ಕೊಚ್ಚಿ ನೌಕಾನೆಲೆಯಲ್ಲಿ ಅಪಘಾತ: ನೌಕಾಪಡೆಯ ಇಬ್ಬರ ಸಾವು
ತಿರುವನಂತಪುರಂ, ಡಿಸೆಂಬರ್ 27: ಕೇರಳದ ಕೊಚ್ಚಿಯಲ್ಲಿನ ನೌಕಾನೆಲೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ನೌಕಾಪಡೆಯ ಇಬ್ಬರು ಸಿಬ್ಬಂದಿ ಮೃತಪಟ್ಟಿದ್ದಾರೆ.
ಹೆಲಿಕಾಪ್ಟರ್ ಹ್ಯಾಂಗರ್ನ ಭಾರಿ ತೂಕದ ಬಾಗಿಲು ಕಳಚಿ ಬಿದ್ದು ಇಬ್ಬರು ಮೃತಪಟ್ಟಿದ್ದಾರೆ. ಕೊಚ್ಚಿಯಲ್ಲಿನ ದಕ್ಷಿಣ ನೌಕಾನೆಲೆಯಲ್ಲಿ ಈ ದುರಂತ ಸಂಭವಿಸಿದೆ.
ಐಎನ್ಎಸ್ ಗರುಡಾದ ನಿಲ್ದಾಣವನ್ನು ನಿಲ್ಲಿಸುವ ಸ್ಥಳದಲ್ಲಿ ಹ್ಯಾಂಗರ್ನ ಪಕ್ಕಕ್ಕೆ ತಳ್ಳುವಂತಹ ಬಾಗಿಲುಗಳಲ್ಲಿ ಒಂದು ಭಾಗ ಬೆಳಿಗ್ಗೆ 10 ಗಂಟೆ ವೇಳೆಗೆ ಕಳಚಿಬಿದ್ದಿದೆ. ಇದರಿಂದ ಗಾಯಗೊಂಡ ಇಬ್ಬರು ಸಿಬ್ಬಂದಿ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ ಎಂದು ರಕ್ಷಣಾ ಇಲಾಖೆ ವಕ್ತಾರರು ತಿಳಿಸಿದ್ದಾರೆ.
ಮೃತರು ಐಎನ್ಎಸ್ ಗರುಡಾದ ಸಿಬ್ಬಂದಿಯಾದ ನವೀನ್ ಮತ್ತು ಅಜಿತ್ ಎಂದು ಗುರುತಿಸಲಾಗಿದೆ. ಘಟನೆ ಬಗ್ಗೆ ತನಿಖೆ ನಡೆಸುವಂತೆ ಸೂಚಿಸಲಾಗಿದೆ.
ನಿಲ್ಲಿಸಿದ್ದ ಹೆಲಿಕಾಪ್ಟರ್ ಬಳಿ ಸಿಬ್ಬಂದಿಯಿಬ್ಬರೂ ನಿಂತಿದ್ದರು. ಆಗ ಇದ್ದಕ್ಕಿದ್ದಂತೆ ಹ್ಯಾಂಗರ್ ಬಾಗಿಲು ಕಳಚಿ ಅವರ ಮೇಲೆಯೇ ಬಿದ್ದಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ತೀವ್ರ ಗಾಯಗೊಂಡಿದ್ದ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು.