ಬಾವಲಿಗಳ ಸಾಮೂಹಿಕ ಸಾವು: ಕೇರಳದಲ್ಲಿ ಹೆಚ್ಚಾಗಿದೆ ಭಯ!
ಕೇರಳ, ಮಾರ್ಚ್ 11: ಕೇರಳದ ಕೋಯಿಕ್ಕೋಡ್ ಜಿಲ್ಲೆಯ ಕರಸ್ಸೇರಿ ಪಂಚಾಯತಿ ವ್ಯಾಪ್ತಿಗೆ ಬರುವ ಕಾರಿಮೂಲದಲ್ಲಿ ಡಜನ್ ಗಟ್ಟಲೆ ಬಾವಲಿಗಳು ಸತ್ತುಬಿದ್ದಿವೆ. ಏಕಾಏಕಿ ಸಾಮೂಹಿಕವಾಗಿ ಬಾವಲಿಗಳು ಮೃತಪಟ್ಟಿರುವುದರಿಂದ ಜನ ಬೆಚ್ಚಿಬಿದ್ದಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳು ಸ್ಯಾಂಪಲ್ ಗಳನ್ನು ಸಂಗ್ರಹಿಸಿದ್ದಾರೆ. ಬಾವಲಿಗಳ ಸಾಮೂಹಿಕ ಸಾವಿಗೆ ಕಾರಣವೇನು ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ.
ಕಳೆದ ವಾರವಷ್ಟೇ ಇದೇ ಕೋಯಿಕ್ಕೋಡ್ ಜಿಲ್ಲೆಯ ಒಂದು ಕೋಳಿ ಫಾರಂ ಮತ್ತು ಒಂದು ಖಾಸಗಿ ನರ್ಸರಿಯಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿತ್ತು. ಪರಿಣಾಮ, H5N1 ವೈರಾಣುಗಳನ್ನು ತಡೆಗಟ್ಟಲು 12 ಸಾವಿರ ಕೋಳಿಗಳನ್ನು ಹತ್ಯೆ ಮಾಡಲಾಗಿತ್ತು. ಇದಾದ ಬೆನ್ನಲ್ಲೇ ಬಾವಲಿಗಳು ಸತ್ತು ಬಿದ್ದಿವೆ.

ಎರಡು ವರ್ಷಗಳ ಹಿಂದೆ ಅಂದ್ರೆ 2018 ರಲ್ಲಿ ಕೊಯಿಕ್ಕೋಡ್ ನಲ್ಲಿ ಬಾವಲಿಗಳಿಂದ ಹರಡುವ ನಿಫಾ ವೈರಸ್ ಜ್ವರ ಹಬ್ಬಿತ್ತು. ನಿಫಾ ವೈರಸ್ ನಿಂದಾಗಿ ಕೋಯಿಕ್ಕೋಡ್ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ 18 ಮಂದಿ ಸಾವನ್ನಪ್ಪಿದ್ದರು.
ಈಗ ಬಾವಲಿಗಳ ಸಾಮೂಹಿಕ ಸಾವಿನಿಂದ ಮತ್ತೆಲ್ಲಿ ನಿಫಾ ವೈರಸ್ ಹರಡುತ್ತೋ ಎಂಬ ಭೀತಿ ಜನರಲ್ಲಿ ಕಾಡುತ್ತಿದೆ. ಮೊದಲೇ ಕೇರಳದಲ್ಲಿ ಇಲ್ಲಿಯವರೆಗೂ 14 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಈಗಾಗಲೇ ಕೇರಳದ ನಾಲ್ಕು ಜಿಲ್ಲೆಗಳಲ್ಲಿ 'ಹೆಲ್ತ್ ಎಮರ್ಜೆನ್ಸಿ' ಡಿಕ್ಲೇರ್ ಆಗಿದೆ. ಅದರ ಮಧ್ಯೆ ಬಾವಲಿಗಳು ಸತ್ತು ಬಿದ್ದಿರುವುದರಿಂದ ಜನರು ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ.












Click it and Unblock the Notifications