"ಕಾಂಗ್ರೆಸ್ ತಂದ ಕಾಯ್ದೆಗಳನ್ನು ಕೊಲ್ಲುವುದೇ ನಮ್ಮ ಮೋದಿ ಜೀ ಉದ್ದೇಶ"
ತಿರುವನಂತಪುರಂ, ಜನವರಿ 28: ರೈತರ ಒಳಿತಿಗಾಗಿ ಕಾಂಗ್ರೆಸ್ ಪಕ್ಷದಿಂದ ಜಾರಿಗೆ ತಂದಿದ್ದ ಭೂಸ್ವಾಧೀನ ಕಾಯ್ದೆಯನ್ನು ಪ್ರಧಾನಿ ನರೇಂದ್ರ ಮೋದಿ ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಮುಂಬರುವ ವಿಧಾನಸಭೆ ಚುನಾವಣೆ ಸಲುವಾಗಿ ರಾಹುಲ್ ಗಾಂಧಿ ಕೇರಳಕ್ಕೆ ಎರಡು ದಿನಗಳ ಪ್ರವಾಸ ಹಮ್ಮಿಕೊಂಡಿದ್ದು, ಈ ಸಂದರ್ಭ ಮಾತನಾಡಿದ ಅವರು, "ಕೆಲವು ವರ್ಷಗಳ ಹಿಂದೆ ರೈತರ ಮೇಲೆ ದಾಳಿಗೆ ಪ್ರಯತ್ನಿಸಿದ ಘಟನೆಗಳನ್ನು ಕಂಡಿದ್ದೆ. ಭಟ್ಟಾ ಪರ್ಸೌಲ್ ನಲ್ಲಿ ಮೊದಲು ಇಂಥ ಪ್ರಕರಣ ಬೆಳಕಿಗೆ ಬಂದಿತ್ತು. ರೈತರಿಂದ ಭೂಮಿಯನ್ನು ಕಸಿದುಕೊಳ್ಳಲಾಗಿತ್ತು. ಈ ಸಮಸ್ಯೆಯನ್ನು ಅರ್ಥೈಸಿಕೊಂಡು ನಾನು ಪಕ್ಷದ ಒಳಗೆ ಇದನ್ನು ಚರ್ಚಿಸಿದ್ದೆ. ಆನಂತರ ನಾವು ಬ್ರಿಟಿಷರ ಹಳೆ ಕಾಯ್ದೆಯನ್ನು ರದ್ದುಪಡಿಸಿ, ರೈತರಿಗೆ ಪರಿಹಾರ ಹಾಗೂ ರಕ್ಷಣೆ ನೀಡುವಂಥ ಭೂ ಸ್ವಾಧೀನ ಕಾಯ್ದೆಯನ್ನು ಪರಿಚಯಿಸಿದೆವು" ಎಂದು ಹೇಳಿದರು.
"ಆದರೆ ಅಧಿಕಾರಕ್ಕೆ ಬರುತ್ತಿದ್ದಂತೆ ನರೇಂದ್ರ ಮೋದಿ ಜೀ ಮಾಡಿದ ಮೊದಲ ಕೆಲಸ ಎಂದರೆ ಈ ಕಾಯ್ದೆಯನ್ನು ಕೊಲ್ಲಲು ನೋಡಿದ್ದು. ನಾವು ಈ ಕಾಯ್ದೆ ಪರವಾಗಿ ಸಂಸತ್ತಿನಲ್ಲಿ ಹೋರಾಡಿದೆವು ಹಾಗೂ ಇದು ರದ್ದುಗೊಳ್ಳುವುದನ್ನು ತಡೆದೆವು. ಅಲ್ಲಿಗೂ ಅವರು ತಮ್ಮ ಪ್ರಯತ್ನ ನಿಲ್ಲಿಸಲಿಲ್ಲ. ಸಂಸತ್ತಿನಲ್ಲಿ ಈ ವಿಷಯದಲ್ಲಿ ಗೆಲ್ಲಲು ಸಾಧ್ಯವಾಗದ ಕಾರಣ, ಬಿಜೆಪಿ ಆಳ್ವಿಕೆಯ ರಾಜ್ಯಗಳ ಮುಖ್ಯಮಂತ್ರಿಗಳಿಗೆ, ಈ ಕಾಯ್ದೆಗಳ ನಿರ್ಮೂಲನೆಗೆ ಪ್ರಯತ್ನಿಸುವಂತೆ ತಿಳಿಸಿದ್ದರು. ಕಾಂಗ್ರೆಸ್ ತಂದ ಕಾಯ್ದೆಗಳನ್ನು ಕೊಲ್ಲುವುದೇ ನಮ್ಮ ಮೋದಿ ಜೀ ಉದ್ದೇಶ" ಎಂದು ದೂರಿದರು.

ಮುಂಬರುವ ವಿಧಾನಸಭೆ ಚುನಾವಣೆ ಸಲುವಾಗಿ ರಾಹುಲ್ ಗಾಂಧಿ ರಾಜ್ಯಗಳಿಗೆ ಭೇಟಿ ನೀಡುತ್ತಿದ್ದಾರೆ. ಬುಧವಾರ ಕೇರಳಕ್ಕೆ ಎರಡು ದಿನಗಳ ಪ್ರವಾಸದ ಮೇಲೆ ಬಂದಿದ್ದು, ಕಳೆದ ವಾರವೂ ತಮಿಳುನಾಡಿಗೆ ಮೂರು ದಿನಗಳು ಭೇಟಿ ನೀಡಿದ್ದರು.












Click it and Unblock the Notifications