ಅಪಘಾತದಲ್ಲಿ ಗಾಯಗೊಂಡಿದ್ದ ಸಂಗೀತಗಾರ ಬಾಲಭಾಸ್ಕರ್ ಇನ್ನಿಲ್ಲ
ತಿರುವನಂತಪುರಂ, ಅಕ್ಟೋಬರ್ 02: ಸತತ 7 ದಿನಗಳ ಜೀವನ್ಮರಣ ಹೋರಾಟ ನಡೆಸಿದ್ದ ಗಾಯಕ, ಪಿಟೀಲುವಾದಕ, ಸಂಗೀತಗಾರ ಬಾಲಭಾಸ್ಕರ್(40) ಅವರು ಇಹಲೋಕ ತ್ಯಜಿಸಿದ್ದಾರೆ. ಸೋಮವಾರ ತಡರಾತ್ರಿ 1 ಗಂಟೆ ವೇಳೆಗೆ ಕೊನೆಯುಸಿರೆಳೆದಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಕಳೆದ ಮಂಗಳವಾರ(ಸೆಪ್ಟೆಂಬರ್ 25) ಮುಂಜಾನೆ ತಿರುವನಂತಪುರಂ ಹೆದ್ದಾರಿಯ ಪಕ್ಕದಲ್ಲಿದ್ದ ಮರವೊಂದಕ್ಕೆ ಬಾಲಭಾಸ್ಕರ್ ಅವರ ಕುಟುಂಬವಿದ್ದ ಕಾರು ಅಪ್ಪಳಿಸಿತ್ತು. ಈ ದುರ್ಘಟನೆಯಲ್ಲಿ ಬಾಲಭಾಸ್ಕರ್, ಬಾಲಭಾಸ್ಕರ್ ಅವರ ಪತ್ನಿ ಲಕ್ಷ್ಮಿ, ಕಾರು ಚಾಲಕ ಅರ್ಜುನ್ ಅವರಿಗೆ ತೀವ್ರ ಗಾಯಗಳಾಗಿತ್ತು. ದಂಪತಿಯ ಎರಡು ವರ್ಷ ವಯಸ್ಸಿನ ಮಗು ತೇಜಸ್ವಿನಿ ಮೃತಪಟ್ಟಿದ್ದಳು.
ಬಾಲಭಾಸ್ಕರ್ ಅಕಾಲಿಕ ನಿಧನಕ್ಕೆ ಕಂಬನಿ ಮಿಡಿದ ಸಂಗೀತ ಪ್ರೇಮಿಗಳು
ತೀವ್ರವಾಗಿ ಗಾಯಗೊಂಡಿರುವ ಬಾಲಭಾಸ್ಕರ್ ಅವರ ಪತ್ನಿ ಲಕ್ಷ್ಮಿ ಹಾಗೂ ಕಾರು ಚಾಲಕ ಅರ್ಜುನ್ ಅವರು ಇನ್ನೂ ಐಸಿಯುನಲ್ಲಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.
ಅಪಘಾತದಲ್ಲಿ ಸಂಗೀತಗಾರ ಬಾಲಭಾಸ್ಕರ್ ಅವರ ಮಗು ಸಾವು
ಬಾಲಭಾಸ್ಕರ್ ಅವರು ತ್ರಿಸ್ಸೂರ್ ದೇಗುಲಕ್ಕೆ ಭೇಟಿ ನೀಡಿ, ವಾಪಸ್ ಬರುವಾಗ ಈ ದುರ್ಘಟನೆ ನಡೆದಿತ್ತು. ಮುಂಜಾನೆ ನಿದ್ರೆ ರಹಿತ ಪಯಣದಿಂದ ಚಾಲಕನ ನಿಯಂತ್ರಣ ತಪ್ಪಿ ಈ ಅನಾಹುತ ಸಂಭವಿಸಿರುವ ಸಾಧ್ಯತೆಯಿದೆ ಎಂದು ಮಂಗಳಾಪುರಂ ಪೊಲೀಸರು ಹೇಳಿದ್ದಾರೆ.
12 ವರ್ಷ ವಯಸ್ಸಿನಿಂದಲೇ ಸಂಗೀತ ಕ್ಷೇತ್ರದಲ್ಲಿ ಮಿಂಚಿದ್ದ ಬಾಲ ಭಾಸ್ಕರ್ ಅವರು, ಮಾಂಗಲ್ಯ ಪಲ್ಲಕ್ಕು ಎಂಬ ಮಲಯಾಳಂ ಸಿನಿಮಾಕ್ಕೆ ತಮ್ಮ 17ನೇ ವಯಸ್ಸಿನಲ್ಲೆ ಸಂಗೀತ ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದರು. ಬಾಲಭಾಸ್ಕರ್ ಅವರ ಫ್ಯೂಷನ್ ಸಂಗೀತಕ್ಕೆ ಸಾಕಷ್ಟು ಅಭಿಮಾನಿಗಳು ಹುಟ್ಟುಕೊಂಡಿದ್ದರು.