ಉಗ್ರರ ಅಟ್ಟಹಾಸ: ಜಮ್ಮು-ಕಾಶ್ಮೀರ ತೊರೆದು ತವರು ರಾಜ್ಯದತ್ತ ಹೆಜ್ಜೆಯಿಟ್ಟ ಕಾರ್ಮಿಕರು
ಶ್ರೀನಗರ, ಅಕ್ಟೋಬರ್ 18: ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಹಲವಾರು ದಿನಗಳಿಂದ ನಾಗರಿಕರ ಹತ್ಯೆ ಮಾಡಲಾಗುತ್ತಿದೆ. ಮುಖ್ಯವಾಗಿ ಬೇರೆ ರಾಜ್ಯಗಳಿಂದ ಆಗಮಿಸಿ ಜಮ್ಮು ಮತ್ತು ಕಾಶ್ಮೀರದಲ್ಲಿ ಬೀಡು ಬಿಟ್ಟಿರುವ ಅಥವಾ ಕೆಲಸ ಮಾಡುತ್ತಿರುವ ಜನರನ್ನು ಗುರಿಯಾಗಿಸಿಕೊಂಡು ಉಗ್ರರು ದಾಳಿ ನಡೆಸಿದ್ದಾರೆ.
ಈವರೆಗೆ 11 ಮಂದಿ ಕಾರ್ಮಿಕರ ಸಾವು ಸಂಭವಿಸಿದೆ. ಈ ಎಲ್ಲಾ ಬೆಳವಣಿಗೆಯ ಹಿನ್ನಲೆ ಜಮ್ಮು ಮತ್ತು ಕಾಶ್ಮೀರದಲ್ಲಿ ನೆಲೆಸಿರುವ ಬೇರೆ ರಾಜ್ಯಗಳ ಕಾರ್ಮಿಕರು ಜಮ್ಮು ಮತ್ತು ಕಾಶ್ಮೀರವನ್ನು ತೊರೆದು ಮತ್ತೆ ತಮ್ಮ ತವರು ರಾಜ್ಯಕ್ಕೆ ತೆರಳುತ್ತಿದ್ದಾರೆ. ಶ್ರೀನಗರದಲ್ಲಿ ಸುರಿಯುತ್ತಿರುವ ಮಳೆಯ ನಡುವೆಯೂ ಮೂವರು ಮಕ್ಕಳ ಜೊತೆಗೆ ಬಿಹಾರ ಮೂಲದ ಕಾರ್ಮಿಕ ವಿಕಾಸ್ ಔಧರಿ ತಮ್ಮ ರಾಜ್ಯದತ್ತ ವಾಪಸ್ ಆಗುತ್ತಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಇರುವ ಈ ಕುಟುಂಬವು ಈಗ ಉಗ್ರರ ಅಟ್ಟಹಾಸಕ್ಕೆ ಬೆದರಿ ಕೇಂದ್ರಾಡಳಿತ ಪ್ರದೇಶವನ್ನು ತೊರೆಯುತ್ತಿದ್ದಾರೆ. ಬಿಹಾರ ಮೂಲದ ಕಾರ್ಮಿಕ ವಿಕಾಸ್ ಔಧರಿಯ ನೆರೆಯ ಮನೆಯಲ್ಲಿ ವಾಸವಿರುವ ಗೋಲ್ಗಪ್ಪ ಮಾರಾಟಗಾರ ಅರವಿಂದ್ ಕುಮಾರ್ ಇತ್ತೀಚೆಗೆ ಉಗ್ರರ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ. ಉಗ್ರರು ಮುಖ್ಯವಾಗಿ ಇತರೆ ರಾಜ್ಯಗಳ ಜನರನ್ನು ಗುರಿಯಾಗಿಸಿಕೊಂಡು ದಾಳಿಯನ್ನು ನಡೆಸುತ್ತಿದ್ದಾರೆ. ಬೇರೆ ರಾಜ್ಯದ ಜನರಲ್ಲಿ ಭೀತಿ ಸೃಷ್ಟಿ ಮಾಡುವ ನಿಟ್ಟಿನಲ್ಲಿ ಉಗ್ರರು ಈ ದಾಳಿಯನ್ನು ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಇನ್ನು ಜಮ್ಮು ಮತ್ತು ಕಾಶ್ಮೀರವನ್ನು ತೊರೆದು ತನ್ನ ತವರು ರಾಜ್ಯಕ್ಕೆ ತೆರಳುತ್ತಿರುವ ಬಗ್ಗೆ ಮಾತನಾಡಿದ ಬಿಹಾರಿ ಕಾರ್ಮಿಕ ವಿಕಾಸ್ ಚೌಧರಿ, "ಬಿಹಾರಿ ಕಾರ್ಮಿಕರನ್ನು ಇಲ್ಲಿ ಹತ್ಯೆ ಮಾಡಲಾಗುತ್ತಿದೆ. ನಮ್ಮನ್ನು ಜಮ್ಮು ಮತ್ತು ಕಾಶ್ಮೀರದಿಂದ ಅವರು ಹೊರ ಹಾಕಲು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ನಾವು ಆತಂಕಕ್ಕೆ ಒಳಗಾಗಿದ್ದೇವೆ. ಇತ್ತೀಚೆಗೆ ಸಾವನ್ನಪ್ಪಿದ ಗೋಲ್ಗಪ್ಪ ಮಾರಾಟಗಾರ ಅರವಿಂದ್ ಕುಮಾರ್ ನನ್ನ ನೆರೆಮನೆಯವನು. ನಾವು ಒಂದೇ ಅಪಾರ್ಟ್ಮೆಂಟ್ನಲ್ಲಿ ವಾಸವಿದ್ದೆವು," ಎಂದು ಹೇಳಿದರು.
ಬಿಹಾರಿ ಕಾರ್ಮಿಕ ವಿಕಾಸ್ ಜೊತೆಯೇ ಕಾರ್ಯನಿರ್ವಹಣೆ ಮಾಡುತ್ತಿರುವ ಹಾಗೂ ನೆರೆ ಮನೆಯವರಾದ ಆಶಿಶ್ ಎಂಬಾತ, "ನಮಗೆ ಈ ಮನೆಯ ಮಾಲೀಕರು ಊರಿಗೆ ಹೋಗಲು 3 ಸಾವಿರ ರೂಪಾಯಿ ಬಸ್ನ ಖರ್ಚಿಗೆ ನೀಡಿದ್ದಾರೆ" ಎಂದು ತಿಳಿಸಿದ್ದಾರೆ. ಇಲ್ಲಿನ ಸ್ಥಳೀಯ ಜನರು ಈ ಸಂದರ್ಭದಲ್ಲಿ ಬೇರೆ ರಾಜ್ಯದ ಜನರಿಗೆ ಸಹಾಯ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
"ಕಾಶ್ಮೀರಿ ಜನರು ಒಳ್ಳೆಯವರಾಗಿದ್ದಾರೆ. ನಮಗೆ ಮನೆಯ ಮಾಲೀಕರು ನಮ್ಮ ಬಸ್ಸಿನ ಖರ್ಚಿಗಾಗಿ ಮೂರು ಸಾವಿರ ರೂಪಾಯಿ ನೀಡಿದ್ದಾರೆ. ಅವರು ಬಹಳ ಒಳ್ಳೆಯ ಜನರು. ಆದರೆ ಈ ಎಲ್ಲಾ ಹತ್ಯೆಗಳ ಬಳಿಕ ನಮ್ಮ ಕುಟುಂಬವು ಈಗ ಆತಂಕಕ್ಕೆ ಒಳಗಾಗಿದೆ. ನಮ್ಮನ್ನು ಹಿಂದಿರುಗಿ ಬರುವಂತೆ ನಮ್ಮ ಕುಟುಂಬಸ್ಥರು ಹೇಳುತ್ತಿದ್ದಾರೆ" ಎಂದು ಕೂಡಾ ಆಶಿಶ್ ಹೇಳಿದ್ದಾರೆ.

ಬೇರೆ ರಾಜ್ಯದ ಜನರ ಮೇಲೆ ದಾಳಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬೇರೆ ರಾಜ್ಯದ ವಲಸೆ ಕಾರ್ಮಿಕರನ್ನು ಸುರಕ್ಷಿತ ಸ್ಥಳದಲ್ಲಿ ಇರಿಸಲಾಗಿದೆ ಎಂದು ವರದಿಯು ಹೇಳಿದೆ. ಈ ಬಗ್ಗೆ ಮಾಹಿತಿ ನೀಡಿರುವ ವಲಸೆ ಕಾರ್ಮಿಕರು, "ನಮ್ಮನ್ನು ಸುರಕ್ಷಿತ ಪ್ರದೇಶಕ್ಕೆ ಕರೆದು ತರಲಾಗಿದೆ," ಎಂದಿದ್ದಾರೆ. "ಕಳೆದ ರಾತ್ರಿ ನಾವು ನಿದ್ದೆ ಮಾಡುತ್ತಿದ್ದಾಗ ಪೊಲೀಸರು ಬಂದು ನಮ್ಮನ್ನು ಪೊಲೀಸ್ ಠಾಣೆಗೆ ಬರುವಂತೆ ತಿಳಿಸಿದರು. ನಮ್ಮ ಕುಟುಂಬದಲ್ಲಿ ನಾನು ಓರ್ವನೇ ಕೆಲಸ ಮಾಡುವ ವ್ಯಕ್ತಿ. ಬಿಹಾರದಲ್ಲಿ ಬೇರೆ ಯಾವುದೇ ಕೆಲಸವೂ ಇಲ್ಲ" ಎಂದು ಬಿಹಾರದ ಇನ್ನೋರ್ವ ಕಾರ್ಮಿಕ ರಾಹುಲ್ ನೊಂದು ನುಡಿದಿದ್ದಾರೆ.
ಇನ್ನು ಮತ್ತೋರ್ವ ಬಿಹಾರದ ಕಾರ್ಮಿಕ ಮೊಹಮ್ಮದ್ ಸಲಾಮ್, ಜಮ್ಮು ಮತ್ತು ಕಾಶ್ಮೀರದಲ್ಲಿ ನಾನು ಇಂತಹ ಸ್ಥಿತಿಯನ್ನು ಎಂದೂ ಕೂಡಾ ನೋಡಿಲ್ಲ ಎಂದು ಹೇಳಿದ್ದಾರೆ. "ನಾವು ಎಂದೂ ಕೂಡಾ ಇಂತಹ ಸಂದರ್ಭವನ್ನು ಎದುರು ನೋಡಿಲ್ಲ. ಕಳೆದ ರಾತ್ರಿ ಪೊಲೀಸರು ನಮ್ಮನ್ನು ಸುರಕ್ಷಿತ ಸ್ಥಳಕ್ಕೆ ಕರೆ ತಂದಿದ್ದಾರೆ. ನಾವು ಈಗ ಮಾಡುವುದಾದರೂ ಏನು? ನಾವು ಇಲ್ಲಿಗೆ ಕೆಲಸಕ್ಕೆಂದು ಬಂದವರು," ಎಂದು ದಿಕ್ಕುದೋಚದೆ ನುಡಿದಿದ್ದಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications