ಯಾವ ಕುಟುಂಬದಲ್ಲಿ ಹುಟ್ಟಬೇಕೆಂಬುದು ನನ್ನ ಆಯ್ಕೆಯಾಗಿರಲಿಲ್ಲ: ಟೀಂ ಇಂಡಿಯಾ ಮಾಜಿ ಕ್ರಿಕೆಟರ್ ಆರ್.ಅಶ್ವಿನ್ ಹೀಗೆ ಹೇಳಿದ್ಯಾಕೆ?
Ravichandran Ashwin: ಟೀಂ ಇಂಟಿಯಾ ಮಾಜಿ ಕ್ರಿಕೆಟರ್ ಆರ್.ಅಶ್ವಿನ್ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಇದೀಗ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಟ ದಳಪತಿ ವಿಜಯ್ಗೆ ವಿಶ್ ಮಾಡಿ ಜಾತಿ ನಿಂದನೆಗೆ ಒಳಗಾಗಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಅಶ್ವಿನ್ ಟ್ರೋಲಿಗರಿಗೆ ತಕ್ಕ ತಿರುಗೇಟು ನೀಡುವ ಕೆಲಸ ಮಾಡಿದ್ದಾರೆ. ಅಷ್ಟಕ್ಕೂ ಆಗಿದ್ದೇನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ ಟಿವಿಕೆ ಪಕ್ಷದ ಮುಖ್ಯಸ್ಥ, ನಟ ವಿಜಯ್ ಅವರನ್ನು ಅಭಿನಂದಿಸಿದ್ದ ಭಾರತೀಯ ಮಾಜಿ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಕಹಿ ಅನುಭವ ಆಗಿದೆ. ಈ ಅಭಿನಂದನೆ ಪೋಸ್ಟ್ ಅನ್ನು ಅವರ ಜಾತಿಯೊಂದಿಗೆ ತಳುಕು ಹಾಕಿ ಟೀಕಿಸಿದ ವ್ಯಕ್ತಿಗೆ ಅಶ್ವಿನ್ ತಕ್ಕ ಉತ್ತರ ನೀಡಿದ್ದಾರೆ.

ನಟ ವಿಜಯ್ಗೆ ಆರ್. ಅಶ್ವಿನ್ ಅಭಿನಂದನೆ
ವಿಜಯ್ ಅವರ ಗೆಲುವಿನ ನಂತರ ಆರ್.ಅಶ್ವಿನ್ ತಮ್ಮ ಟ್ವಿಟರ್ ಖಾತೆಯಲ್ಲಿ, "ನಾಳೆಯ ತೀರ್ಪಿನಿಂದ ನಿನ್ನೆಯ ತೀರ್ಪಿನವರೆಗೆ.. ಈ ಅದ್ಭುತ ಗೆಲುವಿಗಾಗಿ ದಳಪತಿ ವಿಜಯ್ ಮತ್ತು ಅವರ ಪಕ್ಷಕ್ಕೆ ಅಭಿನಂದನೆಗಳು. ನಾನು ನಿಮ್ಮ ಅಭಿಮಾನಿ. ಮುಂದಿನ ದಿನಗಳಲ್ಲಿ ನಿಮ್ಮನ್ನು ಒಬ್ಬ ನಾಯಕನಾಗಿ ಹಿಂಬಾಲಿಸಲು ಇಷ್ಟಪಡುತ್ತೇನೆ. ನಿಮಗೆ ಶುಭವಾಗಲಿ," ಎಂದು ಬರೆದುಕೊಂಡಿದ್ದರು.
ಟೀಕೆಗಳಿಗೆ ತಿರುಗೇಟು ಕೊಟ್ಟ ಆರ್.ಅಶ್ವಿನ್
ಅಶ್ವಿನ್ ಅವರ ಈ ಪೋಸ್ಟ್ ಬೆನ್ನಲ್ಲೇ ಸಾಮಾಜಿಕ ಜಾಲತಾಣದ ಬಳಕೆದಾರನೊಬ್ಬ, "ದ್ರಾವಿಡ ಆಡಳಿತಕ್ಕೆ ಹೆದರುತ್ತಿರುವ ಒಬ್ಬ ಬ್ರಾಹ್ಮಣ," ಎಂದು ಅಶ್ವಿನ್ ಅವರನ್ನು ಉದ್ದೇಶಿಸಿ ಅವಹೇಳನಕಾರಿಯಾಗಿ ಕಮೆಂಟ್ ಮಾಡಿದ್ದರು. ಅಶ್ವಿನ್ ಅವರ ರಾಜಕೀಯ ಒಲವನ್ನು ಅವರ ಜಾತಿಯ ಹಿನ್ನೆಲೆಯಲ್ಲಿ ಟೀಕಿಸಲಾಗಿತ್ತು. ಈ ಟೀಕೆಗೆ ಅಶ್ವಿನ್ ತಕ್ಕ ತಿರುಗೇಟು ನೀಡಿದ್ದಾರೆ.
"ನಾನು ಇದನ್ನು ಹಿಂದೆ ಒಮ್ಮೆ ಹೇಳಿದ್ದೇನೆ, ಈಗ ಮತ್ತೊಮ್ಮೆ ಹೇಳುತ್ತಿದ್ದೇನೆ. ನಾನು ಯಾವ ಕುಟುಂಬದಲ್ಲಿ ಹುಟ್ಟಬೇಕು ಎಂಬುದು ನನ್ನ ಆಯ್ಕೆಯಾಗಿರಲಿಲ್ಲ. ಆದರೆ ಶ್ರೇಷ್ಠ ಪೋಷಕರಿಗೆ ಮಗನಾಗಿ ಹುಟ್ಟಿದ್ದಕ್ಕೆ ನಾನು ಕೃತಜ್ಞನಾಗಿದ್ದೇನೆ. ಇನ್ನೊಬ್ಬರ ಸಂಕಷ್ಟಗಳಿಗೆ ಸ್ಪಂದಿಸುವುದು ಮತ್ತು ಎಲ್ಲಾ ಅಡೆತಡೆಗಳನ್ನು ಮೀರಿ ಬೆಳೆಯುವುದು ನಾಯಕತ್ವದ ಗುಣ ಎಂದು ಪೋಷಕರು ಮತ್ತು ಶಿಕ್ಷಕರು ನನಗೆ ಕಲಿಸಿದ್ದಾರೆ," ಎಂದು ಹೇಳಿದ್ದಾರೆ.
ದಳಪತಿ ವಿಜಯ್ ರಾಜಕೀಯ ಪಯಣ
ತಮಿಳುನಾಡಿನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ದಳಪತಿ ವಿಜಯ್ ಅವರ ಟಿವಿಕೆ ಪಕ್ಷವು ಗಮನಾರ್ಹ ಸಾಧನೆ ಮಾಡಿದೆ. ವಿಜಯ್ ಅವರು ಪೆರಂಬೂರ್ ಮತ್ತು ತಿರುಚಿರಾಪಳ್ಳಿ ಪೂರ್ವ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಎರಡರಲ್ಲೂ ಜಯ ಗಳಿಸಿದ್ದಾರೆ. ರಾಜಕೀಯಕ್ಕಾಗಿ ಅವರು ಸಿನಿಮಾರಂಗಕ್ಕೆ ವಿದಾಯ ಹೇಳಿದ್ದು, ಹೆಚ್.ವಿನೋತ್ ನಿರ್ದೇಶನದ 'ಜನ ನಾಯಗನ್' ಅವರ ಕೊನೆಯ ಚಿತ್ರವಾಗಲಿದೆ. ಈ ಸಿನಿಮಾಗೆ ಇನ್ನೂ ಪ್ರಮಾಣಪತ್ರ ಸಿಗದ ಕಾರಣ ರಿಲೀಸ್ ಆಗಿಲ್ಲ.












Click it and Unblock the Notifications