Viral Video: ಪುಟ್ಟ ಬಾಲಕಿಗೆ ಚಪ್ಪಲಿ ಧರಿಸಲು ಸಹಾಯ ಮಾಡಿದ ರಾಹುಲ್ ಗಾಂಧಿ
ತಿರುವನಂತಪುರಂ, ಸೆ.18: ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಪುಟ್ಟ ಹುಡುಗಿಗೆ ಚಪ್ಪಲಿ ಧರಿಸಲು ರಾಹುಲ್ ಗಾಂಧಿ ಸಹಾಯ ಮಾಡಿರುವ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯು ಕೇರಳದ ಹರಿಪಾದ್ನಿಂದ ಭಾನುವಾರ ತನ್ನ ಮೆರವಣಿಗೆಯನ್ನು ಪುನರಾರಂಭಿಸಿತು. ಬೆಳಿಗ್ಗೆ 6:30 ರ ನಂತರ ಪ್ರಾರಂಭವಾದ ಯಾತ್ರೆಯ ಹಲವಾರು ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿವೆ.
ಕೆಲವೆಡೆ ರಾಹುಲ್ ಗಾಂಧಿಯವರನ್ನು ರಸ್ತೆಯ ಇಕ್ಕೆಲಗಳಲ್ಲಿ ಕಾಯುತ್ತಿರುವ ಜನರು ಸ್ವಾಗತಿಸುತ್ತಿರುವುದು ಕಂಡುಬಂದರೆ, ಇನ್ನು ಕೆಲವೆಡೆ ಮೆರವಣಿಗೆಯಿಂದ ವಿರಾಮ ತೆಗೆದುಕೊಂಡು ಹೋಟೆಲ್ನಲ್ಲಿ ಚಹಾ ಸವಿಯುತ್ತಿರುವುದನ್ನು ಕಾಣಬಹುದು. ಇಂತಹದ್ದೇ ಒಂದು ಫೋಟೋನಲ್ಲಿ ರಾಹುಲ್ ಬಾಲಕಿಗೆ ಚಪ್ಪಲಿ ತೊಟ್ಟುಕೊಳ್ಳಲು ಸಹಾಯ ಮಾಡುತ್ತಿದ್ದಾರೆ.
|
'ದೇಶವನ್ನು ಒಗ್ಗೂಡಿಸಲು ಸರಳತೆ ಮತ್ತು ಪ್ರೀತಿಯ ಅಗತ್ಯವಿದೆ'
ಭಾರತ್ ಜೋಡೋ ಯಾತ್ರೆಯ 11ನೇ ದಿನದ ವಿಡಿಯೋ ಒಂದರಲ್ಲಿ ಕಾಂಗ್ರೆಸ್ ನಾಯಕ ಬಾಲಕಿಯೊಬ್ಬಳಿಗೆ ಪಾದರಕ್ಷೆ ತೊಡಿಸಿ ಸಹಾಯ ಮಾಡುತ್ತಿರುವುದು ಕಂಡುಬಂದಿದೆ. ಈ ವಿಡಿಯೋವನ್ನು ಮಹಿಳಾ ಕಾಂಗ್ರೆಸ್ನ ಹಂಗಾಮಿ ಅಧ್ಯಕ್ಷೆ ನೆಟ್ಟಾ ಡಿಸೋಜಾ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ. "ಸರಳತೆ ಮತ್ತು ಪ್ರೀತಿ. ದೇಶವನ್ನು ಒಗ್ಗೂಡಿಸಲು ಎರಡೂ ಅಗತ್ಯವಿದೆ" ಎಂದು ಹಿಂದಿಯಲ್ಲಿ ಶೀರ್ಷಿಕೆಯಲ್ಲಿ ಬರೆದಿದ್ದಾರೆ. ವಿಡಿಯೋ ವೀಕ್ಷಿಸಿ.

ರಾಹುಲ್ ಗಾಂಧಿ ಕೆಲಸಕ್ಕೆ ಭಾರೀ ಮೆಚ್ಚುಗೆ
ಅಲಪ್ಪುಳ ಜಿಲ್ಲೆಯ ಅಂಬಲಪ್ಪುಳ ಪಟ್ಟಣದಲ್ಲಿ ಯಾತ್ರೆಯ ವಿಡಿಯೋದಲ್ಲಿ, ರಾಹುಲ್ ಗಾಂಧಿ ಅವರು ಪಕ್ಷದ ಇತರ ಕಾರ್ಯಕರ್ತರು ಮತ್ತು ನಾಯಕರ ಜೊತೆಗೆ ನಡೆಯುತ್ತಿರುವುದು ಕಂಡುಬಂದಿದೆ. ಇದೇ ವೇಳೆ ಪುಟ್ಟ ಬಾಲಕಿ ಕೂಡ ಮೆರವಣಿಗೆಯಲ್ಲಿ ಸಾಗುತ್ತಿದ್ದಾರೆ. ಸ್ವಲ್ಪ ಸಮಯದ ನಂತರ, ರಾಹುಲ್ ಗಾಂಧಿ ಥಟ್ಟನೆ ನಿಂತು ಕೆಳಗೆ ಬಾಗಿ ಪಕ್ಕದಲ್ಲಿ ನಡೆಯುತ್ತಿದ್ದ ಚಿಕ್ಕ ಬಾಲಕಿಯ ಪಾದರಕ್ಷೆ ಧರಿಸಲು ಸಹಾಯ ಮಾಡುತ್ತಾರೆ.
ಈ ವಿಡಿಯೋ ಸಾವಿರಾರು ವೀಕ್ಷಣೆಗಳು ಮತ್ತು ಲೈಕ್ಗಳನ್ನು ಪಡೆದಿದೆ. ಹಲವಾರು ಇಂಟರ್ನೆಟ್ ಬಳಕೆದಾರರು ರಾಹುಲ್ ಗಾಂಧಿ ಅವರ ಕೆಲಸಕ್ಕೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಾಯಕತ್ವದ ಅಮೂಲ್ಯ ರತ್ನ ಎಂದ ನೆಟ್ಟಿಗರು
ವಿಡಿಯೋ ಹಂಚಿಕೊಂಡಿರುವ ಟ್ವಿಟರ್ ಬಳಕೆದಾರರೊಬ್ಬರು, "ಮಾನವೀಯತೆಯ ನಾಯಕ" ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ. "ನಿಜವಾದ ಹೃದಯವಂತ ಈತ," ಇನ್ನೊಬ್ಬರು ಹೇಳಿದ್ದಾರೆ. ಮತ್ತೊಬ್ಬರು ನಾಯಕತ್ವದ ಅಮೂಲ್ಯ ರತ್ನ ಎಂದು ರಾಹುಲ್ ಗಾಂಧಿಯನ್ನು ಹೊಗಳಿದ್ದಾರೆ.
ಸರಳ ಮತ್ತು ಪ್ರೀತಿ ತುಂಬಿದ ನಾಯಕ ಎಂದು ಹಲವರು ವಿಡಿಯೋ ಮತ್ತು ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ.
13 ಕಿ.ಮೀ ಉದ್ದದ ಮೊದಲ ಪಾದಯಾತ್ರೆಯಲ್ಲಿ ರಮೇಶ್ ಚೆನ್ನಿತ್ತಲ, ಕೆ ಮುರಳೀಧರನ್, ಕೋಡಿಕುನ್ನಿಲ್ ಸುರೇಶ್, ಕೆ ಸಿ ವೇಣುಗೋಪಾಲ್ ಮತ್ತು ಕೇರಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿ ಡಿ ಸತೀಶನ್ ಸೇರಿದಂತೆ ಕಾಂಗ್ರೆಸ್ ಹಿರಿಯ ನಾಯಕರು ರಾಹುಲ್ ಗಾಂಧಿಗೆ ಸಾಥ್ ನೀಡಿದರು..

ಸೆ. 23 ರಂದು ತ್ರಿಶೂರ್ ತಲುಪಲಿರುವ ಯಾತ್ರೆ
ವಿರಾಮದ ವೇಳೆ ಕುಟ್ಟನಾಡ್ ಮತ್ತು ನೆರೆಯ ಜಿಲ್ಲೆಯ ರೈತರೊಂದಿಗೆ ರಾಹುಲ್ ಗಾಂಧಿ ಸಂವಾದ ನಡೆಸಲಿದ್ದಾರೆ. ಈ ಬಗ್ಗೆ ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಟ್ವಿಟರ್ನಲ್ಲಿ ತಿಳಿಸಿದ್ದಾರೆ. "ಭಾರತ್ ಮತ್ತು ಪ್ರದೇಶ್ ಯಾತ್ರಿಗಳು 13 ಕಿ.ಮೀ ದೂರ ನಡೆದು ಒಟ್ಟಪ್ಪನದ ಶ್ರೀ ಕುರುಟ್ಟು ಭಗವತಿ ದೇವಸ್ಥಾನದಲ್ಲಿ ಕುಟ್ಟನಾಡ್ ಮತ್ತು ನೆರೆಯ ಜಿಲ್ಲೆಯ ರೈತರೊಂದಿಗೆ ಸಂವಾದ ನಡೆಸುತ್ತಾರೆ" ಎಂದು ರಮೇಶ್ ಟ್ವೀಟ್ ಮಾಡಿದ್ದಾರೆ.
ಯಾತ್ರೆಯು ಸೆಪ್ಟೆಂಬರ್ 21 ಮತ್ತು 22 ರಂದು ಎರ್ನಾಕುಲಂ ಜಿಲ್ಲೆಯ ಮೂಲಕ ಹಾದು ಸೆಪ್ಟೆಂಬರ್ 23 ರಂದು ತ್ರಿಶೂರ್ ತಲುಪಲಿದೆ. ಇದು ಸೆಪ್ಟೆಂಬರ್ 26 ಮತ್ತು 27 ರಂದು ಪಾಲಕ್ಕಾಡ್ ಮೂಲಕ ಸಂಚರಿಸಿ ಸೆಪ್ಟೆಂಬರ್ 28 ರಂದು ಮಲಪುರಂ ಪ್ರವೇಶಿಸಲಿದೆ.












Click it and Unblock the Notifications