ಕೋಳಿಕ್ಕೋಡ್ ವಿಮಾನ ದುರಂತ: 10ವರ್ಷದ ಹಿಂದೆನೇ ನೀಡಿದ್ದ ಎಚ್ಚರಿಕೆ
ಕೋಳಿಕ್ಕೋಡ್, ಆ 8: ದುಬೈನಿಂದ ವಾಪಸಾಗುತ್ತಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ, ಕೋಳಿಕ್ಕೋಡ್ ನ ಕರಿಪುರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ (ಆ 8) ಪತನಗೊಂಡು, ಎರಡು ಪೈಲಟ್ ಸೇರಿದಂತೆ, ಹದಿನೆಂಟು ಜನ ಸಾವನ್ನಪ್ಪಿದ್ದರು.
Recommended Video
ಈ ವಂದೇಮಾತರಂ ವಿಶೇಷ ವಿಮಾನ, ಟೇಬಲ್ ಟಾಪ್ ರನ್ ವೇನಲ್ಲಿ ಲ್ಯಾಂಡಿಂಗ್ ಆಗುತ್ತಿದ್ದ ವೇಳೆ ಜಾರಿ, ಮೂವತ್ತು ಅಡಿ ಕಮರಿಯಲ್ಲಿ ಬಿದ್ದು ವಿಮಾನ ಎರಡು ಭಾಗವಾಗಿತ್ತು. ಅತ್ಯಂತ ಪರಿಣಿತ ಪೈಲಟ್ ಇದ್ದರೂ, ವಿಮಾನ ಅಪಘಾತಕ್ಕೀಡಾಗಿದೆ.
ಈ ವಿಮಾನ ದುರಂತ, ಟೇಬಲ್ ಟಾಪ್ ರನ್ ವೇಗಳು ಸುರಕ್ಷಿತವೇ ಎನ್ನುವ ಪ್ರಶ್ನೆಯನ್ನು ಹುಟ್ಟು ಹಾಕುತ್ತದೆ. 2010ರಲ್ಲಿ ಮಂಗಳೂರಿನಲ್ಲಿ ನಡೆದ ಏರ್ ಇಂಡಿಯಾ ಎಕ್ಸ್ಪ್ರೆಸ್ ಅಪಘಾತದ ನಂತರ ಸುರಕ್ಷತೆಯ ಬಗ್ಗೆ ಮೊದಲು ಕಳವಳ ವ್ಯಕ್ತಪಡಿಸಲಾಗಿತ್ತು. 160 ಪ್ರಯಾಣಿಕರು ಮಂಗಳೂರು ಅಪಘಾತದಲ್ಲಿ ಸಾವನ್ನಪ್ಪಿದ್ದರು.
ಮಂಗಳೂರು ವಿಮಾನ ಅಪಘಾತದ ವಿಚಾರಣೆಯ ವೇಳೆ, ಭಾರತದ ಮಾಜಿ ವಾಯುಪಡೆಯ ಮುಖ್ಯಸ್ಥರು, ಇಂತಹ ರನ್ ವೇಗಳು ಸುರಕ್ಷಿತವಲ್ಲ ಎಂದು ಹೇಳಿರುವ ಅಂಶಗಳು ತನಿಖಾ ವರದಿಯಲ್ಲಿ ಉಲ್ಲೇಖವಾಗಿತ್ತು.

ಕೋಳಿಕ್ಕೋಡ್ ನ ಕರಿಪುರ್ ವಿಮಾನ ನಿಲ್ದಾಣ
ದೇಶದಲ್ಲಿ ಮೂರು ಈ ರೀತಿಯಿರುವ ರನ್ ವೇ ವಿಮಾನ ನಿಲ್ದಾಣಗಳಲ್ಲಿ, ಕೋಳಿಕ್ಕೋಡ್ ನ ಕರಿಪುರ್ ವಿಮಾನ ನಿಲ್ದಾಣ ಕೂಡಾ ಒಂದು. ಏರ್ ಮಾರ್ಷಲ್ ಬಿ.ಎನ್. ಗೋಖಲೆ ಅವರ ವರದಿಯಲ್ಲಿ ಟೇಬಲ್ ಟಾಪ್ ವಿಮಾನ ನಿಲ್ದಾಣಗಳಲ್ಲಿ, ವಿಮಾನ ಕಾರ್ಯಾಚರಣೆ ನಡೆಸುವಾಗ ನಿಪುಣ ಪೈಲಟ್ ಮತ್ತು ಎಚ್ಚರಿಕೆಯ ಹೊಂದಿರಬೇಕಾಗುತ್ತದೆ ಎಂದು ಹೇಳಲಾಗಿದೆ.

ಮಂಗಳೂರು ಅಪಘಾತ
ಮಂಗಳೂರು ಅಪಘಾತದಂತೆಯೇ ‘ಅಂಡರ್ ಶೂಟಿಂಗ್' ಮತ್ತು ‘ಓವರ್ ಶೂಟಿಂಗ್' ಅಪಾಯಕ್ಕೆ ಕಾರಣವಾಗಬಹುದು ಎಂದು ವರದಿಯಲ್ಲಿ ಹೇಳಲಾಗಿತ್ತು. ಟೇಬಲ್ ಟಾಪ್ ವಿಮಾನ ನಿಲ್ದಾಣದ ರನ್ ವೇ ಸೀಮಿತ ಸ್ಥಳವನ್ನು ಹೊಂದಿರುತ್ತದೆ. ಪ್ರಮುಖವಾಗಿ, ಹವಾಮಾನ ಸರಿಯಿಲ್ಲದೇ ಪಕ್ಷದಲ್ಲಿ ವಿಮಾನ ಸಂಚಾರ ಸುರಕ್ಷಿತವಲ್ಲ ಎಂದು ಗೋಖಲೆಯವರ ವರದಿಯಲ್ಲಿ ಹೇಳಲಾಗಿತ್ತು.

ಅಂತರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳು ಸೇವೆಯನ್ನು ಹಿಂದಕ್ಕೆ ಪಡೆದಿದ್ದವು
ಈ ಕಾರಣಗಳಿಂದಾಗಿ, ಕೋಳಿಕ್ಕೋಡ್ ಗೆ ಅಂತರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳು ಸೇವೆಯನ್ನು ಹಿಂದಕ್ಕೆ ಪಡೆದಿದ್ದವು. ಆದರೆ, ಶುಕ್ರವಾರ ಕೋಳಿಕ್ಕೋಡ್ ಗೆ ವಂದೇ ಮಾತರಂ ಮಿಷನ್ ಅಡಿಯಲ್ಲಿ ಅನುಮತಿಯನ್ನು ನೀಡಲಾಗಿತ್ತು. 24/6 ಉದ್ದದ ರನ್ ವೇಗಳು ಏರ್ ಬಸ್, ಬೋಯಿಂಗ್ ವಿಮಾನಗಳಿಗೆ ಸಾಕಾದರೂ, ಟೇಬಲ್ ಟಾಪ್ ರನ್ ವೇಗಳಿಗೆ ಇದು ಸುರಕ್ಷಿತವಲ್ಲ ಎಂದು ವರದಿಯಲ್ಲಿ ಉಲ್ಲೇಖವಾಗಿತ್ತು.

ರನ್ ವೇಯ ಕೆಲ ಭಾಗಗಳಲ್ಲಿ ಸೂಕ್ತ ಬೆಳಕಿನ ವ್ಯವಸ್ಥೆ ಇಲ್ಲ
ಭಾರತದಲ್ಲಿ ಮೂರು ಟೇಬಲ್ ಟಾಪ್ ವಿಮಾನ ನಿಲ್ದಾಣಗಳಿವೆ, ಮಂಗಳೂರು, ಕೋಳಿಕ್ಕೋಡ್ ಮತ್ತು ಲೆಂಗ್ ಪುಯಿ. ರನ್ ವೇಯ ಕೆಲ ಭಾಗಗಳಲ್ಲಿ ಸೂಕ್ತ ಬೆಳಕಿನ ವ್ಯವಸ್ಥೆ ಇಲ್ಲ. ವಿಪರೀತ ಮಳೆ ಹೊಯ್ಯುತ್ತಿದ್ದರಿಂದ, ಪೈಲಟ್ಗಳಿಗೆ ಸೂಕ್ತವಾಗಿ ರನ್ ವೇ ಕಾಣಿಸದೇ ಇರಬಹುದು ಎಂದು ಅಪಘಾತಕ್ಕೆ ಸಂಭಾವ್ಯ ಕಾರಣ ಎಂದು ಹೇಳಲಾಗುತ್ತಿದೆ.












Click it and Unblock the Notifications