ಶಬರಿಮಲೆಯನ್ನುRSS ರಣರಂಗವನ್ನಾಗಿಸಿದೆ: ಪಿಣರಾಯಿ ವಿಜಯನ್
Recommended Video

ತಿರುವನಂತಪುರಂ, ಅಕ್ಟೊಬರ್ 23: ಶಬರಿಮಲೆಯ ಅಯ್ಯಪ್ಪ ದೇವಾಲಯದ ಆವರಣವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ ರಣರಂಗವನ್ನಾಗಿ ಮಾಡುತ್ತಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ನಾವು ಸುಪ್ರೀಂ ಕೋರ್ಟ್ ತೀರ್ಪಿಗೆ ಬದ್ಧ ಎಂದು ಕೇರಳ ಸರ್ಕಾರ ಮೊದಲೇ ಹೇಳಿತ್ತು. ಅಂತೆಯೇ ದೇವಾಲಯದಲ್ಲಿ ಸುಪ್ರೀಂ ತೀರ್ಪನ್ನು ಜಾರಿಗೆ ತರಲು ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನೂ ನಾವು ನೀಡಿದ್ದೆವು. ಸರ್ಕಾರವಾಗಲೀ, ಪೊಲೀಸರಾಗಲೀ ಭಕ್ತರನ್ನು ತಡೆಯಲು ಪ್ರಯತ್ನಿಸಿಲ್ಲ. ಆದರೆ ಆರೆಸ್ಸೆಸ್ ಶಬರಿಮಲೆಯನ್ನು ರಣರಂಗವನ್ನಾಗಿ ಮಾಡಲು ಪ್ರಯತ್ನಿಸಿತು" ಎಂದು ವಿಜಯನ್ ಹೇಳಿದರು.
'ಪ್ರತಿಭಟನಕಾರರು ಮಹಿಳೆಯರ ಮೇಲೆ, ಮಾಧ್ಯಮಗಳ ಮೇಲೆ ಹಲ್ಲೆ ನಡೆಸಿದರು. ಕೇರಳದ ಇತಿಹಾಸದಲ್ಲಿಯೇ ಎಂದಿಗೂ ಹೀಗೆ ಮಾಧ್ಯಮಗಳ ಮೇಲೆ ಹಲ್ಲೆ ನಡೆಯುವ ಕೆಲಸವಾಗಿರಲಿಲ್ಲ' ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ತೀರ್ಪಿನ ನಂತರ ಮೊದಲ ಬಾರಿಗೆ ತೆರೆದಿದ್ದ ದೇವಾಲಯ
ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಕಳೆದ ವಾರ ಮೊದಲ ಬಾರಿಗೆ ಶಬರಿಮಲೆ ಅಯ್ಯಪ್ಪ ದೇವಾಲಯ ಭಕ್ತರಿಗಾಗಿ ತೆರೆಯಲ್ಪಟ್ಟಿತ್ತು. ಈ ಸಂದರ್ಭದಲ್ಲಿ ದೇವಾಲಯದೆದುರು ಪ್ರಕ್ಷುಬ್ಧ ವಾತಾವರಣ ಕಂಡುಬಂದಿತ್ತು. ದೇವಾಲಯ ಪ್ರವೇಶಕ್ಕೆ ಯತ್ನಿಸಿದ ಹಲವು ಮಹಿಳಾ ಭಕ್ತರನ್ನು ತಡೆದ ಘಟನೆಯೂ ನಡೆಸಿತ್ತು.

ದೇವಾಲಯದೆದುರು ರಣರಂಗ!
ಭಕ್ತರಿಗೆ ಮುಕ್ತವಾಗಿದ್ದ ಅಯ್ಯಪ್ಪ ದೇವಾಲಯ ಈ ಬಾರಿ ಎಂದಿನಂತಿರಲಿಲ್ಲ. ಕಾರಣ ಈ ಬಾರಿ ಮಹಿಳೆಯರ ಪ್ರವೇಶಕ್ಕೂ ಅನುಮತಿ ನೀಡಲಾಗಿತ್ತು. ದೇವಾಲಯದ ಒಳಕ್ಕೆ ನುಗ್ಗಲು ಪ್ರಯತ್ನಿಸಿದ ಹಲವು ಮಹಿಳೆಯರನ್ನು ತಡೆದ ಘಟನೆ ವರದಿಯಾಗಿತ್ತು. ಈ ಸಂದರ್ಭದಲ್ಲಿ ಮಾಧ್ಯಮಗಳ ಮೇಲೆ ಮತ್ತು ಕೆಲ ಮಹಿಳೆಯರ ಮೇಲೆ ಹಲ್ಲೆಯೂ ನಡೆದಿತ್ತು.

ಐತಿಹಾಸಿಕ ತೀರ್ಪು
10 ರಿಂದ 50 ವರ್ಷ ವಯಸ್ಸಿನ ಮಹಿಳೆಯರು ಋತುಮತಿಯಾಗುವ ಕಾರಣ ಕೇರಳದ ಶಬರಿಮಲೆ ಅಯ್ಯಪ್ಪ ದೇವಾಲಯ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಈ ವಯಸ್ಸಿನ ಮಹಿಳೆಯರು ದೇವಾಲಯಕ್ಕೆ ಪ್ರವೇಶಿಸುವುದರಿಂದ ದೇವಾಲಯದ ಪಾವಿತ್ರ್ಯಕ್ಕೆ ಧಕ್ಕೆಯಾಗುತ್ತದೆ ಎಂದು ವಾದಿಸಲಾಗಿತ್ತು. ಈ ನಿರ್ಬಂಧವನ್ನು ಸೆ.28 ರಂದು ಸುಪ್ರೀಂ ಕೋರ್ಟ್ ತೆರವುಗೊಳಿಸಿ ಐತಿಹಾಸಿಕ ತೀರ್ಪು ನೀಡಿತ್ತು.

ಸುಪ್ರೀಂ ನಲ್ಲಿ ಮೇಲ್ಮನವಿ
ಈಗಾಗಲೇ ಈ ತೀರ್ಪಿನ ವಿರುದ್ಧ ಒಟ್ಟು 19 ಮೇಲ್ಮನವಿ ಅರ್ಜಿಗಳು ಸುಪ್ರೀಂ ಅಂಗಳದಲ್ಲಿದ್ದು ನ.13 ರಂದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಲಾದ ಮೇಲ್ಮನವಿ ವಿಚಾರಣೆಯನ್ನು ಕೋರ್ಟ್ ಕೈಗೆತ್ತಿಕೊಳ್ಳಲಿದೆ. ಅ.17 ರಂದು ದೇವಾಲಯದ ಬಾಗಿಲು ತೆರೆಯುವ ಮೊದಲೇ ಸುಪ್ರೀಂ ಕೋರ್ಟಿನಲ್ಲಿ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಯಬೇಕೆಂದು ತುರ್ತು ವಿಚಾರಣೆಗೆ ಭಕ್ತರು ಕೋರಿದ್ದರಾದರೂ, ಅದಕ್ಕೆ ಸುಪ್ರೀಂ ಕೋರ್ಟ್ ಒಲ್ಲೆ ಎಂದಿತ್ತು.












Click it and Unblock the Notifications