'ಅದು ಜಾಹೀರಾತಲ್ಲ': ಲಸಿಕೆ ಪ್ರಮಾಣಪತ್ರದಲ್ಲಿ ಮೋದಿ ಚಿತ್ರ ವಿರುದ್ಧದ ಮೇಲ್ಮನವಿ ವಜಾ
ತಿರುವನಂತಪುರಂ, ಜನವರಿ 25: ಕೊರೊನಾ ಲಸಿಕೆ ಪ್ರಮಾಣ ಪತ್ರದಲ್ಲಿ ಪ್ರಧಾನ ಮಂತ್ರಿ ಚಿತ್ರವು ಜಾಹೀರಾತಲ್ಲ ಮತ್ತು ಸಂದೇಶ ನೀಡಲು ಪ್ರಧಾನಿಗೆ ಹಕ್ಕಿದೆ ಎಂದು ಹೇಳಿದ ಕೇರಳ ಹೈಕೋರ್ಟ್ನ ವಿಭಾಗೀಯ ಪೀಠವು ಜನವರಿ 25, ಮಂಗಳವಾರ, ಲಸಿಕೆ ಪ್ರಮಾಣಪತ್ರದ ಮೇಲಿನ ಪ್ರಧಾನಿಯವರ ಭಾವಚಿತ್ರದ ವಿರುದ್ಧ ಸಲ್ಲಿಕೆಯಾಗಿದ್ದ ಮೇಲ್ಮನವಿಯನ್ನು ವಜಾಗೊಳಿಸಿದೆ.
ಕೇರಳ ಹೈಕೋರ್ಟ್ನ ಏಕಸದಸ್ಯ ಪೀಠವು ಕಳೆದ ತಿಂಗಳು ಕೋವಿನ್ ಪೋರ್ಟಲ್ ಮೂಲಕ ಪಡೆದ ಕೋವಿಡ್-19 ಲಸಿಕೆ ಪ್ರಮಾಣಪತ್ರದಿಂದ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರವನ್ನು ತೆಗೆದುಹಾಕುವಂತೆ ಕೋರಿದ ಮನವಿಯನ್ನು ವಜಾಗೊಳಿಸಿತ್ತು. ಹಾಗೆಯೇ ಒಂದು ಲಕ್ಷ ರೂಪಾಯಿ ದಂಡವನ್ನು ವಿಧಿಸಿತ್ತು.
ಕಡುತುರುತಿಯ ಕಾಂಗ್ರೆಸ್ ಕಾರ್ಯಕರ್ತ ಮತ್ತು ಜನರ ಮಾಹಿತಿ ಹಕ್ಕು ರಾಷ್ಟ್ರೀಯ ಅಭಿಯಾನದ ರಾಜ್ಯ ಸಂಯೋಜಕ ಪೀಟರ್ ಮೈಲಿಯಾಪರಂಪಿಲ್ ಮನವಿ ಸಲ್ಲಿಸಿದ್ದಾರೆ. ಇದಕ್ಕೂ ಮೊದಲು, ಹೈಕೋರ್ಟ್ ಇವರ ಮನವಿಯನ್ನು "ಕ್ಷುಲ್ಲಕ" ಎಂದು ಕರೆದು ವಜಾಗೊಳಿಸಿತ್ತು. ಆದರೆ ಈಗ ಹೈಕೋರ್ಟ್ನ ವಿಭಾಗೀಯ ಪೀಠದ ಮುಂದೆ ಮೇಲ್ಮನವಿ ಸಲ್ಲಿಸಿದ್ದಾರೆ.

ವಕೀಲ ಅಜಿತ್ ಜಾಯ್ ಪರವಾಗಿ ಹಾಜರಾದ ಪೀಟರ್, ಏಕ ನ್ಯಾಯಾಧೀಶರು ಅರ್ಜಿಯನ್ನು ವಜಾಗೊಳಿಸಿದ್ದಾರೆ. "ಸರಿಯಾಗಿ ಒಳಗೊಂಡಿರುವ ಸತ್ಯಗಳು ಮತ್ತು ಸಾಂವಿಧಾನಿಕ ನಿಬಂಧನೆಗಳನ್ನು ಸರಿಯಾಗಿ ಶ್ಲಾಘಿಸದೆ 1 ಲಕ್ಷ ರೂಪಾಯಿ ವೆಚ್ಚವನ್ನು ವಿಧಿಸಿದ್ದಾರೆ," ಎಂದು ವಾದಿಸಿದ್ದಾರೆ ಎಂದು ವರದಿಯು ಉಲ್ಲೇಖ ಮಾಡಿದೆ. ಆದರೆ ಮುಖ್ಯ ನ್ಯಾಯಮೂರ್ತಿ ಎಸ್ ಮಣಿಕುಮಾರ್ ಮತ್ತು ನ್ಯಾಯಮೂರ್ತಿ ಶಾಜಿ ಪಿ ಚಾಲಿ ಅವರಿದ್ದ ವಿಭಾಗೀಯ ಪೀಠವು ಮೇಲ್ಮನವಿಯನ್ನು ವಜಾಗೊಳಿಸಿದೆ.
ಪ್ರಧಾನ ಮಂತ್ರಿಗೆ ಸಂದೇಶ ನೀಡುವ ಹಕ್ಕಿದೆ ಎಂದು ಹೈಕೋರ್ಟ್
ಕೋವಿಡ್ ಲಸಿಕೆ ಪ್ರಮಾಣ ಪತ್ರದಲ್ಲಿರುವ ಪ್ರಧಾನಮಂತ್ರಿಯವರ ಭಾವಚಿತ್ರವು "ಜಾಹೀರಾತು ಅಲ್ಲ" ಮತ್ತು "ಪ್ರಧಾನಿ ಸಂದೇಶವನ್ನು ನೀಡುವ ಹಕ್ಕಿದೆ" ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಇನ್ನು ಕೋವಿಡ್ ಲಸಿಕೆ ಪ್ರಮಾಣಪತ್ರದಿಂದ ಪ್ರಧಾನಿ ನರೇಂದ್ರ ಮೋದಿ ಚಿತ್ರವನ್ನು ತೆಗೆದುಹಾಕುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಕೇರಳ ಹೈಕೋರ್ಟ್ ಈ ಹಿಂದೆ ವಜಾ ಮಾಡಿ ಈ ಅರ್ಜಿಯನ್ನು, "ಕ್ಷುಲ್ಲಕ ಅರ್ಜಿ" ಹಾಗೂ "ರಾಜಕೀಯ ಪ್ರೇರಿತ ಅರ್ಜಿ" ಎಂದು ಕರೆದಿದೆ. ಹಾಗೆಯೇ ಅರ್ಜಿದಾರರ ವಿರುದ್ಧ ಕೋರ್ಟ್ನ ಸಮಯ ವ್ಯರ್ಥ ಮಾಡಿದ್ದಕ್ಕೆ ಒಂದು ಲಕ್ಷ ರೂಪಾಯಿ ವೆಚ್ಚವಾಗಿ ಪಾವತಿಸಿ ಎಂದು ಹೇಳಿದೆ.
ಅರ್ಜಿಯನ್ನು ರದ್ದು ಮಾಡಿದ ನ್ಯಾಯಮೂರ್ತಿ ಪಿ ವಿ ಕುಂಞಿಕೃಷ್ಣನ್, ಆರು ವಾರಗಳಲ್ಲಿ ಕೇರಳ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ (ಕೆಎಲ್ಎಸ್ಎ) ಪರವಾಗಿ ವೆಚ್ಚವನ್ನು ಠೇವಣಿ ಮಾಡುವಂತೆ ಅರ್ಜಿದಾರರಾದ ಪೀಟರ್ ಮೈಲಿಪರಂಪಿಲ್ಗೆ ಸೂಚನೆ ನೀಡಿತ್ತು. ಒಂದು ವೇಳೆ ಈ ವೆಚ್ಚವನ್ನು ಠೇವಣಿ ಮಾಡುವಲ್ಲಿ ವಿಫಲವಾದರೆ ಕೆಎಲ್ಎಸ್ಎ ಅರ್ಜಿದಾರರ ವಿರುದ್ಧ ಕ್ರಮ ಕೈಗೊಳ್ಳಲಿದೆ. ಆಸ್ತಿಯನ್ನು ಜಪ್ತಿ ಮಾಡುವ ಮೂಲಕ ಮೊತ್ತವನ್ನು ವಸೂಲಿ ಮಾಡಲಾಗುತ್ತದೆ ಎಂದು ನ್ಯಾಯಾಲಯ ಹೇಳಿತ್ತು. ನ್ಯಾಯಾಂಗದ ಸಮಯವನ್ನು ವ್ಯರ್ಥ ಮಾಡುವ ಈ ರೀತಿಯ ಕ್ಷುಲ್ಲಕ ಅರ್ಜಿಯನ್ನು ನಾವು ಪರಿಗಣಿಸುವುದಿಲ್ಲ ಎಂದು ಜನರಿಗೆ ಮತ್ತು ಸಮಾಜಕ್ಕೆ ತಿಳಿಸಲು ವೆಚ್ಚವನ್ನು ವಿಧಿಸಲಾಗುತ್ತಿದೆ ಎಂದು ಕೂಡಾ ನ್ಯಾಯಾಲಯವು ಹೇಳಿದೆ. ನ್ಯಾಯಾಲಯಗಳಲ್ಲಿ ಸಾವಿರಾರು ಕ್ರಿಮಿನಲ್ ಮೇಲ್ಮನವಿಗಳು, ಜಾಮೀನು ಅರ್ಜಿಗಳು, ಸಿವಿಲ್ ಮೊಕದ್ದಮೆಗಳು ಮತ್ತು ವೈವಾಹಿಕ ಪ್ರಕರಣಗಳು ಬಾಕಿ ಇರುವಾಗ, ಕ್ಷುಲ್ಲಕ ಅರ್ಜಿಗಳು ನ್ಯಾಯಾಲಯದ ಸಮಯವನ್ನೇ ವ್ಯರ್ಥ ಮಾಡುತ್ತದೆ ಎಂದು ಕೂಡಾ ಕೋರ್ಟ್ ಹೇಳಿದೆ.
ಈ ಹಿಂದೆ ಕೋವಿಡ್ ಲಸಿಕೆ ಪ್ರಮಾಣಪತ್ರದಿಂದ ಪ್ರಧಾನಿ ನರೇಂದ್ರ ಮೋದಿ ಚಿತ್ರವನ್ನು ತೆಗೆದುಹಾಕುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಆಲಿಸಿದ ಕೇರಳ ಹೈಕೋರ್ಟ್, "ಪ್ರಧಾನಿ ಚಿತ್ರವಿದ್ದರೆ ಏನು ತಪ್ಪು, ದೇಶದ ಪ್ರಧಾನಿಯ ಬಗ್ಗೆ ನಿಮಗೆ ನಾಚಿಕೆಯಾಗುತ್ತಿದೆಯೇ," ಎಂದು ಅರ್ಜಿದಾರರನ್ನು ಪ್ರಶ್ನಿಸಿತ್ತು.(ಒನ್ಇಂಡಿಯಾ ಸುದ್ದಿ)












Click it and Unblock the Notifications