ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡಲು ಆಯುರ್ವೇದದ 4 ಪರಿಹಾರಗಳು
ಸೂರ್ಯನ ಸುಡು ಬಿಸಿಲು ದೇಶಾದ್ಯಂತ ಕಾಡುತ್ತಿದೆ. ಬಹುತೇಕ ರಾಜ್ಯಗಳಲ್ಲಿ ಸೂರ್ಯನ ಶಾಖ ಸಹಿಸಿಕೊಳ್ಳಲು ಸಾಧ್ಯವಾಗದ ಮಟ್ಟಿಗೆ ಏರಿಕೆಯಾಗಿದೆ. ಬೇಸಿಗೆಯಲ್ಲಿನ ಬಿರು ಬಿಸಿಲಿನ ಕಾರಣ ಶಾಖದ ಹೊಡೆತ, ದೇಹದಲ್ಲಿ ನೀರಿನ ಅಂಶ ಕೊರತೆ ಮತ್ತು ಆಯಾಸದಂತಹ ಸಮಸ್ಯೆಗಳು ಸಾಮಾನ್ಯವಾಗಿ ಕಾಡುತ್ತವೆ. ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸಲು ಜನರು ವಿವಿಧ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ಶಾಖದಿಂದ ದೇಹಕ್ಕೆ ಉಂಟಾಗುವ ಶಾಖದಿಂದ ಯಾವ ರೀತಿ ಪರಿಹಾರ ಕಂಡುಕೊಳ್ಳಬಹುದು ಎನ್ನುವುದನ್ನು ಆಯುರ್ವೇದದಲ್ಲಿ ಹೇಳಲಾಗಿದೆ.
ದೇಹದ ಮೇಲೆ ಬಿಸಿಲಿನ ಶಾಖದ ಪರಿಣಾಮ:
ಬೇಸಿಗೆಯಲ್ಲಿ ದೇಹದಲ್ಲಿ ಪಿತ್ತ ದೋಷ ಹೆಚ್ಚಾಗುತ್ತದೆ. ಇದು ಶಾಖ, ಬೆವರುವುದು ಮತ್ತು ದೌರ್ಬಲ್ಯದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ, ಈ ಋತುವಿನಲ್ಲಿ ಆರೋಗ್ಯಕರ ಆಹಾರ ಮತ್ತು ಜೀವನಶೈಲಿಯನ್ನು ಕಾಪಾಡಿಕೊಳ್ಳುವುದು ಮುಖ್ಯ. ಬೇಸಿಗೆಯಲ್ಲಿ ಪಿತ್ತ ದೋಷವನ್ನು ಸಮತೋಲನಗೊಳಿಸಲು ಆಯುರ್ವೇದವು ಸಮತೋಲಿತ ಆಹಾರ ಮತ್ತು ದ್ರವ ಸೇವನೆಯನ್ನು ಶಿಫಾರಸು ಮಾಡುತ್ತದೆ.
ಅಖಿಲ ಭಾರತ ಆಯುರ್ವೇದ ಸಂಸ್ಥೆ AIIA ಪ್ರಕಾರ, ಬೇಸಿಗೆಯಲ್ಲಿ ಎದುರಾಗಬಹುದಾದ ಅನಾರೋಗ್ಯವನ್ನು ತಡೆಗಟ್ಟಲು ದೇಹದಲ್ಲಿ ನೀರಿನಂಶವನ್ನು ಕಾಯ್ದುಕೊಳ್ಳುವುದು ಬಹಳ ಮುಖ್ಯ. ಪ್ರತಿದಿನ 3 ಲೀಟರ್ ನೀರು, ವಿವಿಧ ರೀತಿಯ ನೈಸರ್ಗಿಕ ಜ್ಯೂಸ್ಗಳು, ವುಡ್ ಆಪಲ್ನ ಶರಬತ್ತನ್ನು ಶಿಫಾರಸ್ಸು ಮಾಡಲಾಗಿದೆ. ಇವುಗಳನ್ನು ಕುಡಿಯುವುದರಿಂದ ದೇಹದಲ್ಲಿ ನೀರಿನ ಕೊರತೆ ಎದುರಾಗದಂತೆ ನೋಡಿಕೊಳ್ಳಬಹುದು. ಬೇಸಿಗೆಯಲ್ಲಿ ಸಾಕಷ್ಟು ಪ್ರಮಾಣದ ನೀರು ಮತ್ತು ದ್ರವ ಪದಾರ್ಥಗಳನ್ನು ಸೇವಿಸುವುದರಿಂದ ದೇಹವನ್ನು ಒಳಗಿನಿಂದ ತಂಪಾಗಿಡುವುದು ಸಾಧ್ಯವಾಗುತ್ತದೆ.

ಬಿಳಿ ಈರುಳ್ಳಿ :
ಬೇಸಿಗೆಯಲ್ಲಿ ಬಿಳಿ ಈರುಳ್ಳಿ ತಿನ್ನುವುದರಿಂದ ಸೂರ್ಯನ ತಾಪಮಾನದಿಂದ ಉಂಟಾಗಬಹುದಾದ ಅನಾರೋಗ್ಯವನ್ನು ತಡೆಗಟ್ಟಲು ಸಹಾಯವಾಗುತ್ತದೆ. AIIA ಪ್ರಕಾರ, ಬಿಳಿ ಈರುಳ್ಳಿ ದೇಹವನ್ನು ಒಳಗಿನಿಂದ ತಂಪಾಗಿಸುವ ಗುಣಗಳನ್ನು ಹೊಂದಿದೆ. ಬಿಳಿ ಈರುಳ್ಳಿ ದೇಹದ ಆಂತರಿಕ ಉಷ್ಣತೆಯನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಈರುಳ್ಳಿಯಲ್ಲಿರುವ ಫ್ರಕ್ಟೋಸ್ ಮತ್ತು ಫೈಬರ್ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಬೇಸಿಗೆಯಲ್ಲಿ ಎದುರಾಗುವ ಜೀರ್ಣಕ್ರಿಯೆ ಸಮಸ್ಯೆಯನ್ನು ಸುಧಾರಿಸುತ್ತದೆ. ಮಲಬದ್ಧತೆ ಮತ್ತು ಹೊಟ್ಟೆ ನೋವನ್ನು ಕಡಿಮೆ ಮಾಡುತ್ತದೆ.
ತುಳಸಿ ಬೀಜದ ನೀರು:
ಬೇಸಿಗೆಯಲ್ಲಿ ದೇಹದಲ್ಲಿನ ನೀರಿನ ಅಂಶವನ್ನು ಕಾಯ್ದುಕೊಳ್ಳುವ ಸಲುವಾಗಿ ತುಳಸಿ ನೀರನ್ನು ಕುಡಿಯಲು AIIA ಶಿಫಾರಸು ಮಾಡುತ್ತದೆ. ತುಳಸಿ ನೀರಿನಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ಫೈಬರ್ ಇದ್ದು, ಇದು ಬೇಸಿಗೆಯಲ್ಲಿ ದೇಹವನ್ನು ಒಳಗಿನಿಂದ ತಂಪಾಗಿಸುತ್ತದೆ. ಬೇಸಿಗೆಯಲ್ಲಿ ತುಳಸಿ ಬೀಜದ ನೀರನ್ನು ಕುಡಿಯುವುದರಿಂದ ಹೊಟ್ಟೆಯ ಕಿರಿಕಿರಿ, ಮಲಬದ್ಧತೆ ಮತ್ತು ಆಸಿಡಿಟಿಯಿಂದ ಪರಿಹಾರ ಸಿಗುತ್ತದೆ. ತುಳಸಿ ಬೀಜದ ನೀರು ಕೂದಲು ಮತ್ತು ಚರ್ಮದ ಸಮಸ್ಯೆಗಳನ್ನು ಕೂಡಾ ನಿವಾರಿಸುತ್ತದೆ. ಈ ನೀರನ್ನು ತಯಾರಿಸಲು, ಒಂದು ಲೀಟರ್ ನೀರಿಗೆ ಎರಡು ಟೀ ಚಮಚ ತುಳಸಿ ಬೀಜಗಳನ್ನು ಸೇರಿಸಿ ಸ್ವಲ್ಪ ಹೊತ್ತು ನೆನೆಯಲು ಬಿಡಬೇಕು. ತುಳಸಿ ಬೀಜಗಳನ್ನು ಕನಿಷ್ಠ ಎರಡು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಬೇಕು. ನಂತರ ಆ ನೀರನ್ನು ಕುಡಿಯಬೇಕು.

ಶ್ರೀಗಂಧ ಮತ್ತು ಮಲ್ಲಿಗೆ ನೀರು:
ಶ್ರೀಗಂಧ ಮತ್ತು ಮಲ್ಲಿಗೆ ಬೆರೆಸಿದ ನೀರು ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸಲು ಸಹಾಯ ಮಾಡುತ್ತದೆ. ಆಯುರ್ವೇದದ ಪ್ರಕಾರ, ಶ್ರೀಗಂಧದ ತಂಪಾಗಿಸುವ ಗುಣಗಳು ದೇಹದ ಆಯಾಸವನ್ನು ಕಡಿಮೆ ಮಾಡುತ್ತದೆ. ಮಲ್ಲಿಗೆಯ ಸುವಾಸನೆ ಬೇಸಿಗೆಯಲ್ಲಿ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ಬೇಸಿಗೆಯಲ್ಲಿ ಶ್ರೀಗಂಧ ಮತ್ತು ಮಲ್ಲಿಗೆ ಬೆರೆಸಿದ ನೀರನ್ನು ಕುಡಿಯುವುದರಿಂದ ಹೊಟ್ಟೆಯ ಉಷ್ಣತೆ ಕಡಿಮೆಯಾಗುತ್ತದೆ. ಇದು ಹೊಟ್ಟೆ ನೋವು, ಮಲಬದ್ಧತೆ ಮತ್ತು ಶಾಖದ ಹೊಡೆತವನ್ನು ತಡೆಯಲು ಸಹಾಯ ಮಾಡುತ್ತದೆ.
(ಬರಹ: ರಂಜಿತಾ ಆರ್.ಕೆ.)













Click it and Unblock the Notifications