ಲತೀಶಾಳ ಮನಮಿಡಿವ ಕತೆ: Oxygen ಸಿಲಿಂಡರ್ ನೊಂದಿಗೆ UPSC ಪರೀಕ್ಷೆ
ನವದೆಹಲಿ, ಜೂನ್ 03: ಕೇರಳದ ಕೊಟ್ಟಾಯಂನ 24 ವರ್ಷ ವಯಸ್ಸಿನ ಯುವತಿಗೆ ಅಪರೂಪದ ಮೂಳೆ ಕಾಯಿಲೆ(bone disorder), ಆದರೆ, ಐಎಎಸ್ ಅಧಿಕಾರಿಯಾಗಬೇಕೆಂಬ ಕನಸು ಮಾತ್ರ ಎಂದಿಗೂ ಕರಗಿರಲಿಲ್ಲ. ನೋವಿನ ನಡುವೆ, ಉಸಿರಾಟದ ತೊಂದರೆ ಲೆಕ್ಕಿಸದೆ ಅಕ್ಸಿಜನ್ ಸಿಲಿಂಡರ್ ನೊಂದಿಗೆ ನಾಗರಿಕ ಸೇವಾ ಪೂರ್ವಭಾವಿ (UPSC CSE prelims) ಪರೀಕ್ಷೆ ಬರೆದಿದ್ದಾರೆ.
ಐಎಎಸ್ ಅಧಿಕಾರಿಯಾಗುವ ಕನಸು ಹೊತ್ತ ಯುವತಿಯ ಹೆಸ್ರು ಲತೀಶಾ ಅನ್ಸಾರಿ. ಕೇಂದ್ರ ಲೋಕಸೇವಾ ಆಯೋಗ ಆಯೋಜಿಸಿದ್ದ ನಾಗರಿಕ ಸೇವಾ ಪೂರ್ವಭಾವಿ ಪರೀಕ್ಷೆಗೆ ಲತೀಶಾ ಅನ್ಸಾರಿ ಆಕ್ಸಿಜನ್ ಸಿಲಿಂಡರ್ ಜತೆಗೆ ವೀಲ್ಚೇರ್ನಲ್ಲಿ ಆಗಮಿಸಿ ಪರೀಕ್ಷೆ ಬರೆದಿದ್ದಾರೆ.
ಲತೀಶಾ ಅವರಿಗೆ ಹುಟ್ಟಿನಿಂದ type II Osteogenesis Imperfecta (ಈ ಸಮಸ್ಯೆಯುಳ್ಳವರ ಮೂಳೆ ಬೇಗ ಮುರಿಯುತ್ತದೆ) ಸಮಸ್ಯೆ ಇದೆ. ಕಳೆದ ಒಂದು ವರ್ಷದಿಂದ ಶ್ವಾಸಕೋಶದಲ್ಲಿ ಸಮಸ್ಯೆ ಉಂಟಾಗಿದ್ದು, ಉಸಿರಾಟದ ತೊಂದರೆ ಅಧಿಕವಾಗಿದೆ. ಹೀಗಾಗಿ, ಯಾವಾಗಲೂ ಆಕ್ಸಿಜನ್ ಸಿಲಿಂಡರ್ ಹೊತ್ತು ತಿರುಗಬೇಕು.

ಪುಟ್ಟ ದೇಹ ಹೊಂದಿರುವ ಲತೀಶಾರನ್ನು ಅವರ ತಂದೆ ಅನ್ಸಾರಿ ಹೊತ್ತುಕೊಂಡು ತಿರುಗುತ್ತಾರೆ. ಆದರೆ, ಎರುಮೆಲಿ ಗ್ರಾಮದಲ್ಲಿ ಅಷ್ಟಾಗಿ ಸೌಲಭ್ಯ ಸಿಗುತ್ತಿರಲಿಲ್ಲ. ಲತೀಶಾರ ಅನಾರೋಗ್ಯದ ಬಗ್ಗೆ ಕೊಟ್ಟಾಯಂನ ಜಿಲ್ಲಾಧಿಕಾರಿ ಪಿಆರ್ ಸುಧೀರ್ ಬಾಬು ಗೆ ತಿಳಿದು ಬಂದಿದೆ. ಪರೀಕ್ಷಾ ಕೇಂದ್ರಕ್ಕೆ ಆಕ್ಸಿಜನ್ ಸಿಲಿಂಡರ್ ಕೊಂಡೊಯ್ಯಲು ಅನುಮತಿ ನೀಡಿದ್ದಾರೆ.
'ಪರೀಕ್ಷಾ ಕೇಂದ್ರಕ್ಕೆ ಆಕ್ಸಿಜನ್ ಸಿಲಿಂಡರ್ ಕೊಂಡೊಯ್ಯಲು ಆಕೆಗೆ ಅನುಮತಿ ನೀಡಿದ ಕೊಟ್ಟಾಯಂನ ಜಿಲ್ಲಾಧಿಕಾರಿ ಪಿ.ಆರ್. ಸುಧೀರ್ ಬಾಬು ಅವರಿಗೆ ಧನ್ಯವಾದಗಳು'' ಎಂದು ಅನ್ಸಾರಿ ಹೇಳಿದ್ದಾರೆ.
ಉಚಿತ ವೆಚ್ಚದಲ್ಲಿ ಸುಲಭವಾಗಿ ಸಾಗಿಸಬಹುದಾದ ಆಕ್ಸಿಜನ್ ಸಿಲಿಂಡರ್ ಅನ್ನು ಒದಗಿಸಲು ಮುಂದಾಗಿದ್ದೇವೆ, ಈ ಕುರಿತಂತೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಜಿಲ್ಲಾಧಿಕಾರಿ ಸುಧೀರ್ ಬಾಬು ಅವರು ಪಿಟಿಐಗೆ ಪ್ರತಿಕ್ರಿಯಿಸಿದ್ದಾರೆ
''ನಾನು ಕಳೆದ ಒಂದೂವರೆ ವರ್ಷದಿಂದ ನಾಗರಿಕ ಸೇವಾ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದೇನೆ. ಉತ್ತಮ ಫಲಿತಾಂಶ ದೊರೆಯಲಿದೆ ಎಂಬ ಭರವಸೆ ನನಗಿದೆ'' ಎಂದು ಲತೀಶಾ ಹೇಳಿದ್ದಾರೆ.
ಎಂಕಾಂ ಪೂರ್ಣಗೊಳಿಸಿರುವ ಲತೀಶಾ ಮಲೆಯಾಳಂವನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಂಡು ಪರೀಕ್ಷೆ ಬರೆದಿದ್ದಾರೆ.
'ಲತೀಶಾ ಅವರಂಥ ಐಎಎಸ್ ಆಕಾಂಕ್ಷಿಗಳಿಗೆ ಯುಪಿಎಸ್ಸಿ ಉತ್ತಮ ಸೌಲಭ್ಯ ನೀಡಬೇಕಾದ ಅಗತ್ಯ ಇದೆ. ಲತೀಶಾಗೆ ಪ್ರತಿ ತಿಂಗಳಿಗೆ 25 ಸಾವಿರ ರೂಪಾಯಿ ವೈದ್ಯಕೀಯ ವೆಚ್ಚಕ್ಕೆ ಬೇಕಾಗುತ್ತದೆ' ಎಂದು ಆನುವಂಶೀಯ ಕಾಯಿಲೆಯಿಂದ ಮಕ್ಕಳಿಗಾಗಿ ಕಾರ್ಯ ನಿರ್ವಹಿಸುತ್ತಿರುವ ಅಮೃತವರ್ಷಿಣಿ ಚಾರಿಟೆಬಲ್ ಸೊಸೈಟಿಯ ಲತಾ ನಾಯರ್ ಹೇಳಿದ್ದಾರೆ.
ಭಾನುವಾರ(ಜೂನ್ 02)ದಂದು ದೇಶದ 72ಕ್ಕೂ ಅಧಿಕ ನಗರಗಳಲ್ಲಿ ನಾಗರಿಕ ಸೇವಾ ಪರೀಕ್ಷೆ ಆಯೋಜಿಸಲಾಗಿತ್ತು.












Click it and Unblock the Notifications