ಕೊರೊನಾವೈರಸ್ 3ನೇ ಅಲೆ: ಕೇರಳದ ಕಡೆಗೆ ಬೊಟ್ಟು ಮಾಡುವುದು ಅನ್ಯಾಯ
ತಿರುವನಂತಪುರಂ, ಆಗಸ್ಟ್ 3: ಭಾರತದಲ್ಲಿ ಕೊರೊನಾವೈರಸ್ ಮೂರನೇ ಅಲೆಯಿಂದ ಹೆಚ್ಚೇನೂ ಬದಲಾವಣೆಗಳು ಆಗುವುದಿಲ್ಲ. ಎರಡನೇ ಅಲೆಯನ್ನು ಪರ್ವತ ಎಂದು ಭಾವಿಸಿದ್ದಲ್ಲಿ ಮೂರನೇ ಅಲೆಯು ಬೆಟ್ಟದಂತೆ ಗೋಚರಿಸುತ್ತದೆ ಎಂದು ಭಾರತದ ಪ್ರಸಿದ್ಧ ಸೂಕ್ಷ್ಮರೋಗಾಣುತಜ್ಞ ಗಗನ್ ದೀಪ್ ಕಾಂಗ್ ಹೇಳಿದ್ದಾರೆ.
ಇಂಡಿಯಾ ಟುಡೇಗೆ ಪ್ರತಿಕ್ರಿಯೆ ನೀಡಿದ ಅವರು, ಕೊವಿಡ್-19 ಮೂರನೇ ಅಲೆಯ ಬಗ್ಗೆ ಯಾರೊಬ್ಬರೂ ಊಹಿಸಿರಲಿಲ್ಲ. ಅದೇ ರೀತಿ ರೂಪಾಂತರ ರೋಗಾಣು ಮೊದಲಿಗಿಂತ ಅಪಾಯಕಾರಿ ಎಂಬದನ್ನೂ ಊಹಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಮಹಾರಾಷ್ಟ್ರ, ಕೇರಳದಲ್ಲಿ ಝಿಕಾ ವೈರಸ್ ಭೀತಿ: ಕೋವಿಡ್ ಸೋಂಕಿಗೂ ಝಿಕಾಗೂ ಏನಿದೆ ನಂಟು?
ಕೇರಳದಲ್ಲಿ ಇತ್ತೀಚಿಗೆ ಕೊವಿಡ್-19 ನಿಯಂತ್ರಣಕ್ಕೆ ತೆಗೆದುಕೊಂಡ ಕ್ರಮಗಳ ಬಗ್ಗೆ ಪ್ರಶ್ನಿಸಿದ ಸಂದರ್ಭದಲ್ಲಿ ಕೊರೊನಾವೈರಸ್ ಪ್ರಕರಣಗಳ ಏರಿಕೆಗೆ ಕೇರಳದತ್ತ ಬೊಟ್ಟು ಮಾಡುವುದು ಸರಿಯಲ್ಲ ಎಂದು ಉತ್ತರ ನೀಡಿದ್ದಾರೆ. ಕೊವಿಡ್-19 ಸೋಂಕಿತ ಪ್ರಕರಣಗಳು ಹೆಚ್ಚುತ್ತಿರುವುದರ ಹಿನ್ನೆಲೆ ಕೇರಳ ಮಾದರಿ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ.
ಬಕ್ರೀದ್ ಹಬ್ಬಕ್ಕೂ ಮೊದಲೇ ಕೊವಿಡ್-19 ಅಪಾಯ
ಕೇರಳದಲ್ಲಿ ಬಕ್ರೀದ್ ಹಬ್ಬಕ್ಕೂ ಮೊದಲೇ ಅಪಾಯ
"ಭಾರತದ ಹಲವು ರಾಜ್ಯಗಳಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ಪ್ರಮಾಣ ಕಡಿಮೆಯಾಗಿರುವುದು ಮತ್ತು ಸೆರೋಪ್ರೀವಿಯನ್ಸ್ ಸೋಂಕು ಹರಡುವಿಕೆಗೆ ಮಖ್ಯ ಕಾರಣವಾಗಿದೆ. ಸೋಂಕು ಹೆಚ್ಚಳಕ್ಕೆ ಲಾಕ್ ಡೌನ್ ಸಡಲಿಕೆಯೊಂದೇ ಕಾರಣವಲ್ಲ. ಏಕೆಂದರೆ ಬಕ್ರೀದ್ ಹಬ್ಬ ಆರಂಭಕ್ಕೂ ಮೊದಲೇ ಕೇರಳದಲ್ಲಿ ಸೋಂಕಿತ ಪ್ರಕರಣಗಳ ಏರಿಕೆ ಶುರುವಾಗಿತ್ತು," ಎಂದು ಸೂಕ್ಷ್ಮರೋಗಾಣುತಜ್ಞ ಗಗನ್ ದೀಪ್ ಕಾಂಗ್ ಹೇಳಿದ್ದಾರೆ.
ಕಳೆದ ತಿಂಗಳಷ್ಟೇ, ಬಕ್ರೀದ್ ಹಬ್ಬದ ಹೊಸ್ತಿಲಿನಲ್ಲಿ ಕೋವಿಡ್ -19 ನಿರ್ಬಂಧಗಳ ಮೂರು ದಿನಗಳವರೆಗೆ ಸಡಿಲಿಕೆಗೊಳಿಸಬೇಕು ಎಂಬ ಕೇರಳ ಸರ್ಕಾರದ ನಿರ್ಧಾರವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿತ್ತು. ಕನ್ವರ್ ಯಾತ್ರೆ ಪ್ರಕರಣದ ರೀತಿಯಲ್ಲೇ ಸಂವಿಧಾನದ 21 ಮತ್ತು 144ನೇ ಕಾಯ್ದೆ ಅಡಿಯಲ್ಲಿ ಅವಕಾಶ ನೀಡುವುದಕ್ಕೆ ನಿರ್ದೇಶನ ನೀಡಿತ್ತು. ಇತರೆ ರಾಜ್ಯಗಳಂತೆ ಕೇರಳದಲ್ಲೂ ಲಾಕ್ ಡೌನ್ ಜಾರಿಯಿಂದಾಗಿ ಸಾರ್ವಜನಿಕರು ರೋಸಿ ಹೋಗಿದ್ದಾರೆ. ಲಾಕ್ ಡೌನ್ ಸಡಿಲಿಕೆಗೊಳಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ಲಾಕ್ ಡೌನ್ ಸಡಿಲಿಕೆಗೆ ಇದು ಸೂಕ್ತ ಸಮಯವಲ್ಲ, ಎಂದು ಗಗನ್ ದೀಪ್ ಕಾಂಗ್ ತಿಳಿಸಿದ್ದಾರೆ.
ಓಣಂ ಆಚರಣೆ ಮೊದಲಿನಂತೆ ಇರುವುದಿಲ್ಲ:
ಕೇರಳಿಗರು ಈ ಬಾರಿ ಓಣಂ ಹಬ್ಬವನ್ನು ಮೊದಲಿನಂತೆ ಆಚರಿಸುವಂತೆ ಇರುವುದಿಲ್ಲ. ಹಬ್ಬ ಆಚರಣೆಗೂ ಮೊದಲು ಕೊರೊನಾವೈರಸ್ ಬಗ್ಗೆ ಜಾಗರೂಕತೆಯಿಂದ ಇರಬೇಕಾಗಿರುತ್ತದೆ. ರಾಜ್ಯದಲ್ಲಿ ಕೊವಿಡ್ ನಿಯಂತ್ರಿಸುವಲ್ಲಿ ಮತ್ತು ನಿರ್ವಹಿಸುವಲ್ಲಿ ಸರ್ಕಾರವು ಸಮತೋಲನ ಕಾಯ್ದುಕೊಂಡಿದೆ. ಆದರೆ, ಲಸಿಕೆ ವಿತರಣೆ ವೈಫಲ್ಯದಿಂದಾಗಿ ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ, ಎಂದು ಗಗನ್ ದೀಪ್ ಕಾಂಗ್ ಹೇಳಿದ್ದಾರೆ.
ಎರಡು ಅಲೆಗಳ ನಡುವೆ 5 ತಿಂಗಳ ಅಂತರ:
ಕಳೆದ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಅಲೆಗೂ ಮುಂದಿನ ಅಲೆಗೂ ನಡುವೆ ಕೇವಲ 5 ತಿಂಗಳ ಅಂತರವಿದೆ. ದೇಶದಲ್ಲಿ ಇದೀಗ ಮತ್ತೆ ಪ್ರತಿನಿತ್ಯ 40,000ಕ್ಕಿಂತಲೂ ಹೆಚ್ಚು ಸೋಂಕಿತ ಪ್ರಕರಣಗಳು ವರದಿಯಾಗುತ್ತಿವೆ. ನಾಲ್ಕು ದಿನಗಳಿಂದ ನಿರಂತರವಾಗಿ ಪ್ರತಿನಿತ್ಯ 40,000ಕ್ಕಿಂತಲೂ ಹೆಚ್ಚು ಹೊಸ ಪ್ರಕರಣಗಳು ವರದಿಯಾಗುತ್ತಿದ್ದು, ಈ ಪೈಕಿ ಅರ್ಧದಷ್ಟು ಪ್ರಕರಣಗಳು ಕೇರಳದಲ್ಲೇ ಪತ್ತೆಯಾಗುತ್ತಿವೆ. ಕೇರಳ ಕೊವಿಡ್-19 ಮೂರನೇ ಅಲೆಯಲ್ಲೂ ಹಾಟ್ ಸ್ಪಾಟ್ ಆಗಿ ಗುರುತಿಸಿಕೊಂಡಿದೆ.
"ಜುಲೈ ತಿಂಗಳಿನಲ್ಲಿ ಕೇರಳ ಮತ್ತು ಈಶಾನ್ಯದ ಕೆಲವು ರಾಜ್ಯಗಳಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಕ್ರಮೇಣ ಏರಿಕೆ ಕಂಡು ಬಂದಿದೆ," ಎಂದು ಕೊವಿಡ್-19 ಟ್ರ್ಯಾಕರ್ ಅಭಿವೃದ್ಧಿಪಡಿಸಿರುವ ಕೆಂಬ್ರಿಡ್ಜ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪೌಲ್ ಕುಟ್ಟುಮಾನ್ ಹೇಳಿದ್ದಾರೆ. "ಆದರೆ ಕೆಲವು ರಾಜ್ಯಗಳು ಜುಲೈನಲ್ಲಿ ಅಲ್ಪಾವಧಿಯಲ್ಲೇ ಉಲ್ಬಣಗೊಂಡ ಕೊರೊನಾವೈರಸ್ ಪ್ರಕರಣಗಳ ಪ್ರಮಾಣ ತ್ವರಿತ ಗತಿಯಲ್ಲಿ ಕಡಿಮೆಯಾಯಿತು, ಇದರಿಂದಾಗಿ ದೇಶದ ಒಟ್ಟಾರೆ ಸ್ಥಿತಿ ಸ್ಥಿರವಾಗಿದೆ," ಎಂದು ಹೈದ್ರಾಬಾದ್ ಮೂಲದ ಭಾರತೀಯ ತಾಂತ್ರಿಕ ಸಂಸ್ಥೆ ಸಂಶೋಧಕ ಮಥುಕುಮಲ್ಲಿ ವಿದ್ಯಾಸಾಗರ್ ತಿಳಿಸಿದ್ದಾರೆ.