ಲಸಿಕೆ ಉಚಿತವಾಗಿ ಹಂಚುತ್ತೇನೆ ಎಂದ ಸಿಎಂ, ವಿಪಕ್ಷಗಳು ಗರಂ
ತಿರುವನಂತಪುರಂ, ಡಿ. 14: ಕೋವಿಡ್-19 ಲಸಿಕೆಯನ್ನು ರಾಜ್ಯದ ಜನತೆಗೆ ಉಚಿತವಾಗಿ ನೀಡುವುದಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಘೋಷಿಸಿದ್ದಕ್ಕೆ ವಿಪಕ್ಷಗಳಾದ ಯುಡಿಎಫ್, ಬಿಜೆಪಿ ಕಿಡಿಕಾರಿವೆ. ಆದರೆ, ವಿಪಕ್ಷಗಳ ದೂರನ್ನು ಬಾಲಿಶ ಎಂದಿರುವ ಸರ್ಕಾರ, ಸಿಎಂ ಅವರು ಕಣ್ಣೂರಿನಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ್ದನ್ನು ಆಶ್ವಾಸನೆ ನೀಡಿದ್ದಾರೆ ಎಂದು ವಿಪಕ್ಷಗಳು ಬಿಂಬಿಸಿವೆ ಎಂದು ಸ್ಪಷ್ಟನೆ ನೀಡಿದೆ.
ಸ್ಥಳೀಯ ಸಂಸ್ಥೆಗಳ ಮೂರನೇ ಹಾಗೂ ಕೊನೆಯ ಹಂತದ ಚುನಾವಣೆ ಡಿಸೆಂಬರ್ 14ರಂದು ನಡೆದಿದೆ. ಇಂದು ಕಣ್ಣೂರು ಜಿಲ್ಲೆಯ ಪಿಣರಾಯಿ ಗ್ರಾಮದಲ್ಲಿ ಸಿಎಂ ವಿಜಯನ್ ಮತದಾನ ಮಾಡಿದ್ದಾರೆ. ಮತದಾರರನ್ನು ಸೆಳೆಯಲು ಪಿಣರಾಯಿ ಅವರು ಉಚಿತ ಲಸಿಕೆ ನೀಡುವ ಭರವಸೆ ನೀಡಿದ್ದಾರೆ. ಕೇರಳದಲ್ಲಿ ವಿವಿಧ ಪಾಲಿಕೆ ಚುನಾವಣೆಗಳು ಜಾರಿಯಲ್ಲಿರುವಾಗ ಸಿಎಂ ಹೇಳಿಕೆ ನೀತಿ ಸಂಹಿತೆಯನ್ನು ಉಲ್ಲಂಘನೆ ಎಂದು ಆಯೋಗ ಪರಿಗಣಿಸಬೇಕು ಎಂದು ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ಆಗ್ರಹಿಸಿದ್ದಾರೆ. ಈ ಕುರಿತಂತೆ ಕೇರಳ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.
''ಪಡಿತರ ಚೀಟಿ ಹೊಂದಿರುವವರಿಗೆ ಕ್ರಿಸ್ಮಸ್ ಕಿಟ್ ಉಚಿತವಾಗಿ ನೀಡುವುದಾಗಿ ಮುಖ್ಯಮಂತ್ರಿಯವರು ಈ ಹಿಂದೆ ಘೋಷಿಸಿದ್ದರು. ಈ ಕೊರೊನಾ ಲಸಿಕೆ ಸರದಿ. ಇಷ್ಟಕ್ಕೂ ಇನ್ನೂ ಲಸಿಕೆ ಲಭ್ಯವಾಗಿಲ್ಲ.ಕೇಂದ್ರ ಸರ್ಕಾರವು ಲಸಿಕೆ ವಿತರಣೆ ಬಗ್ಗೆ ಇನ್ನೂ ರಾಜ್ಯಗಳಿಗೆ ಅಧಿಕೃತವಾಗಿ ಮಾಹಿತಿ ನೀಡಿಲ್ಲ. ಹೀಗಿರುವಾಗ ಕೇವಲ ಚುನಾವಣೆಗೋಸ್ಕರ ಮತದಾರರನ್ನು ಸೆಳೆಯಲು ಸಿಎಂ ವಿಜಯನ್ ಈ ರೀತಿ ಹೇಳಿಕೆ ನೀಡುವುದು ಅಕ್ಷಮ್ಯ'' ಎಂದು ಯುಡಿಎಫ್ ಮುಖಂಡ ಮಲಿಕ್ ಮೊಹಮ್ಮದ್ ಹಾಸನ್ ಹೇಳಿದ್ದಾರೆ.
ಮುಖ್ಯಮಂತ್ರಿಯವರು ಹೇಳಿರುವುದು ಕೇವಲ ಚುನಾವಣಾ 'ಗಿಮಿಕ್'. ಕೇಂದ್ರ ಸರ್ಕಾರದಿಂದ ಮಾತ್ರ ಉಚಿತ ಲಸಿಕೆ ನೀಡಲು ಸಾಧ್ಯ' ಎಂದು ಬಿಜೆಪಿ ರಾಜ್ಯಾಧ್ಯಾಕ್ಷ ಕೆ.ಸುರೇಂದ್ರನ್ ಹೇಳಿದ್ದಾರೆ.
Recommended Video
ಡಿಸೆಂಬರ್ 14ರಂದು ಸ್ಥಳೀಯ ಸಂಸ್ಥೆಗಳ ಚುನಾವಣೆ ಜಾರಿಯಲ್ಲಿದ್ದು, ಕಣ್ಣೂರು, ಮಲಪ್ಪುರಂ, ಕೋಯಿಕ್ಕೋಡ್ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಮತದಾನ ಪ್ರಕ್ರಿಯೆ ನಡೆದಿದೆ. ಡಿಸೆಂಬರ್ 8 ಹಾಗೂ 10ರಂದು ಮೊದಲೆರಡು ಹಂತದ ಚುನಾವನೆ ನಡೆದಿತ್ತು. ಡಿಸೆಂಬರ್ 16ರಂದು ಫಲಿತಾಂಶ ಹೊರ ಬರಲಿದೆ.