋರ್ ದೇವಸಂ ಮಂಡಳಿ (ಟಿಡಿಬಿ) ತಿಳಿಸಿದೆ.

ಪ್ರಸ್ತುತದ ಕೋವಿಡ್ ನಿಯಮಾವಳಿಗಳ ಪ್ರಕಾರ ಈಗಿನ ಉತ್ಸವದ ಅವಧಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗಿನ ದಿನಗಳಲ್ಲಿ ಕೇವಲ ಗರಿಷ್ಠ 1,000 ಭಕ್ತರಿಗೆ ಮಾತ್ರ ಪ್ರವೇಶಾವಕಾಶ ನೀಡಲಾಗುತ್ತಿದೆ. ಶನಿವಾರ ಮತ್ತು ಭಾನುವಾರದ ರಜಾದಿನಗಳಲ್ಲಿ 2,000 ಭಕ್ತರು ಇಲ್ಲಿಗೆ ಭೇಟಿ ನೀಡಬಹುದು.
ಕಳೆದ ವರ್ಷ ಇದೇ ಅವಧಿಯಲ್ಲಿ ದೈನಂದಿನ ಆದಾಯ ಸಂಗ್ರಹವು 3 ಕೋಟಿ ರೂ. ವರೆಗೂ ಮುಟ್ಟುತ್ತಿತ್ತು. ಆದರೆ ಈ ಬಾರಿ ದೈನಂದಿನ ಸಂಗ್ರಹ 10 ಲಕ್ಷ ರೂ.ಗೆ ಇಳಿಕೆಯಾಗಿದೆ. ಕಳೆದ ವಾರ ಆರಂಭವಾದ ಪ್ರಸಕ್ತ ಸಾಲಿನ ವಾರ್ಷಿಕ ಆಚರಣೆಯಲ್ಲಿ 2021ರ ಜನವರಿ 14ರಂದು ಅತ್ಯಂತ ಪ್ರಮುಖ ಮಕರವಿಳಕ್ಕು ಸಂಭವಿಸಲಿದೆ.
ಎಲ್ಲ ಭಕ್ತರೂ ಆನ್ಲೈನ್ ಸರದಿ ಪ್ರಕಾರವೇ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕಿದೆ. ಈ ಬಾರಿ ಇಲ್ಲಿಗೆ ಆಗಮಿಸುವ ಪ್ರತಿ ಭಕ್ತರೂ ಅಲ್ಲಿಗೆ ಆಗಮಿಸಿದ 24 ಗಂಟೆಯೊಳಗೆ ಪರೀಕ್ಷೆಗೆ ಒಳಪಟ್ಟು ಕೋವಿಡ್ ನೆಗೆಟಿವ್ ಪ್ರಮಾಣಪತ್ರವನ್ನು ತರುವುದು ಕಡ್ಡಾಯವಾಗಿದೆ.
ಅಲ್ಲದೆ, ಈ ಬಾರಿ ಭಕ್ತರು ದೇವಾಲಯಕ್ಕೆ ತೆರಳಲು ತಮ್ಮ ಚಾರಣ ಆರಂಭಿಸುವ ಮುನ್ನ ಪವಿತ್ರ ಪಂಬಾ ನಂದಿಯಲ್ಲಿ ಮುಳುಗಿ ಸ್ನಾನ ಮಾಡುವ ಪದ್ಧತಿಯನ್ನು ಪಾಲಿಸಲು ಅವಕಾಶವಿಲ್ಲ. ಅದರ ಬದಲು ಷವರ್ಗಳ ವ್ಯವಸ್ಥೆ ಮಾಡಲಾಗಿದೆ.












Click it and Unblock the Notifications