ಕೆಎಸ್ಸಾರ್ಟಿಸಿ ವೋಲ್ವೋ ಬಸ್ -ಲಾರಿ ಡಿಕ್ಕಿ, 17 ಮಂದಿ ಸಾವು
ತಿರುವನಂತಪುರಂ, ಫೆಬ್ರವರಿ 20: ಬೆಂಗಳೂರಿನಿಂದ ಕೇರಳದ ಎರ್ನಾಕುಲಂಗೆ ತೆರಳುತ್ತಿದ್ದ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಸಾರ್ಟಿಸಿ)ಯ ವೋಲ್ವೋ ಬಸ್ ಸಂಖ್ಯೆ 784 ಗರುಡಾ ಕಿಂಗ್ ಕ್ಲಾಸ್ ಹಾಗೂ ಕಂಟೈನರ್ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಗುರುವಾರ ಮುಂಜಾನೆ ನಡೆದ ಈ ದುರ್ಘಟನೆಯಲ್ಲಿ 17 ಮಂದಿ ಮೃತಪಟ್ಟಿದ್ದಾರೆ ಎಂದು ತಿರುಪ್ಪೂರ್ ಎಎಸ್ಪಿ ದೃಢಪಡಿಸಿದ್ದಾರೆ.
ಗುರುವಾರ ಮುಂಜಾನೆ 3.15ರ ಸುಮಾರಿಗೆ ಕೊಯಮತ್ತೂರಿನ ಅವಿನಾಶಿ ಬಳಿಯಲ್ಲಿ ಕೆಎಸ್ಸಾರ್ಟಿಸಿ ಬಸ್ಸಿಗೆ ಲಾರಿ ಡಿಕ್ಕಿ ಹೊಡೆದಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಕೇರಳ ನೋಂದಣಿಯಿದ್ದ ಕಂಟೈನರ್ ಲಾರಿ ಎಂದು ತಿಳಿದು ಬಂದಿದೆ. KL 15 A 282 ನೋಂದಣಿಯ ಬಸ್ ಎದುರುಗಡೆಯಿಂದ ಬರುತ್ತಿದ್ದ ಲಾರಿ ಡಿವೈಡರ್ ಗೆ ಡಿಕ್ಕಿ ಹೊಡೆದು ನಂತರ ಬಸ್ಸಿಗೆ ಗುದ್ದಿದೆ. ಬಸ್ಸಿಗೆ ಬಲಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.
ಈ ದುರ್ಘಟನೆಯಲ್ಲಿ 17 ಮಂದಿ ಶವ ಪತ್ತೆಯಾಗಿದ್ದು, 22 ಮಂದಿಗೆ ಗಾಯಗಳಾಗಿವೆ. ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಮುರ್ನಾಲ್ಕು ಮಂದಿ ಬಸ್ಸಿನಲ್ಲಿ ಸಿಲುಕಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.

48 ಮಂದಿದ್ದ ಬಸ್ ನಲ್ಲಿ ಪ್ರಯಾಣಿಸುತ್ತಿದ್ದವರ ಪೈಕಿ ಅಪಘಾತದಲ್ಲಿ ಮೃತರ ಪೈಕಿ ವಿನೋದ್(42), ಕ್ರಿಸ್ಟೋಫರ್(25), ರಹೀಂ, ನವೀನ್ ಬೇಬಿ, ಸೋನಾ ಸನ್ನಿ(ಪಾಲಕ್ಕಾಡ್) ಅವರ ಗುರುತುಪತ್ತೆಯಾಗಿದೆ. ಮಿಕ್ಕವರ ವಿವರ ಸಿಗಬೇಕಿದೆ. ಬಸ್ಸಿನ ಚಾಲಕ, ನಿರ್ವಾಹಕರೂ ಮೃತರಾಗಿದ್ದಾರೆ ಎಂದು ಕೇರಳ ಸಾರಿಗೆ ಸಚಿವ ಎಕೆ ಸಸೀಂದ್ರನ್ ಪ್ರತಿಕ್ರಿಯಿಸಿದ್ದಾರೆ.












Click it and Unblock the Notifications