ಲಕ್ಷದ್ವೀಪದ ಶಾಲೆಗಳಲ್ಲಿ ಮಾಂಸಾಹಾರ ನಿಷೇಧ ಆದೇಶ ತಡೆಹಿಡಿದ ಕೇರಳ ಹೈಕೋರ್ಟ್
ತಿರುವನಂತಪುರಂ, ಜೂನ್ 22: ಲಕ್ಷದ್ವೀಪದ ಹೊಸ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ನೇತೃತ್ವದಲ್ಲಿ ಈಚೆಗೆ ಮಂಡನೆಯಾದ ಎರಡು ಆದೇಶಗಳನ್ನು ಕೇರಳ ಹೈಕೋರ್ಟ್ ಮಂಗಳವಾರ ತಡೆ ಹಿಡಿದಿದೆ.
ದ್ವೀಪದಲ್ಲಿನ ಡೈರಿ ಫಾರಂಗಳನ್ನು ಮುಚ್ಚಬೇಕು ಹಾಗೂ ಶಾಲಾ ಮಕ್ಕಳ ಮಧ್ಯಾಹ್ನದ ಊಟದಿಂದ ಮಾಂಸಾಹಾರ ತೆಗೆದುಹಾಕಬೇಕೆಂಬ ಪ್ರಫುಲ್ ಖೋಡಾ ಆದೇಶಕ್ಕೆ ತಡೆ ನೀಡಲಾಗಿದೆ.
ಪ್ರಫುಲ್ ಖೋಡಾ ಪಟೇಲ್ ವಿರುದ್ಧ ಲಕ್ಷದ್ವೀಪದಲ್ಲಿ ಪ್ರತಿಭಟನೆ
ಪ್ರಫುಲ್ ಖೋಡಾ ಅವರ ಈ ಆದೇಶಗಳು ಗುಪ್ತ ಹಾಗೂ ವೈಯಕ್ತಿಕ ಅಜೆಂಡಾಗಳನ್ನು ಆಧರಿಸಿದ್ದಾಗಿದೆ ಮತ್ತು ದ್ವೀಪ ನಿವಾಸಿಗಳ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಅಜ್ಮಲ್ ಅಹ್ಮದ್ ಆರ್ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಮುಖ್ಯ ನ್ಯಾಯಮೂರ್ತಿ ಎಸ್. ಮಣಿಕುಮಾರ್ ಮತ್ತು ನ್ಯಾಯಮೂರ್ತಿ ಶಾಜಿ ಪಿ ಚಾಲಿ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಆದೇಶಗಳಿಗೆ ತಡೆ ಒಡ್ಡಿದೆ.
"ಕೇಂದ್ರ ಸರ್ಕಾರ ಪ್ರತಿ ಅಫಿಡವಿಟ್ ಸಲ್ಲಿಸುವವರೆಗೆ ಈ ಎರಡು ನಿರ್ಧಾರಗಳ ಕುರಿತು ಯಾವುದೇ ಕ್ರಮ ತೆಗೆದುಕೊಳ್ಳುವಂತಿಲ್ಲ" ಎಂದು ನ್ಯಾಯಾಲಯ ಹೇಳಿದೆ.
ಡೈರಿ ಫಾರಂಗಳನ್ನು ಮುಚ್ಚುವ ವಿವಾದಾತ್ಮಕ ಆದೇಶವನ್ನು ಮೇ 21ರಂದು ಪಶು ಸಂಗೋಪನಾ ಇಲಾಖೆ ನಿರ್ದೇಶಕರು ಅಂಗೀಕರಿಸಿದ್ದರು.
"ಆದರೆ ಮಕ್ಕಳ ಆಹಾರ ಪದ್ಧತಿ ಬದಲಿಸುವುದು ದುರುದ್ದೇಶಪೂರಿತವಾಗಿದೆ. ಯಾರೊಂದಿಗೂ ಚರ್ಚಿಸದೇ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮಿಡ್ ಡೇ ಮೀಲ್ ಕಾರ್ಯಕ್ರಮವನ್ನು ಬೆಂಗಳೂರು ಮೂಲದ ಅಕ್ಷಯ ಪಾತ್ರ ಎನ್ಜಿಒಗೆ ವಹಿಸುವ ನಿರ್ಧಾರ ಇದಾಗಿದೆ" ಎಂದು ಆರೋಪಿಸಿದ್ದರು. ಆಡಳಿತಾಧಿಕಾರಿ ಪುರಾತನದಿಂದ ನಡೆದುಕೊಂಡು ಬಂದಿರುವ ಸಂಸ್ಕೃತಿ, ಪರಂಪರೆ ಮೇಲೆ ಆಕ್ರಮಣ ಮಾಡುತ್ತಿದ್ದಾರೆ. ಜನರ ಆಹಾರ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ದೂರಿದ್ದರು.
ಡಿಸೆಂಬರ್ನಿಂದ ಅಧಿಕಾರದಲ್ಲಿರುವ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ನಿರಂಕುಶವಾದಿ ನಡೆ ವಿರೋಧಿಸಿ ಲಕ್ಷದ್ವೀಪದಲ್ಲಿ ಪ್ರತಿಭಟನೆಯೂ ನಡೆದಿವೆ.