ಸರ್ಕಾರಿ ನೌಕರರ ವೇತನ ಕಡಿತಕ್ಕೆ ತಡೆಯಾಜ್ಞೆ ನೀಡಿದ ಹೈಕೋರ್ಟ್
ತಿರುವನಂತಪುರಂ, ಏಪ್ರಿಲ್ 28 : ಸರ್ಕಾರಿ ನೌಕರರ ವೇತನ ಕಡಿತಗೊಳಿಸುವ ಕೇರಳ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಕೋವಿಡ್ - 19 ವಿರುದ್ಧದ ಹೋರಾಟಕ್ಕಾಗಿ ವೇತನ ಕಡಿತಗೊಳಿಸುವುದಾಗಿ ಸರ್ಕಾರ ಆದೇಶ ಹೊರಡಿಸಿತ್ತು.
Recommended Video
ಕೇರಳ ಹೈಕೋರ್ಟ್ ಮಂಗಳವಾರ ಕೇರಳ ಸರ್ಕಾರ ಏಪ್ರಿಲ್ 23ರಂದು ಹೊರಡಿಸಿದ್ದ ಆದೇಶಕ್ಕೆ ಎರಡು ತಿಂಗಳ ತಡೆಯಾಜ್ಞೆ ನೀಡಿದೆ. ಸರ್ಕಾರ ನೌಕರರ ಒಂದು ತಿಂಗಳ ವೇತನವನ್ನು 5 ಕಂತುಗಳಲ್ಲಿ ಕಡಿತಗೊಳಿಸಲು ತೀರ್ಮಾನಿಸಿತ್ತು.
20 ಸಾವಿರ ಮತ್ತು ಅದಕ್ಕಿಂತ ಹೆಚ್ಚು ವೇತನ ಪಡೆಯುವ ಎಲ್ಲರಿಗೂ ಇದು ಅನ್ವಯವಾಗಲಿದೆ ಎಂದು ಕೇರಳ ಸರ್ಕಾರ ಹೇಳಿತ್ತು. ಕೋವಿಡ್ - 19 ವಿರುದ್ಧದ ಹೋರಾಟ, ಲಾಕ್ ಡೌನ್ನಿಂದ ಆಗಿರುವ ನಷ್ಟದ ಹಿನ್ನಲೆಯಲ್ಲಿ ವೇತನ ಕಡಿತದ ತೀರ್ಮಾನವನ್ನು ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾಗಿತ್ತು.

ಸರ್ಕಾರದಿಂದ ಈ ಕುರಿತು ಅಧಿಕೃತ ಆದೇಶ ಪ್ರಕಟವಾದ ಬಳಿಕ ಹಲವಾರು ಅರ್ಜಿಗಳು ಕೇರಳ ಹೈಕೋರ್ಟ್ಗೆ ಸಲ್ಲಿಕೆಯಾಗಿತ್ತು. ಮಂಗಳವಾರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬೀಚು ಕುರಿಯನ್ ಥಾಮಸ್ ನೇತೃತ್ವದ ಏಕಸದಸ್ಯ ಪೀಠ ತಡೆಯಾಜ್ಞೆ ನೀಡಿದೆ.
ಪ್ರತಿಯೊಬ್ಬರು ಮಾಡಿದ ಕೆಲಸಕ್ಕೆ ವೇತನ ಪಡೆಯುತ್ತಾರೆ. ಡಿಸಾಸ್ಟರ್ ಮ್ಯಾನೇಜ್ಮೆಂಟ್ ಕಾಯ್ದೆ 2005ರ ಅಡಿ ವೇತನ ಕಡಿತ ಮಾಡಬಹುದು ಎಂಬ ಸರ್ಕಾರದ ತೀರ್ಮಾನವನ್ನು ನ್ಯಾಯಾಲಯ ಒಪ್ಪಲು ಸಾಧ್ಯವಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಕೇರಳದಲ್ಲಿ ಇದುವರೆಗೂ 486 ಜನರಿಗೆ ಕೊರೊನಾ ಸೋಂಕು ತಗುಲಿದೆ. ನಾಲ್ವರು ಮೃತಪಟ್ಟಿದ್ದಾರೆ. ಕೊರೊನಾ ನಿಯಂತ್ರಣದ ವಿಚಾರದಲ್ಲಿ ಕೇರಳ ಸರ್ಕಾರ ತೆಗೆದುಕೊಂಡ ಕ್ರಮಗಳಿಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು.












Click it and Unblock the Notifications