LDF ವಶದಲ್ಲಿದ್ದ ಐತಿಹಾಸಿಕ ಪಂಡಾಲಂ ಮುನ್ಸಿಪಾಲಿಟಿ ಬಿಜೆಪಿ ವಶಕ್ಕೆ
ತಿರುವನಂತಪುರಂ, ಡಿ. 16: ಕೇರಳದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶವು ಬುಧವಾರದಂದು ಪ್ರಕಟವಾಗಲಿದೆ. ಹಲವು ಯುಡಿಎಫ್, ಎಲ್ ಡಿಎಫ್ ನಡುವಿನ ನೇರ ಸ್ಪರ್ಧೆಯ ನಡುವೆ ಬಿಜೆಪಿ ನೇತೃತ್ವದ ಎನ್ಡಿಎ ಹಲವು ಪಾಲಿಕೆ, ನಗರಸಭೆ, ಪಂಚಾಯಿತಿಗಳಲ್ಲಿ ಉತ್ತಮ ಫಲಿತಾಂಶ ನೀಡುತ್ತಿದೆ.
ಎಲ್ ಡಿ ಎಫ್ ವಶದಲ್ಲಿದ್ದ ಪಂಡಾಲಂ ಮುನ್ಸಿಪಾಲಿಟಿಯನ್ನು ಬಿಜೆಪಿ ನೇತೃತ್ವದ ಎನ್ಡಿಎ ವಶಕ್ಕೆ ಪಡೆದುಕೊಂಡಿರುವ ಸುದ್ದಿ ಬಂದಿದೆ. 30 ವಾರ್ಡುಗಳ ಫಲಿತಾಂಶ ಪ್ರಕಟವಾಗಿದ್ದು, ಎನ್ಡಿಎ 17 ಸ್ಥಾನ ಗೆದ್ದುಕೊಂಡಿದೆ. ಎಲ್ ಡಿಎಫ್ 7 ಹಾಗೂ ಯುಡಿಎಫ್ 5 ಸ್ಥಾನ ಗಳಿಸಿವೆ. ಇನ್ನು 3 ವಾರ್ಡ್ ಫಲಿತಾಂಶ ಬಾಕಿ ಇದ್ದು, ಈ ಪೈಕಿ 2ರಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಪಂಥನಂತಿಟ್ಟ ಜಿಲ್ಲಾ ವ್ಯಾಪ್ತಿಯ ಪಂಡಾಲಂ ಮುನ್ಸಿಪಾಲಿಟಿ ಐತಿಹಾಸಿಕ ನಗರಿಯಾಗಿದ್ದು, ಶಬರಿಮಲೆ ದೇಗುಲ ನಿರ್ವಹಣೆ ಹೊತ್ತುಕೊಂಡಿರುವ ರಾಜಮನೆತನ ಕೂಡಾ ಇದೇ ಪ್ರದೇಶಕ್ಕೆ ಸೇರಿದೆ.
ಕೇರಳ: ಮಾವೊವಾದಿ ಆರೋಪಿಯ ತಂದೆಗೆ ಸೋಲು
ಈ ಹಿಂದೆ ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶದ ಬಗ್ಗೆ ವಿವಾದ ತಾರಕಕ್ಕೇರಿದ್ದಾಗ ಪಂಡಾಲಂ ರಾಜಮನೆತನ ಖಡಕ್ ಎಚ್ಚರಿಕೆ ನೀಡಿತ್ತು. ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಶತಮಾನಗಳಿಂದ ನಡೆದುಕೊಂಡು ಬರುತ್ತಿರುವ ಸಂಪ್ರದಾಯ, ಪೂಜಾಪದ್ದತಿಗೆ ಯಾವರೀತಿಯಲ್ಲೂ ಚ್ಯುತಿ ಬರಬಾರದು. ಭಾರೀ ಪ್ರತಿಭಟನೆಯ ನಡುವೆಯೂ ಒಂದು ವೇಳೆ 10-50ವಯಸ್ಸಿನ ಮಹಿಳೆಯರು ದೇವಾಲಯ ಪ್ರವೇಶಿಸಿದ್ದೇ ಆದಲ್ಲಿ, ದೇವಾಲಯವನ್ನು ಮುಚ್ಚಲು ರಾಜಮನೆತನ ಸೂಚಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಹಿಂದೂ ವಿರೋಧಿ ಎಂದು ಹಣೆಪಟ್ಟಿ ಹೊತ್ತುಕೊಂಡಿರುವ ಎಡಪಕ್ಷಗಳ ವಿರುದ್ಧ ಈಗ ಬಿಜೆಪಿ ಜಯ ದಾಖಲಿಸಿ ಅಧಿಕಾರಕ್ಕೇರುವ ಹೊಸ್ತಿಲಲ್ಲಿದೆ.
ಬಿಜೆಪಿ ಆರಂಭಿಕ ಉತ್ತಮ ಮುನ್ನಡೆ: ಬಿಜೆಪಿ ಅಭ್ಯರ್ಥಿಗಳು ಕೊಚ್ಚಿಯ ಮೇಯರ್ ಅಕಾಂಕ್ಷಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿದ ಬಳಿಕ ತಿರುವನಂತಪುರಂ ಮೇಯರ್ ಕೂಡಾ ಸೋಲಿಸಿದ್ದಾರೆ. ಇದಲ್ಲದೆ ಕಣ್ಣೂರು ಮುನ್ಸಿಪಲ್ ಕಾರ್ಪೊರೇಷನ್ ಹಾಗೂ ನೀಲಂಬೂರ್ ಹಾಗೂ ಕಲಚ್ಚೇರಿ ಮುನ್ಸಿಪಾಲಿಟಿಯಲ್ಲೂ ಬಿಜೆಪಿ ಗೆಲುವು ದಾಖಲಿಸಿದೆ. ಆದರೆ, ತ್ರಿಶ್ಶೂರ್ ಮುನ್ಸಿಪಾಲ್ ಕಾರ್ಪೊರೇಷನ್ ನಲ್ಲಿ ಬಿಜೆಪಿ ಮೇಯರ್ ಅಭ್ಯರ್ಥಿ ಬಿ ಗೋಪಾಲಕೃಷ್ಣನ್ ಸೋಲು ಕಂಡಿದ್ದಾರೆ.
ತಿರುವನಂತಪುರಂ ಮೇಯರ್ ಸೋಲಿಸಿದ ಬಿಜೆಪಿ ಅಭ್ಯರ್ಥಿ
ಸ್ಥಳೀಯ ಸಂಸ್ಥೆ ಚುನಾವಣೆ: 941 ಗ್ರಾಮ ಪಂಚಾಯಿತಿಯ 15,962ವಾರ್ಡ್, 152 ಬ್ಲಾಕ್ ಪಂಚಾಯಿತಿಯ 2080 ವಾರ್ಡು, 14 ಜಿಲ್ಲಾ ಪಂಚಾಯಿತಿಯ 331 ಡಿವಿಷನ್, 86 ಮುನ್ಸಿಪಾಲಿಟಿಯ 3078 ವಾರ್ಡು, 6 ಮುನ್ಸಿಪಲ್ ಕಾರ್ಪೊರೇಷನ್ ನ 414 ವಾರ್ಡುಗಳಿಗೆ ಡಿಸೆಂಬರ್ 8, 10 ಹಾಗೂ 14ರಂದು ಮತದಾನ ನಡೆಸಲಾಗಿದ್ದು, ಒಟ್ಟಾರೆ, 76% ಮತದಾನ ದಾಖಲಾಗಿದೆ. ಡಿಸೆಂಬರ್ 16ರಂದು ಫಲಿತಾಂಶ ಹೊರ ಬರಲಿದೆ.
ಮುಂಬರುವ ವಿಧಾನಸಭಾ ಚುನಾವಣೆ ಹಿತದೃಷ್ಟಿಯಿಂದ ಆಡಳಿತಾರೂಢ ಸಿಪಿಐ(ಎಂ) ನೇತೃತ್ವದ ಎಲ್ ಡಿಎಫ್, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅಲ್ಲದೆ ಬಿಜೆಪಿ ನೇತೃತ್ವದ ಎನ್ಡಿಎ ಸೆಣಸಾಡುತ್ತಿವೆ.