just in: ಕೇರಳ ಲಾಕಪ್ ಡೆತ್; 59 ಪೊಲೀಸ್ ಅಧಿಕಾರಿಗಳ ವರ್ಗಾವಣೆ
ತಿರುವನಂತಪುರಂ, ಜುಲೈ 27: ಕೇರಳದ ವಡಕರ ಪೊಲೀಸ್ ಠಾಣೆಯ ಲಾಕಪ್ ಡೆತ್ ಪ್ರಕರಣಕ್ಕೆ ಸಂಬಂಧಿಸಿದಂತೆ 59 ಅಧಿಕಾರಿಗಳನ್ನು ಮಂಗಳವಾರ ಗೃಹ ಇಲಾಖೆ ವರ್ಗಾವಣೆ ಮಾಡಿದ್ದು, ಮತ್ತೊಬ್ಬ ಅಧಿಕಾರಿಯನ್ನು ಅಮಾನತುಗೊಳಿಸಿದೆ.
ಅಪಘಾತ ಪ್ರಕರಣದಲ್ಲಿ ಆರೋಪಿಯಾಗಿದ್ದ 42 ವರ್ಷದ ಸಜೀವನ್ ಕಲ್ಲೇರಿ ಪೊಲೀಸ್ ಠಾಣೆಯಲ್ಲಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಡಕರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸೇರಿದಂತೆ 59 ಅಧಿಕಾರಿಗಳನ್ನು ಮಂಗಳವಾರ ಗೃಹ ಇಲಾಖೆ ವರ್ಗಾವಣೆ ಮಾಡಲಾಗಿದೆ. ಮತ್ತೊಬ್ಬ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. 70 ಜನರಿರುವ ಈ ಠಾಣೆಯ ಒಬ್ಬ ಅಧಿಕಾರಿಯನ್ನು ಮಾತ್ರ ಉಳಿಸಿಕೊಳ್ಳಲಾಗಿದೆ.
ಕೋಲೋತ್ ಮೂಲದ ಸಜೀವನ್ ಕಲ್ಲೇರಿ ಅವರ ಸಾವಿನ ಪ್ರಕರಣದ ಪ್ರಾಥಮಿಕ ತನಿಖೆಯ ಆಧಾರದ ಮೇಲೆ ಶುಕ್ರವಾರ ಮೂವರನ್ನು ಅಮಾನತುಗೊಳಿಸಿಸಲಾಗಿತ್ತು. ಜುಲೈ 21 ರ ಈ ಘಟನೆಗೆ ಮುಂಚೆಯೇ ಆರು ಮಂದಿ ವರ್ಗಾವಣೆ ಆದೇಶವನ್ನು ಪಡೆದಿದ್ದರು. ವರ್ಗಾವಣೆಗೊಂಡ ಎಲ್ಲ ಅಧಿಕಾರಿಗಳನ್ನು ಕೋಝಿಕ್ಕೋಡ್ ಗ್ರಾಮಾಂತರ ಪೊಲೀಸ್ ವ್ಯಾಪ್ತಿಯ ಠಾಣೆಗಳಲ್ಲಿ ನಿಯೋಜಿಸಲಾಗುತ್ತದೆ.

ಸಜೀವನ್ ಪ್ರಜ್ಞೆ ತಪ್ಪಿ ಸುಮಾರು 20 ನಿಮಿಷಗಳ ಕಾಲ ನೆಲದ ಮೇಲೆ ಬಿದ್ದಿದ್ದರು ಕೂಡ ಅಧಿಕಾರಿಗಳು ಥಳಿಸಿದ್ದಾರೆ ಎಂದು ಕುಟುಂಬದ ಸದಸ್ಯರು ಆರೋಪಿಸಿದ್ದಾರೆ. ಎದೆನೋವು ಎಂದು ಹೇಳಿದರೂ ಅಧಿಕಾರಿಗಳು ನಿರ್ಲಕ್ಷಿಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಸಜೀವನ್ ತಾನು ಕುಡಿದಿದ್ದನ್ನು ಒಪ್ಪಿಕೊಂಡರೂ ಎಸ್ಐ ಪದೇ ಪದೇ ಕಪಾಳಮೋಕ್ಷ ಮಾಡಿದ್ದಾನೆ ಎಂದು ಸಜೀವನ್ ಜೊತೆಗಿದ್ದವರು ಆರೋಪಿಸಿದ್ದರು.
ಇದರ ನಂತರ, ಸಜೀವನ್ ಅವರ ಕುಟುಂಬ ಮತ್ತು ಗ್ರಾಮಸ್ಥರು ಪ್ರತಿಭಟನೆಯನ್ನು ಪ್ರಾರಂಭಿಸಿದಾಗ ಅಪರಾಧ ವಿಭಾಗದ ಡಿವೈ ಎಸ್ಪಿ ಹರಿದಾಸ್ ತನಿಖೆಯನ್ನು ಪ್ರಾರಂಭಿಸಿದರು. ಶುಕ್ರವಾರ ಕಣ್ಣೂರು ವ್ಯಾಪ್ತಿಯ ಡಿಐಜಿ ರಾಹುಲ್ ಆರ್ ನಾಯರ್ ಅವರು ಎಸ್ಐ, ಸಹಾಯಕ ಎಸ್ಐ ಮತ್ತು ಸಿವಿಲ್ ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಿದ್ದಾರೆ.
ಕೋಝಿಕ್ಕೋಡ್ ಗ್ರಾಮಾಂತರ ಎಸ್ಪಿ ವರದಿಯಂತೆ, ಘಟನೆಯಲ್ಲಿ ಕ್ರಮ ಎದುರಿಸುತ್ತಿರುವ ಎಲ್ಲಾ ಪೊಲೀಸ್ ಅಧಿಕಾರಿಗಳು ಸಜೀವನ್ ಅವರ ಆರೋಗ್ಯ ಸ್ಥಿತಿಯನ್ನು ಸರಿಯಾಗಿ ನಿರ್ಣಯಿಸುವಲ್ಲಿ ವಿಫಲರಾಗಿದ್ದಾರೆ. ಅವರು ಸಜೀವನ್ ಮತ್ತು ಅವರ ಸ್ನೇಹಿತರ ವೈದ್ಯಕೀಯ ವರದಿಯನ್ನು ಪರಿಶೀಲಿಸಲಿಲ್ಲ. ಅವರು ಕೂಡ ಮದ್ಯ ಸೇವಿಸಿದ್ದರು.
ಸಾವಿಗೆ ಸಂಬಂಧಿಸಿದಂತೆ ರಾಜ್ಯ ಮಾನವ ಹಕ್ಕುಗಳ ಆಯೋಗವು ಜಿಲ್ಲಾ ಪೊಲೀಸ್ ಮುಖ್ಯಸ್ಥರಿಂದ ವರದಿ ಕೇಳಿದೆ.












Click it and Unblock the Notifications