ಅಣ್ಣನ ಕುರಿತು ಭಾವನಾತ್ಮಕ ಭಾಷಣ ಮಾಡಿದ ಪ್ರಿಯಾಂಕಾ ಗಾಂಧಿ
Recommended Video
ವೈನಾಡ್, ಏಪ್ರಿಲ್ 20: ಹುತಾತ್ಮ ತಂದೆಯನ್ನು ಕಳ್ಳ ಎಂದು ಜರಿದ ವ್ಯಕ್ತಿಯನ್ನು ಕೂಡ ಅಪ್ಪಿಕೊಂಡ ವಿಶಾಲ ಮನಸ್ಸು ನಮ್ಮ ಅಣ್ಣನದ್ದು ಎಂದು ಪ್ರಿಯಾಂಕಾ ಗಾಂಧಿ ಅವರು ಅಣ್ಣ ರಾಹುಲ್ ಗಾಂಧಿ ಬಗ್ಗೆ ಹೇಳಿದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ರಾಹುಲ್ ಗಾಂಧಿ ಸ್ಪರ್ಧಿಸುತ್ತಿರುವ ಕೇರಳದ ವೈನಾಡ್ನಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಿದ ಪ್ರಿಯಾಂಕಾ ಗಾಂಧಿ ಭಾವನಾತ್ಮಕ ಮಾತುಗಳಿಂದ ಜನರನ್ನು ಸೆಳೆದರು.
ನನ್ನ ಅಣ್ಣನ ಬಗ್ಗೆ ವಿರೋಧಿಗಳು ಕಳೆದ 10 ವರ್ಷದಿಂದ ವಿವಿಧ ರೀತಿಯಾಗಿ ದಾಳಿ ಮಾಡುತ್ತಲೇ ಇದ್ದಾರೆ, ಆತನ ಬಗ್ಗೆ ಸುಳ್ಳು ಹಬ್ಬಿಸುತ್ತಲೇ ಇದ್ದಾರೆ ಆದರೆ ನಮ್ಮ ಅಣ್ಣನನ್ನು ನಾನು ಹುಟ್ಟಿದಾಗಿನಿಂದಲೂ ನೋಡುತ್ತಿದ್ದೇನೆ ಆತನ ಶಕ್ತಿಯ ಬಗ್ಗೆ, ಆತನಲ್ಲಿನ ಗುಣಗಳ ಬಗ್ಗೆ ನನಗೆ ಸಂಪೂರ್ಣ ವಿಶ್ವಾಸವಿದೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.
ನಮಗೆ ತಾಯಿಯಂತೆ ಇದ್ದ ಇಂದಿರಾ ಗಾಂಧಿ ಅವರನ್ನು ನಮ್ಮ ಮನೆಯಲ್ಲಿಯೇ ಹತ್ಯೆ ಮಾಡಲಾಯಿತು, ನಾಲ್ಕು ಜನರ ನಮ್ಮ ಸಣ್ಣ ಕುಟುಂಬ ಬಹಳವೇ ಪ್ರೀತಿಯಿಂದ ಇದ್ದೆವು, ಆದರೆ ರಾಹುಲ್ ಹಾರ್ವರ್ಡ್ನಲ್ಲಿ ಕಲಿಯುತ್ತಿರುವಾಗ ನಮ್ಮ ತಂದೆಯನ್ನು ಕೊಂದರು ಎಂದು ಹಳೆಯ ದಿನಗಳನ್ನು ಪ್ರಿಯಾಂಕಾ ನೆನಪು ಮಾಡಿಕೊಂಡರು.

'ರಾಹುಲ್ ಹೃದಯದಲ್ಲಿ ದ್ವೇಷವಿಲ್ಲ'
ರಾಹುಲ್ ಗಾಂಧಿ ಅವರ ಹೃದಯದಲ್ಲಿ ದ್ವೇಷಕ್ಕೆ ಜಾಗವೇ ಇಲ್ಲ, ತಂದೆಯ ಕನಸು ಈಡೇರಿಸಲೆಂದು ರಾಹುಲ್ ತನ್ನ ಶಿಕ್ಷಣ ಮುಗಿಸಿ ಭಾರತಕ್ಕೆ ಬಂದು 2004ರಲ್ಲಿ ಅಮೇಥಿಯಿಂದ ಚುನಾವಣೆಗೆ ಸ್ಪರ್ಧಿಸಿದ' ಎಂದು ರಾಹುಲ್ ಗಾಂಧಿ ರಾಜಕೀಯಕ್ಕೆ ಪ್ರವೇಶಿಸಿದ ಸಂದರ್ಭವನ್ನು ಬಿಚ್ಚಿಟ್ಟರು.

'ಕಾಂಗ್ರೆಸ್ ಪಕ್ಷ ಕೊಟ್ಟ ಭರವಸೆಗಳನ್ನು ಈಡೇರಿಸುತ್ತೆ'
ಇದೇ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಪ್ರಿಯಾಂಕಾ ಗಾಂಧಿ, ಬಿಜೆಪಿ 2014ರಲ್ಲಿ ಜನರಿಗೆ ಕೊಟ್ಟಿದ್ದ ಭರವಸೆಗಳನ್ನು ಈಡೇರಿಸಿಲ್ಲ, ಬಿಜೆಪಿ ಮತ್ತು ಕಾಂಗ್ರೆಸ್ಗೆ ಇರುವ ಪ್ರಮುಖ ವ್ಯತ್ಯಾಸವೇ ಇದು, ನಾವು ಕೊಟ್ಟ ಭರವಸೆಗಳನ್ನು ಈಡೇರಿಸುತ್ತೇವೆ ಆದರೆ ಬಿಜೆಪಿ ಸುಳ್ಳು ಹೇಳಿ ಅಧಿಕಾರ ಪಡೆಯುತ್ತದೆ ಎಂದು ಅವರು ಹೇಳಿದರು.

ರೈತರ ಮೇಲೆ ಮಾಡಿದ ದಬ್ಬಾಳಿಕೆ ನಿಮ್ಮ ರಾಷ್ಟ್ರೀಯತೆಯಾ?
ದೇಶದಾದ್ಯಂತದಿಂದ ರೈತರು ನಿಮ್ಮ ಆಡಳಿತ ಸೌಧದ ಬಾಗಿಲಿಗೆ ನಡೆದುಕೊಂಡು ಬಂದರು ಆದರೆ ನೀವು ಅವರ ಕಷ್ಟವೇನೆಂದು ಕೇಳದೆ, ಅವರ ಮೇಲೆ ಪೊಲೀಸರಿಂದ ದೌರ್ಜನ್ಯ ನಡೆಸಿದ್ದಿರಿ, ಇದೇಯಾ ನಿಮ್ಮ ರಾಷ್ಟ್ರೀಯತೆ ಎಂದು ಬಿಜೆಪಿಯನ್ನು ಪ್ರಿಯಾಂಕಾ ಗಾಂಧಿ ಪ್ರಶ್ನೆ ಮಾಡಿದರು.

ಸಂವಿಧಾನವನ್ನು ಹಾಳು ಮಾಡುವುದು ರಾಷ್ಟ್ರೀಯತೆಯಾ?
ಬಿಜೆಪಿಯ ರಾಷ್ಟ್ರೀಯತೆಯನ್ನು ಪ್ರಶ್ನೆ ಮಾಡಿದ ಪ್ರಿಯಾಂಕಾ, ದೇಶದ ಸಂವಿಧಾನವನ್ನು ತುಂಡು ಮಾಡುವುದು, ಸಂವಿಧಾನಬದ್ಧ ಸಂಸ್ಥೆಗಳನ್ನು ಹಾಳು ಮಾಡುವುದು, ಜನರನ್ನು ಧರ್ಮದ ಹೆಸರಿನಲ್ಲಿ ಬೇರೆ ಮಾಡುವುದು ನಿಮ್ಮ ರಾಷ್ಟ್ರೀಯತೆಯಾ, ನಿಮ್ಮನ್ನು ಪ್ರಶ್ನೆ ಮಾಡುವ ವ್ಯಕ್ತಿಗಳ ದನಿಯನ್ನು ಹತ್ತಿಕ್ಕುವುದು ನಿಮ್ಮ ರಾಷ್ಟ್ರೀಯತೆಯಾ ಎಂದು ಪ್ರಿಯಾಂಕ ಪ್ರಶ್ನೆ ಮಾಡಿದರು.

'ಪ್ರೀತಿಯ ಸೋದರ-ಸೋದರಿಯರೇ ಎಚ್ಚರಗೊಳ್ಳಿ'
ಪ್ರೀತಿಯ ಸಹೋದರ-ಸಹೋದರಿಯರೆ ಇಂತಹಾ ದುರ್ಬಲ ಸರ್ಕಾರ ಮತ್ತು ದುರ್ಬಲ ಪ್ರಧಾನಿಯನ್ನು ನಾನು ನೋಡಿಲ್ಲ, ನೀವು ಇನ್ನೂ ಉತ್ತಮ ಪ್ರಧಾನಿ ನಿಮಗೆ ಬೇಕಾಗಿದೆ, ನಿಮಗೆ ನಿಮ್ಮನ್ನು ಗೌರವಿಸುವ ಪ್ರಧಾನಿ ಬೇಕಾಗಿದ್ದಾರೆ, ಕೇವಲ ಅವರ ಮನದ ಮಾತನ್ನಾಡದ ನಿಮ್ಮ ಮಾತನ್ನು ಕೇಳುವ ಪ್ರಧಾನಿ ಬೇಕಾಗಿದ್ದಾರೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.

'ಈ ಗಿರಿ ಪರ್ವತ ನನ್ನ ದೇಶ'
ಈ ಗಿರಿ ಪರ್ವತ ನನ್ನ ದೇಶ, ಈ ಕಾಫಿ ತೋಟ ನನ್ನ ದೇಶ, ಹರಿಯುವ ನದಿಗಳು ನನ್ನ ದೇಶ, ಉತ್ತರ ಪ್ರದೇಶದ ಗೋಧಿಯ ಹೊಲಗಳು ನನ್ನ ದೇಶ, ಈಶಾನ್ಯ ಭಾರತದ ಸಂಸ್ಕೃತಿ ನನ್ನ ದೇಶ, ಗುಜರಾತ್ ನನ್ನ ದೇಶ, ಆದರೆ ಬಿಜೆಪಿಯವರು ಕಳೆದ ಐದು ವರ್ಷದಿಂದ ನಮ್ಮನ್ನು ವಿಭಜಿಸಿ ಆಳಿದ್ದಾರೆ ಎಂದ ಪ್ರಿಯಾಂಕಾ ಗಾಂಧಿ, ಜನರು ಹುಚ್ಚೆದ್ದು ಜೈಕಾರ ಕೂಗುವಂತೆ ಮಾಡಿದರು.












Click it and Unblock the Notifications