ಕಾಶ್ಮೀರ ಈಗ ಹೇಗಿದೆ? ಯುರೋಪಿನಿಂದ ಬಂದಿದ್ದ ನಿಯೋಗ ಹೇಳಿದ್ದೇನು?
ಶ್ರೀನಗರ, ಅಕ್ಟೋಬರ್ 30: "ಭಯೋತ್ಪಾದನೆಯ ವಿರುದ್ಧ ಹೋರಾಡುವ ಭಾರತದ ಪ್ರಯತ್ನಕ್ಕೆ ನಾವು ಬೆಂಬಲ ಸೂಚಿಸುತ್ತೇವೆ" ಎಂದು ಕಾಶ್ಮೀರದ ಪ್ರಸ್ತುತ ಸ್ಥಿತಿಯ ಬಗ್ಗೆ ಅವಲೋಕಿಸಲು ಬಂದಿದ್ದ ಯುರೋಪಿಯನ್ ನಿಯೋಗ ಹೇಳಿದೆ.
ಸಂವಿಧಾನದ 370 ನೇ ವಿಧಿ ರದ್ದತಿಯ ನಂತರ ಜಮ್ಮು ಮತ್ತು ಕಾಶ್ಮೀರದ ಸ್ಥಿತಿ ಹದಗೆಟ್ಟಿದೆ, ಆದರೆ ಅದನ್ನು ವರದಿ ಮಾಡಲು ಮಾಧ್ಯಮಗಳಿಗೂ ಅಲ್ಲಿಗೆ ತೆರಳಲು ಅವಕಾಶ ನೀಡಲಾಗುತ್ತಿಲ್ಲ. ರಾಜಕೀಯ ನಾಯಕರನ್ನು ಬಂಧಿಸಿಡಲಾಗಿದೆ. ಅಲ್ಲಿ, ಮೂಲಭೂತ ಹಕ್ಕುಗಳನ್ನು ಹತ್ತಿಕ್ಕಲಾಗುತ್ತಿದೆ. ಆದ್ದರಿಂದ ಅಂತಾರಾಷ್ಟ್ರೀಯ ನಿಯೋಗವೊಂದು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿ ಕಣಿವೆ ರಾಜ್ಯದಲ್ಲಿ ಏನಾಗುತ್ತಿದೆ ಎಂಬ ಬಗ್ಗೆ ಅಂತಾರಾಷ್ಟ್ರೀಯ ಮಾಧ್ಯಮಗಳಿಗೆ ವರದಿ ನೀಡಬೇಕು ಎಂದು ಪಾಕಿಸ್ತಾನ, ಭಾರತದಲ್ಲಿ ಕೇಂದ್ರ ಸರ್ಕಾರದ ವಿರೋಧಿ ಪಕ್ಷಗಳು ಮತ್ತು ಇನ್ನಿತರ ಕೆಲವರು ದನಿ ಎತ್ತಿದ್ದರು.
ಅಂತೆಯೇ ಅಕ್ಟೋಬರ್ 29 ರಂದು ಯುರೋಪಿನ ಒಟ್ಟು 27 ಸಂಸದರ ತಂಡ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿತ್ತು.
ಭೇಟಿಯ ಮುಖ್ಯಾಂಶಗಳ ವಿವರ ಇಲ್ಲಿದೆ.

ನಿಯೋಗದ ವಿಶ್ವಾಸಾರ್ಹತೆಯ ಬಗ್ಗೆಯೇ ಸಂದೇಹ
ಜಮ್ಮು ಮತ್ತು ಕಾಶ್ಮೀರಕ್ಕೆ ಆಗಮಿಸಿದ್ದ 27 ಸದಸ್ಯರ ತಂಡದಲ್ಲಿ ಮೂವರು ಮಾತ್ರವೇ ಎಡ ಮತ್ತು ಲಿಬರಲ್ ಪಕ್ಷಕ್ಕೆ ಸೇರಿದವರು. ಮಿಕ್ಕವರೆಲ್ಲರೂ ಬಲಪಂಥೀಯ ವಾದದ ಬೆಂಬಲಿಗರಾಗಿರುವುದರಿಂದ ಆ ನಿಯೋಗದ ವರದಿಯೂ ಸಹಜವಾಗಯೇ ಸರ್ಕಾರದ ಪರ ಇರುತ್ತದೆ ಎಂದು ವಿಪಕ್ಷಗಳು ನಿಯೋಗದ ವಿಶ್ವಾಸಾರ್ಹತೆಯ ಬಗ್ಗೆಯೇ ಪ್ರಶ್ನಿಸಿದ್ದವು.

ನಿಯೋಗ ಹೇಳಿದ್ದೇನು?
"ನಾವು ಅಂತಾರಾಷ್ಟ್ರೀಯ ನಿಯೋಗದ ಸದಸ್ಯರು, ಭಯೋತ್ಪಾದನೆಯನ್ನು ನಿಯಂತ್ರಿಸುವ ವಿಷಯಕ್ಕೆ ಸಂಬಂಧಿಸಿದಂತೆ ಮತ್ತು ಶಾಂತಿ ನೆಲೆಗೊಳಿಸುವ ವಿಷಯಕ್ಕೆ ಸಂಬಂಧಿಸಿದಂತೆ ಸಂಪೂರ್ಣವಾಗಿ ಭಾರತವನ್ನು ಬೆಂಬಲಿಸುತ್ತೇವೆ. ಕಾಶ್ಮೀರದಲ್ಲಿ ನಡೆಯುತ್ತಿರುವ ಭಯೋತ್ಪಾದಕ ಘಟನೆಗಳಲಿಗೆ ಕಾರಣರಾದ ಉಗ್ರರಲ್ಲಿ ಬಹುಪಾಲು ಪಾಕಿಸ್ತಾನದವರು" ಎಂದು ನಿಯೋಗದ ಸದಸ್ಯರು ಹೇಳಿದ್ದಾರೆ.

ಕಾಶ್ಮೀರಿಗಳ ಮಾತು
"ನಾವು ಭಾರತ ದೇಶದ ಪ್ರಜೆಗಳು. ನಾವು ಎಲ್ಲ ಭಾರತೀಯ ಪ್ರಜೆಗಳಂತೆ ಭಾರತೀಯರಾಗಿಯೇ ಬದುಕಲು ಇಷ್ಟಪಡುತ್ತೇವೆ. ನಮಗೆ ದೇಶದ ಇತರ ಪ್ರದೇಶಗಳಂತೆ ನಮ್ಮ ರಾಜ್ಯವೂ ಅಭಿವೃದ್ಧಿ ಹೊಂದುವುದು ಬೇಕಾಗಿದೆ" ಎಂದು ಸ್ಥಳೀಯರು ಹೇಳಿದ್ದಾಗಿ ನಿಯೋಗ ಹೇಳಿದೆ.

ಭೇಟಿ ಪೂರ್ವಗ್ರಹ ಮುಕ್ತವಾಗಿಲ್ಲ
ಈ ನಿಯೋಗ ಕಾಶ್ಮೀರದಲ್ಲಿ ಯಾವುದೇ ರಾಜಕಾರಣಿಗಳನ್ನಾಗಲೀ, ಬಂಧನಕ್ಕೊಳಗಾದ ನಾಯಕರನ್ನಾಗಲೀ ಭೇಟಿ ಮಾಡಿಲ್ಲ. ನಿಯೋಗವನ್ನು ಭೇಟಿ ಮಾಡಳು ಬಂದ ನ್ಯಾಶ್ನಲ್ ಕಾನ್ಫಿರೆನ್ಸ್ ನ ಇಬ್ಬರು ಸದಸ್ಯರನ್ನೂ ತಡೆ ಹಿಡಿಯಲಾಗಿತ್ತು ಎಂದು ಅವರು ದೂರಿದ್ದರು.

ಕಾಶ್ಮೀರ ಭೇಟಿಗೂ ಮುನ್ನವೇ ವಾಪಸ್ಸಾದ ನಾಲ್ವರು ಸಂಸದರು!
27 ಸದಸ್ಯರಲ್ಲಿ ನಾಲ್ವರು ಕಾಶ್ಮೀರಕ್ಕೆ ಭೇಟಿಯಾಗುವ ಮುನ್ನವೇ ತಮ್ಮ ದೇಶಕ್ಕೆ ವಾಪಸ್ಸಾದರು. ಕಾಶ್ಮೀರದಲ್ಲಿ ತಾವು ಹೇಳಿದ ಪ್ರದೇಶಕ್ಕೆ ತೆರಳಲು ಅನುಮತಿ ನೀಡದ ಕಾರಣ, ವರದಿಯನ್ನು ಪೂರ್ವಗ್ರಹ ಮುಕ್ತವಾಗಿ ನೀಡಲು ಸಾಧ್ಯವಿಲ್ಲ ಎಂದು ದೂರಿ ಅವರು ವಾಪಸ್ಸಾಗಿದ್ದರು ಎನ್ನಲಾಗಿದೆ.












Click it and Unblock the Notifications