ಕೊರೊನಾ ವೈರಸ್ ತಡೆಗೆ ಕೇರಳ ಸರ್ಕಾರದ ಯೋಜನೆ ಏನು ಗೊತ್ತಾ?
ಬೆಂಗಳೂರು, ಮಾ. 20: ಕೋವಿಡ್-19 ಎದುರಿಸಲು ಕೇರಳ ಸರ್ಕಾರ ಸಮರೋಪಾದಿಯಲ್ಲಿ ಕಾರ್ಯಕ್ರಮ ರೂಪಿಸುತ್ತಿದೆ. ಕೊರೊನಾ ವೈರಸ್ ತಡೆಯಲು ಹಾಗೂ ಕೊರೊನಾ ವೈರಸ್ ದಾಳಿಯಿಂದ ಆಗಿರುವ ಆರ್ಥಿಕ ಹಾನಿಯ ಹೊರೆ ಜನರ ಮೇಲೆ ಬೀಳುವುದನ್ನು ತಡೆಯಲು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ 20 ಸಾವಿರ ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ.
ಬಡತನೆ ರೇಖೆಗಿಂತ ಕೇಳಗಿರುವ ಹಾಗೂ ಎಪಿಎಲ್ ಕುಟುಂಬಗಳಿಗೂ ಮುಂದಿನ ಎರಡು ತಿಂಗಳುಗಳ ವರೆಗೆ ಆರ್ಥಿಕ ಸಹಾಯ ಹಸ್ತವನ್ನು ಕೇರಣ ಸಿಎಂ ಪಿಣರಾಯಿ ವಿಜಯನ್ ಘೋಷಣೆ ಮಾಡಿದ್ದಾರೆ. ಕೊರೊನಾ ವೈರಸ್ ದೃಢಪಟ್ಟಿದ್ದ ಪ್ರಕರಣಗಳು ದೇಶದಲ್ಲಿಯೆ ಮೊದಲು ಕೇರಳದಲ್ಲಿ ಪತ್ತೆಯಾಗಿದ್ದವು. ಅದಕ್ಕಾಗಿ ಕಟ್ಟಿನಿಟ್ಟಿನ ಕ್ರಮಗಳನ್ನು ಕೈಗೊಂಡಿರುವ ಸಿಎಂ ಪಿಣರಾಯಿ ಅವರು ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡುವ ಮೂಲಕ ಜನರಲ್ಲಿ ಧೈರ್ಯ ತುಂಬಿದ್ದಾರೆ.

ಕುಟುಂಬಶ್ರೀ ಯೋಜನೆಯಡಿ 2 ಸಾವಿರ ಕೋಟಿ ರೂ. ಸಾಲ ಸೌಲಭ್ಯ
ಕೇರಳ ರಾಜ್ಯದಲ್ಲಿ ಕುಟುಂಬಶ್ರೀ ಯೋಜನೆಯಡಿ ಬರುವ ಕುಟುಂಬಗಳಿಗೆ ಮುಂದಿನ ಎರಡು ತಿಂಗಳಲ್ಲಿ 2 ಸಾವಿರ ಕೋಟಿ ರೂ.ಗಳ ಸಾಲ ಸೌಲಭ್ಯ ಸಿಗಲಿದೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಮುಂದಿನ ಏಪ್ರಿಲ್ ಹಾಗೂ ಮೇ ತಿಂಗಳುಗಳಲ್ಲಿ ಕುಟುಂಬಶ್ರೀ ಯೊಜನೆಯಡಿ ಬರುವ ಕುಟುಂಬಗಳಿಗೆ ಆರ್ಥಿಕ ಸಹಾಯ ಒದಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ 2 ಸಾವಿರ ಕೋಟಿ ರೂ
ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ 2000 ಕೋಟಿ ರೂ.ಗಳನ್ನು ವಿತರಿಸಲು ಕೇರಳ ಸರ್ಕಾರ ತೀರ್ಮಾನ ಮಾಡಿದೆ. ವಿಧವಾ ವೇತನ, ವೃದ್ಧಾಪ್ಯವೃತನ ಸೇರಿದಂತೆ ಮುಂದಿನ ಎರಡು ತಿಂಗಳುಗಳ ಸಾಮಾಜಿಕ ಭದ್ರತಾ ಪಿಂಚಣಿಗಳನ್ನು ಮಾರ್ಚ್ನಲ್ಲಿಯೆ ಪಾವತಿಸಲಾಗುವುದು. ಈ ಎರಡು ತಿಂಗಳ ಪಿಂಚಣಿಯನ್ನು ಒಟ್ಟಿಗೆ ಠೇವಣಿ ಇಡುವುದಕ್ಕೆ 1320 ಕೋಟಿ ರೂ. ವ್ಯಯಿಸಲಾಗುವುದು ಎಂದು ಸಿಎಂ ಪಿಣರಾಯಿ ವಿಜನಯನ್ ತಿಳಿಸಿದ್ದಾರೆ.
ಸಾಮಾಜಿಕ ಭದ್ರತಾ ಪಿಂಚಣಿ ಪಡೆಯದ ಆರ್ಥಿಕ ತೊಂದರೆ ಇರುವ ಕುಟುಂಬಗಳಿಗೆ 1000 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಜೊತೆಗೆ ಬಿಪಿಎಲ್ ಕುಟುಂಬಗಳಿಗೆ 100 ಕೋಟಿ ರೂ.ಗಳಲ್ಲಿ ಎಲ್ಲ ಕುಟುಂಬಗಳಿಗೆ ಒಂದು ತಿಂಗಳ ಮೌಲ್ಯದ ಸಿರಿಧಾನ್ಯಗಳನ್ನು ವಿತರಣೆ ಮಾಡಲಾಗುವುದು. ಬಡತನ ರೇಖೆಗಿಂತ ಮೇಲಿನ ಕುಟುಂಬಗಳಿಗೆ ಕೊರೊನಾ ವೈರಸ್ ಹಾವಳಿ ಕಡಿಮೆಯಾಗುವವರೆಗೆ ಪ್ರತಿ ತಿಂಗಳು 10 ಕೆ.ಜಿ. ಅಕ್ಕಿಯನ್ನು ಸರ್ಕಾರ ವಿತರಣೆ ಮಾಡಲಿದೆ ಎಂದು ಅವರು ತಿಳಿಸಿದ್ದಾರೆ.

ಏಪ್ರಿಲ್ನಿಂದ 20 ರೂಪಾಯಿಗಳಿಗೆ ಊಟದ ಯೋಜನೆ ಜಾರಿ
ಕೇವಲ 20 ರೂಪಾಯಿಗಳಿಗೆ ಊಟ ಕೊಡುವಂತೆ 50 ಕೋಟಿ ರೂ.ಗಳ ವೆಚ್ಚದಲ್ಲಿ ಕೇರಳ ರಾಜ್ಯಾದ್ಯಂತ ಸಾವಿರಾರು ಹೊಟೆಲ್ಗಳನ್ನು ತೆರೆಯಲು ನಿರ್ಧಾರ ಮಾಡಲಾಗಿದೆ. ಏಪ್ರಿಲ್ ಮೊದಲ ವಾರದಲ್ಲಿಯೆ ಈ ಹೊಟೆಲ್ಗಳು ಕಾರ್ಯಾರಂಭ ಮಾಡಲಿವೆ. ಆರೋಗ್ಯ ರಕ್ಷಣೆಗೆ 500 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಗೋಷಣೆಯನ್ನು ಮಾಡಲಾಗಿದೆ.
ವಿವಿಧ ಇಲಾಖೆಗಳಲ್ಲಿ ಸರ್ಕಾರ ಬಾಕಿ ಉಳಿಸಿಕೊಂಡಿರುವ 14 ಸಾವಿರ ಕೋಟಿ ರೂ.ಗಳನ್ನು ತಕ್ಷಣವೆ ಬಿಡುಗಡೆ ಮಾಡಲು ಸಿಎಂ ಪಿಣರಾಯಿ ಆದೇಶ ಮಾಡಿದ್ದಾರೆ.

ಟ್ಯಾಕ್ಸಿ ಮತ್ತು ಆಟೋ ಚಾಲಕರಿಗೆ ವಿಶೇಷ ಪ್ಯಾಕೇಜ್
ಆಟೋ ರಿಕ್ಷಾ ಹಾಗೂ ಟ್ಯಾಕ್ಸಿ ಡ್ರೈವರ್ಗಳಿಗೆ ವಿಶೇಷ ಪ್ಯಾಕೇಜ್ನ್ನು ಕೇರಳ ಸರ್ಕಾರ ಘೋಷಣೆ ಮಾಡಿದೆ. ಆಟೊ ರಿಕ್ಷಾಗಳು ಭರಿಸಬೇಕಾಗಿದ್ದ ಫಿಟ್ನೆಸ್ ಶುಲ್ಕವನ್ನು ಮನ್ನಾ ಮಾಡಲಾಗುತ್ತದೆ. ಬಸ್ಗಳಲ್ಲಿ ಸ್ಟೇಜ್ ಕ್ಯಾರೇಜ್ ಮತ್ತು ಕಾಂಟ್ರಾಕ್ಟ್ ಕ್ಯಾರೇಜ್ಗಳಿಗೆ 3 ತಿಂಗಳಲ್ಲಿ 1 ತಿಂಗಳಿಗೆ ತೆರಿಗೆ ವಿನಾಯಿತಿ ಕೊಡಲಾಗುವುದು. ಇದಕ್ಕಾಗಿ 23.60 ಕೋಟಿ ರೂ. ಸರ್ಕಾರವೆ ಭರಿಸಲಿದೆ. ಇದರೊಂದಿಗೆ ವಿದ್ಯುತ್ ಮತ್ತು ನೀರಿನ ಬಿಲ್ಗಳನ್ನು ಪಾವತಿಸಲು ಜನರಿಗೆ ಒಂದು ತಿಂಗಳ ಹೆಚ್ಚಿನ ಕಾಲಾವಕಾಶ ಕೊಡಲಾಗಿದ್ದು, ಚಿತ್ರಮಂದಿರಗಳ ಮೇಲಿನ ಮನರಂಜನಾ ತೆರಿಗೆಯನ್ನು ಮನ್ನಾ ಮಾಡಲು ರಾಜ್ಯ ನಿರ್ಧರಿಸಿದೆ.

ಕಾಸರಗೋಡಿನಲ್ಲಿ ಮತ್ತೊಂದು ಕೋವಿಡ್ 19 ಪ್ರಕರಣ ದೃಢ
ಕೇರಳದಲ್ಲಿ ಬುಧವಾರ ಕೋವಿಡ್ 19 ಪ್ರಕರಣ ಪತ್ತೆ ಆಗಿರಲಿಲ್ಲ. ಆದರೆ ಗುರುವಾರ ಮತ್ತೊಂದು ಕೋವಿಡ್ ದೃಡ ಪಡಿಸಿದೆ. ಇದರೊಂದಿಗೆ ರಾಜ್ಯದಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 25ಕ್ಕೆ ತಲುಪಿದೆ.












Click it and Unblock the Notifications