ವಂದೇ ಭಾರತ್ ಮಿಷನ್; ಕೇರಳಕ್ಕೆ ಬಂದ ಮೂವರ ವಿರುದ್ಧ ಎಫ್ಐಆರ್
ತಿರುವನಂತಪುರಂ, ಮೇ 20 : ಲಾಕ್ ಡೌನ್ ಪರಿಣಾಮ ಅಬುದಾಬಿಯಲ್ಲಿ ಸಿಲುಕಿದ್ದ ಮೂವರು ಕೇರಳದ ತಿರುವನಂತಪುರಕ್ಕೆ ವಂದೇ ಭಾರತ್ ಮಿಷನ್ ಅಡಿ ಆಗಮಿಸಿದ್ದರು. ಕೇರಳ ಸರ್ಕಾರ ಮೂವರು ಅನಿವಾಸಿ ಭಾರತೀಯರ ವಿರುದ್ಧ ಈಗ ಎಫ್ಐಆರ್ ದಾಖಲು ಮಾಡಿದೆ.
ತಮಗೆ ಕೊರೊನಾ ಸೋಂಕು ಇರುವುದನ್ನು ಮುಚ್ಚಿಟ್ಟು ಅಬುದಾಬಿಯಿಂದ ಕೇರಳದ ತಿರುವನಂತಪುರಕ್ಕೆ ವಿಮಾನದಲ್ಲಿ ಮೂವರು ಆಗಮಿಸಿದ್ದರು. ಕೋವಿಡ್ - 19 ಇರುವುದನ್ನು ಮುಚ್ಚಿಟ್ಟ ಕಾರಣಕ್ಕೆ ಪ್ರಕರಣ ದಾಖಲು ಮಾಡಲಾಗಿದೆ.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ಕುರಿತು ಹೇಳಿಕೆ ನೀಡಿದ್ದಾರೆ. "ಕೋವಿಡ್ - 19 ಇರುವ ವ್ಯಕ್ತಿಗಳನ್ನು ವಿಮಾನದಲ್ಲಿ ಪ್ರಯಾಣ ಮಾಡಲು ಅನುಮತಿ ನೀಡಿದ್ದು ಹೇಗೆ?" ಎಂದು ಪ್ರಶ್ನೆ ಮಾಡಿದ್ದಾರೆ.

ಮೇ 16ರಂದು ತಿರುವನಂತಪುರಕ್ಕೆ ಆಗಮಿಸಿದ ವಿಮಾನದಲ್ಲಿ ಮೂವರು ಆಗಮಿಸಿದ್ದರು. ಕೊಲ್ಲಂ ಪೊಲೀಸರು ಮೂವರ ವಿರುದ್ಧ ಎಫ್ಐಆರ್ ದಾಖಲು ಮಾಡಿದ್ದಾರೆ. ಆದರೆ, ಪ್ರಯಾಣಿಕರ ಹೆಸರು ಬಹಿರಂಗಪಡಿಸಲು ನಿರಾಕರಿಸಿದ್ದಾರೆ.
ತಿರುವನಂತಪುರ ವಿಮಾನ ನಿಲ್ದಾಣದಿಂದ ಕ್ವಾರಂಟೈನ್ ಸೆಂಟರ್ಗೆ ಕರೆದುಕೊಂಡು ಹೋಗುವಾರ ಮೂವರ ನಡುವಿನ ಸಂಭಾಷಣೆ ಕೇಳಿ ಪೊಲೀಸರು ಅನುಮಾನಗೊಂಡಿದ್ದಾರೆ. ಬಳಿಕ ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ಇರುವುದು ಖಚಿತವಾಗಿದೆ.
ಅಬುದಾಬಿಯಿಂದ ಮೇ 16ರಂದು ಆಗಮಿಸಿದ ವಿಮಾನದಲ್ಲಿ ಪ್ರಯಾಣಿಸಿದ 5 ಜನರಿಗೆ ಕೊರೊನಾ ಸೋಂಕು ತಗುಲಿದೆ. ಇವರಲ್ಲಿ ಮೂವರು ಕೊಲ್ಲಂ ಜಿಲ್ಲೆಯವರು. ಈಗ ಎಲ್ಲರೂ ಸರ್ಕಾರಿ ಆಸ್ಪತ್ರೆಯ ಐಸೋಲೇಷನ್ ವಾರ್ಡ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಮಾಲ್ಡೀವ್ಸ್ನಿಂದ ಎರ್ನಾಕುಲಂಗೆ ಹಡಗಿನಲ್ಲಿ ಆಗಮಿಸಿದ ಒಬ್ಬ ಪ್ರಯಾಣಿಕನಿಗೆ ತಿರುವನಂತಪುರಕ್ಕೆ ಆಗಮಿಸಿದ ಮೇಲೆ ತಲೆ ನೋವು ಕಾಣಿಸಿಕೊಂಡಿತ್ತು. ಆತನ ಪರೀಕ್ಷೆ ನಡೆಸಿದಾಗ ವರದಿ ಪಾಸೀಟಿವ್ ಬಂದಿದ್ದು, ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕೇರಳ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿದೆ. ಕೊರೊನಾ ಸೋಂಕು ಇದ್ದರೂ ವಿಮಾನ ಹತ್ತಲು ಅವಕಾಶ ಕೊಟ್ಟಿದ್ದು ಹೇಗೆ? ಎಂಬ ಬಗ್ಗೆ ತನಿಖೆ ನಡೆಯುವ ಸಾಧ್ಯತೆ ಇದೆ.












Click it and Unblock the Notifications