ಪಂಚೆಯುಟ್ಟು, ಶಲ್ಯ ಹೊದ್ದು ಕೇರಳದ ತಿರುನೆಲ್ಲಿಯಲ್ಲಿ ಪಿತೃ ಕಾರ್ಯ ಮಾಡಿದ ರಾಹುಲ್
ವಯನಾಡು (ಕೇರಳ), ಏಪ್ರಿಲ್ 17: ಕರ್ನಾಟಕದ ನಾಗರಹೊಳೆ ಅರಣ್ಯ ದಾಟಿ ಹೋದರೆ ಸಿಗುವ, ವಯನಾಡಿನಲ್ಲಿರುವ ಪ್ರಖ್ಯಾತ ವಿಷ್ಣುವಿನ ದೇವಸ್ಥಾನ ತಿರುನೆಲ್ಲಿಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬುಧವಾರ ಭೇಟಿ ನೀಡಿದ್ದಾರೆ. ಈ ಕ್ಷೇತ್ರದಲ್ಲಿ ಪಿತೃ ಕಾರ್ಯಗಳನ್ನು ಮಾಡಿದರೆ ಬಹಳ ಶ್ರೇಷ್ಠ ಎಂಬ ನಂಬಿಕೆ ಇದ್ದು, ತಮ್ಮ ಕುಟುಂಬದಲ್ಲಿ ತೀರಿಕೊಂಡವರ ಕಾರ್ಯವನ್ನು ರಾಹುಲ್ ಗಾಂಧಿ ನೆರವೇರಿಸಿದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಅಂದಹಾಗೆ, ಈ ಸ್ಥಳಕ್ಕೂ ರಾಹುಲ್ ಗಾಂಧಿ ಕುಟುಂಬಕ್ಕೂ ಒಂದು ನಂಟಿದೆ. ರಾಹುಲ್ ಗಾಂಧಿ ಅವರ ತಂದೆ, ದಿವಂಗತ ಪ್ರಧಾನಿ ರಾಜೀವ್ ಗಾಂಧಿ ಅಸ್ಥಿ ವಿಸರ್ಜನೆಯನ್ನು ಇಲ್ಲಿ ಮಾಡಲಾಗಿದೆ. ಇಪ್ಪತ್ತೆಂಟು ವರ್ಷದ ಹಿಂದೆ ರಾಜೀವ್ ಗಾಂಧಿ ಅವರ ಅಸ್ಥಿಯನ್ನು ತಿರುನೆಲ್ಲಿಯ ವಿಷ್ಣುವಿನ ದೇವಸ್ಥಾನದಲ್ಲಿ ಇರುವ ಪಾಪನಾಶಿನಿಯಲ್ಲಿ ವಿಸರ್ಜಿಸಲಾಗಿತ್ತು.
ವಯನಾಡು ಎಂಬುದು ಒಂದು ಲೋಕಸಭಾ ಕ್ಷೇತ್ರ ಮಾತ್ರವಲ್ಲ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ತಂದೆಗೆ ಸಂಬಂಧಪಟ್ಟಂತೆ ಆಳವಾದ ಹಾಗೂ ಅರ್ಥಪೂರ್ಣವಾದ ಸಂಬಂಧವೊಂದು ಇದೆ ಎಂದು ರಾಹುಲ್ ಗಾಂಧಿ ಅವರ ಕಚೇರಿಯಿಂದ ಟ್ವೀಟ್ ಮಾಡಲಾಗಿದೆ.

ಕುಟುಂಬದ ಹಿರಿಯರಿಗೆ ಕಾರ್ಯ ನೆರವೇರಿಸಿದ ರಾಹುಲ್ ಗಾಂಧಿ
"ಪುರೋಹಿತರ ನಿರ್ದೇಶನದ ಮೇರೆಗೆ ರಾಹುಲ್ ಗಾಂಧಿ ಅವರು ತಮ್ಮ ಅಜ್ಜಿಯ (ಇಂದಿರಾ), ತಂದೆ, ಹಿರಿಯರು ಹಾಗೂ ಪುಲ್ವಾಮಾ ದಾಳಿ ಸಂತ್ರಸ್ತರಿಗೆ ಕಾರ್ಯ ನೆರವೇರಿಸಿದರು" ಎಂದು ತಿಳಿಸಲಾಗಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್
ಅವರು ರಾಹುಲ್ ಗಾಂಧಿ ಜತೆಗೆ ದೇವಸ್ಥಾನಕ್ಕೆ ತೆರಳಿದ್ದರು. ರಾಹುಲ್ ಗಾಂಧಿ ಅವರು ಪಂಚೆ ಉಟ್ಟು, ಅಂಗವಸ್ತ್ರ ಹೊಂದಿದ್ದರು. ದೇವಸ್ಥಾನದ ಅತಿಥಿ ಗೃಹದಿಂದ ದೇವಳದ ತನಕ ನಡೆದು ಬಂದಿದ್ದಾರೆ. ದೇವಾಲಯದ ಪುರೋಹಿತರು ಹೇಳಿದ ಪ್ರತಿ ಅಂಶವನ್ನು ರಾಹುಲ್ ಗಾಂಧಿ ನೋಟ್ ಮಾಡಿಕೊಂಡಿದ್ದಾರೆ. ಆ ನಂತರ ದೇವರ ದರ್ಶನ ಮಾಡಿದರು. ಅದಾದ ಮೇಲೆ ತಮ್ಮ ತಂದೆಯ ಅಸ್ಥಿ ವಿಸರ್ಜನೆ ಮಾಡಿದ ಸ್ಥಳಕ್ಕೆ ಪುರೋಹಿತರ ಜತೆಗೆ ಏಳು ನೂರು ಮೀಟರ್ ನಡೆದುಕೊಂಡು ಹೋಗಿದ್ದಾರೆ.
ನಿಮ್ಮ ರಾಜಕೀಯ ಜ್ಞಾನವನ್ನು ಒರೆಗೆ ಹಚ್ಚುವ ರಸಪ್ರಶ್ನೆ

ಭದ್ರತಾ ಕಾರಣಗಳಿಗೆ ಭೇಟಿ ನೀಡಲು ಆಗಿರಲಿಲ್ಲ
ಕಳೆದ ಸಲ ಕೂಡ ರಾಹುಲ್ ಅವರು ತಿರುನೆಲ್ಲಿ ದೇವಳಕ್ಕೆ ಭೇಟಿ ನೀಡಬೇಕು ಅಂದುಕೊಂಡಿದ್ದರು. ಆದರೆ ಭದ್ರತಾ ನಿರ್ಬಂಧಗಳ ಕಾರಣಕ್ಕೆ ಆಗಿರಲಿಲ್ಲ. ಜತೆಗೆ ಈ ಕಾರ್ಯಗಳನ್ನು ಮಾಡಲು ಸಾಧ್ಯವಾಗಿರಲಿಲ್ಲ. ಇದೇ ಸ್ಥಳದಲ್ಲೇ ಅಂದರೆ ಪಾಪನಾಶಿನಿ ನದಿಯಲ್ಲಿ ರಾಜೀವ್ ಗಾಂಧಿ (ರಾಹುಲ್ ಗಾಂಧಿಯ ತಂದೆ) ಅಸ್ಥಿ ವಿಸರ್ಜನೆ ಮಾಡಲಾಗಿತ್ತು ಎಂದು ಕೆ.ಸಿ.ವೇಣುಗೋಪಾಲ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಮೇ 21, 1991ರಲ್ಲಿ ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಚುನಾವಣೆ ಪ್ರಚಾರದಲ್ಲಿ ತೊಡಗಿಕೊಂಡಿದ್ದ ವೇಳೆ ಆತ್ಮಹತ್ಯಾ ದಾಳಿ ನಡೆಸಿ, ರಾಜೀವ್ ಗಾಂಧಿ ಅವರನ್ನು ಕೊಲ್ಲಲಾಗಿತ್ತು.
ಈ ಪ್ರಣಾಳಿಕೆಗಳಲ್ಲಿ ಯಾವುದು ನಿಮ್ಮ ಗಮನ ಸೆಳೆದಿದೆ?

ಪಾಪನಾಶಿನಿಯು ಗಯಾ ಕ್ಷೇತ್ರಕ್ಕೆ ಸಮಾನವಾದುದು
ಆಗಿನ ಕೇರಳ ಮುಖ್ಯಮಂತ್ರಿ ಕೆ.ಕರುಣಾಕರನ್, ಮುಲ್ಲಪ್ಪಲ್ಲಿ ರಾಮಚಂದ್ರನ್, ಕೆ.ಸಿ.ವೇಣುಗೋಪಾಲ್, ರಮೇಶ್ ಚೆನ್ನಿಥಾಲ ಮತ್ತಿತರರು ಇಪ್ಪತ್ತೆಂಟು ವರ್ಷಗಳ ಹಿಂದೆ ರಾಜೀವ್ ಗಾಂಧಿ ಅಸ್ಥಿಯನ್ನು ಪಾಪನಾಶಿನಿ ನದಿಯಲ್ಲಿ ವಿಸರ್ಜನೆ ಮಾಡುವ ವೇಳೆ ಹಾಜರಿದ್ದರು. ಪಾಪನಾಶಿನಿ ನದಿಯಲ್ಲಿ ಅಸ್ಥಿ ವಿಸರ್ಜನೆ ಮಾಡಿದರೆ ಅದು ಗಯಾದಲ್ಲಿ ಕಾರ್ಯ ಮಾಡಿದ್ದಕ್ಕೆ ಸಮ ಎಂಬ ಭಾವನೆ ಇದೆ. ಮನ್ನಂತವಾಡಿ ಸಮೀಪ ಇರುವ ತಿರುನೆಲ್ಲಿ ದೇವಸ್ಥಾನದ ಸುತ್ತ ಕಂಬಮಾಲ, ಕರಿಮಾಲ, ವರದಿಗ ಬೆಟ್ಟಗಳಿವೆ. ಇನ್ನು ಚುನಾವಣೆ ವಿಚಾರಕ್ಕೆ ಬಂದರೆ ಅಲೆಪ್ಪಿ, ತಿರುವನಂತಪುರಂನಲ್ಲಿ ರಾಹುಲ್ ಗಾಂಧಿ ಅವರ ಸಭೆಗಳಿವೆ.

ಎರಡು ಕ್ಷೇತ್ರಗಳಿಂದ ರಾಹುಲ್ ಗಾಂಧಿ ಸ್ಪರ್ಧೆ
ಏಪ್ರಿಲ್ ನಾಲ್ಕನೇ ತಾರೀಕಿನಂದು ರಾಹುಲ್ ಗಾಂಧಿ ವಯನಾಡು ಲೋಕಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ್ದರು. ಆ ವೇಳೆ ಅವರ ಜತೆಗೆ ಸೋದರಿ ಪ್ರಿಯಾಂಕಾ ಗಾಂಧಿ ಮತ್ತು ಕಾಂಗ್ರೆಸ್ ನ ಹಿರಿಯ ನಾಯಕರು ಇದ್ದರು. ಕೇರಳ ರಾಜ್ಯಕ್ಕೆ ಏಪ್ರಿಲ್ ಇಪ್ಪತ್ಮೂರನೇ ತಾರೀಕು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಮತ ಎಣಿಕೆ ಕಾರ್ಯವು ಮೇ ಇಪ್ಪತ್ಮೂರನೇ ತಾರೀಕು ಆಗಲಿದೆ. ಅಂದಹಾಗೆ, ರಾಹುಲ್ ಗಾಂಧಿ ಅವರು ಉತ್ತರಪ್ರದೇಶದ ಅಮೇಥಿ ಹಾಗೂ ಕೇರಳದ ವಯನಾಡು ಹೀಗೆ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಿದ್ದು, ಕಾಂಗ್ರೆಸ್ ನ ಪ್ರಧಾನಿ ಅಭ್ಯರ್ಥಿ ಅವರು ಎಂದು ಬಿಂಬಿಸಲಾಗಿದೆ.












Click it and Unblock the Notifications