ಕಾಯ್ದೆ ವಿವಾದ: ವ್ಯಾಪಕ ವಿರೋಧದ ಬಳಿಕ ಹಿಂದೆ ಸರಿದ ಕೇರಳ ಸರ್ಕಾರ
ತಿರುವನಂತಪುರಂ, ನವೆಂಬರ್ 23: ಸಾಮಾಜಿಕ ಜಾಲತಾಣದಲ್ಲಿ ಮಾಡುವ ನಿಂದನೆ ಹಾಗೂ ಇತರೆ ಸೈಬರ್ ಅಪರಾಧ ಪೋಸ್ಟ್ಗಳ ವಿರುದ್ಧ ಕಠಿಣ ಜೈಲು ಶಿಕ್ಷೆ ವಿಧಿಸುವಂತೆ ಕೇರಳ ಪೊಲೀಸ್ ಕಾಯ್ದೆಗೆ ತಿದ್ದುಪಡಿ ತರುವ ಪ್ರಯತ್ನಕ್ಕೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕೇರಳ ಸರ್ಕಾರ ಸೋಮವಾರ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ.
ಸಿಪಿಐ (ಎಂ) ರಾಜ್ಯ ಕಾರ್ಯಾಲಯ ಸಭೆಯ ಬಳಿಕ ಹೇಳಿಕೆ ನೀಡಿರುವ ಪಿಣರಾಯಿ ವಿಜಯನ್, ಕೇರಳ ಪೊಲೀಸ್ ಕಾಯ್ದೆಗೆ ಸೆಕ್ಷನ್ 118 (ಎ) ಅನ್ನು ಅಳವಡಿಸುವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರದೆ ಇರಲು ಸರ್ಕಾರ ತೀರ್ಮಾನಿಸಿದೆ ಎಂದು ತಿಳಿಸಿದರು.
'ತಿದ್ದುಪಡಿ ಪ್ರಕಟಣೆಯ ಬಳಿಕ ವಿವಿಧ ವಲಯಗಳಿಂದ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾದವು. ಎಲ್ಡಿಎಫ್ ಬೆಂಬಲಿಸುವವರು ಮತ್ತು ಪ್ರಜಾಪ್ರಭುತ್ವದ ರಕ್ಷಣೆಯ ಪರ ನಿಲುವು ಹೊಂದಿರುವವರು ಕೂಡ ತಿದ್ದುಪಡಿ ಕುರಿತು ಕಳವಳ ವ್ಯಕ್ತಪಡಿಸಿದರು. ಈ ಸನ್ನಿವೇಶಗಳ ಹಿನ್ನೆಲೆಯಲ್ಲಿ ಸರ್ಕಾರವು ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರುವುದನ್ನು ಬಯಸುತ್ತಿಲ್ಲ. ರಾಜ್ಯ ವಿಧಾನಸಭೆಯಲ್ಲಿ ವಿಸ್ತೃತ ಚರ್ಚೆ ನಡೆದ ಮತ್ತು ಎಲ್ಲ ಕಡೆಗಳಿಂದಲೂ ಅಭಿಪ್ರಾಯಗಳನ್ನು ಆಲಿಸಿದ ಬಳಿಕವೇ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು' ಎಂದು ವಿಜಯನ್ ಹೇಳಿದರು.

ಸಿಪಿಐ (ಎಂ) ಕೇಂದ್ರ ನಾಯಕತ್ವದ ಮಧ್ಯಪ್ರವೇಶದೊಂದಿಗೆ ಸರ್ಕಾರ ತನ್ನ ನಿಲುವನ್ನು ಬದಲಿಸಿದೆ. ಇದರ ಜತೆ ಎಡಪಕ್ಷಗಳು ಮುಖ್ಯವಾಗಿ ಸಿಪಿಐ ಇಷ್ಟು ಕಠಿಣ ನಿಯಮ ಜಾರಿಗೆ ತರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿತು.
ಸಾಮಾಜಿಕ ಮಾಧ್ಯಮಗಳಲ್ಲಿನ ನಿಂದನಾತ್ಮಕ ಮತ್ತು ಅವಹೇಳನಾಕಾರಿ ಚಟುವಟಿಕೆಗಳನ್ನು ತಡೆಯಲು ಪೊಲೀಸ್ ಕಾಯ್ದೆಗೆ ತಿದ್ದುಪಡಿ ತರಲು ಸರ್ಕಾರ ನಿರ್ಧರಿಸಿರುವುದಾಗಿ ವಿಜಯನ್ ತಿಳಿಸಿದ್ದರು. ಕಾನೂನನ್ನು ಜಾರಿಗೆ ತರದೇ ಇದ್ದರೂ, ಸಾಮಾಜಿಕ ಮಾಧ್ಯಮಗಳಲ್ಲಿ ವೈಯಕ್ತಿಕ ಸ್ವಾತಂತ್ರ್ಯವನ್ನು ಉಲ್ಲಂಘಿಸುವ ಮತ್ತು ಮಾನವ ಉತ್ಸಾಹದ ಘನತೆಯನ್ನು ಕುಗ್ಗಿಸುವಂತಹ ಪ್ರಚಾರ ಕಾರ್ಯಗಳು ಮತ್ತು ಪೋಸ್ಟ್ಗಳಿಂದ ದೂರ ಇರುವಂತೆ ಮನವಿ ಮಾಡಿದ್ದಾರೆ.












Click it and Unblock the Notifications