Sankranthi Special: ಮಕರವಿಳಕ್ಕು ದಿನ ಭಕ್ತರ ಪ್ರವೇಶ ಕುರಿತು ಮಹತ್ವದ ಪ್ರಕಟಣೆ!
ಶಬರಿಮಲೆ, ಜನವರಿ 03: ಶಬರಿಮಲೆಯ ಅಯ್ಯಪ್ಪ ಸ್ವಾಮಿ ಸನ್ನಿಧಿ ಹಾಗೂ ಆವರಣಗಳನ್ನು ಥರ್ಮಲ್ ಫಾಗಿಂಗ್ ಮೂಲಕ ಸೋಂಕು ಮುಕ್ತಗೊಳಿಸಲು ಅಗತ್ಯ ಕ್ರಮ ಕೈಗೊಂಡ ಬೆನ್ನಲ್ಲೇ ಮಹತ್ವ ನಿರ್ಧಾರವನ್ನು ದೇವಸ್ವಂ ಮಂಡಳಿ ಪ್ರಕಟಿಸಿದೆ.
ಮಕರವಿಳಕ್ಕು ಯಾತ್ರೆಯ 41 ದಿನಗಳ ಸೀಸನ್ ಶುರುವಾಗಿದೆ. ಜೊತೆಗೆ ಭಕ್ತಾದಿಗಳ ಪ್ರತಿದಿನ ಪ್ರವೇಶ ಸಂಖ್ಯೆಯನ್ನು 5 ಸಾವಿರಕ್ಕೇರಿಸಲಾಗಿದೆ. ಆದರೆ, ಜನವರಿ 14ರ ಸಂಕ್ರಾಂತಿ ವಿಶೇಷ ಸಂದರ್ಭದ ಮಕರವಿಳಕ್ಕು ಅಚರಣೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರಿಗೆ ಪ್ರವೇಶ ಅವಕಾಶ ದೊರೆಯಲಿದೆ ಎಂಬ ಸುದ್ದಿಯನ್ನು ತಿರುವಾಂಕೂರು ದೇವಸ್ವಂ ಮಂಡಳಿ ಅಲ್ಲಗೆಳೆದಿದೆ.
ಈ ಬಗ್ಗೆ ಮಾತನಾಡಿದ ಮಂಡಳಿ ಮುಖ್ಯಸ್ಥ ಎನ್ ವಾಸು, ವರ್ಚುಯಲ್ ಕ್ಯೂ ಮೂಲಕ ಮುಂಗಡವಾಗಿ ಬುಕ್ ಮಾಡಿದ ಭಕ್ತಾದಿಗಳಿಗೆ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಮುಂಗಡ ಬುಕ್ಕಿಂಗ್ ಇಲ್ಲದಿದ್ದರೆ ಸನ್ನಿಧಾನಂ ಅಥವಾ ಆವರಣದೊಳಗೆ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ. ಜೊತೆಗೆ 5,000 ಸಂಖ್ಯೆಯನ್ನು ಹೆಚ್ಚಿಸುವುದಿಲ್ಲ. ಮಕರವಿಳಕ್ಕು ದಿನದಂದು ಕೂಡಾ ಇದೇ ನಿಯಮ ಅನುಸರಿಸಲಾಗುತ್ತದೆ ಎಂದಿದ್ದಾರೆ.

ಡಿಸೆಂಬರ್ 31 ರಿಂದ ಜನವರಿ 19ರ ತನಕ ಮಕರವಿಳಕ್ಕು ಹಬ್ಬದ ಋತು ಜಾರಿಯಲ್ಲಿರಲಿದ್ದು, ಜನವರಿ 20ರಂದು ದೇಗುಲ ಬಂದ್ ಆಗಲಿದೆ.ಆರ್ಟಿ-ಪಿಸಿಆರ್ ಪರೀಕ್ಷೆ ನಡೆಸಿ, ಕೊವಿಡ್ 19 ನೆಗಟಿವ್ ಇದ್ದ ಭಕ್ತರು ಮಾತ್ರ ಶಬರಿ ಬೆಟ್ಟವನ್ನೇರಬಹುದಾಗಿದೆ. ಈ ಮುಂಚೆ ಆಂಟಿಜನ್ ಪರೀಕ್ಷೆ ವರದಿಯಲ್ಲಿ ನೆಗಟಿವ್ ಎಂದರೆ ಬಂದರೆ ಸಾಕಿತ್ತು.
ದೇಗುಲದ ಅರ್ಚಕರು ಸೇರಿದಂತೆ 40ಕ್ಕೂ ಅಧಿಕ ಮಂದಿಗೆ ಕೋವಿಡ್ 19 ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಥರ್ಮಲ್ ಫಾಗಿಂಗ್, ಹ್ಯಾಂಡ್ ಸ್ಪ್ರೇಯರ್ ಮುಂತಾದ ಸೋಂಕುನಿವಾರಕಗಳನ್ನು ಬಳಸಿ ಸನ್ನಿಧಾನವನ್ನು ಶುಚಿಗೊಳಿಸಲಾಗುತ್ತಿದೆ, ಇದಕ್ಕಾಗಿ ತಿರುವಾಂಕೂರು ದೇವಸ್ವಂ ಮಂಡಳಿ ವಿಶೇಷ ತಂಡವನ್ನು ನಿಯೋಜಿಸಿದೆ ಎಂದರು.












Click it and Unblock the Notifications