ಮೂವರು ಉಗ್ರರ ಹತ್ಯೆ: ಅರ್ಜಿ ಸಲ್ಲಿಸಲು ಹೋಗಿದ್ದರು ಎಂದು ಕುಟುಂಬದವರ ಹೇಳಿಕೆ
ಶ್ರೀನಗರ, ಡಿಸೆಂಬರ್ 30: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿನ ಪರಿಂಪೊರಾ ಪ್ರದೇಶದಲ್ಲಿ ಬುಧವಾರ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ರಾತ್ರಿಯಿಂದ ಬೆಳಗಿನವರೆಗೆ ನಡೆದ ಎನ್ಕೌಂಟರ್ನಲ್ಲಿ ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳವಾರ ಸಂಜೆ ಭಯೋತ್ಪಾದಕರ ಪತ್ತೆಗೆ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿದ್ದ ಸಂದರ್ಭದಲ್ಲಿ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ರಾತ್ರಿಯಿಡೀ ಈ ಗುಂಡಿನ ಚಕಮಕಿ ನಡೆದಿತ್ತು. ಒಬ್ಬ ಉಗ್ರನನ್ನು ಬೆಳಿಗ್ಗೆ ಹತ್ಯೆ ಮಾಡಲಾಗಿತ್ತು. ಇನ್ನಿಬ್ಬರನ್ನು ನಂತರ ಗುಂಡಿಕ್ಕಿ ಕೊಲ್ಲಲಾಯಿತು.
ಆದರೆ ಎನ್ಕೌಂಟರ್ನಲ್ಲಿ ಹತರಾದ ಮೂವರು ಭಯೋತ್ಪಾದಕರ ಕುಟುಂಬದವರು ಬುಧವಾರ ಪ್ರತಿಭಟನೆ ನಡೆಸಿದ್ದು, ಅವರು ಅಮಾಯಕರು ಎಂದು ಹೇಳಿದ್ದಾರೆ. ಕಾಶ್ಮೀರ ವಿಶ್ವವಿದ್ಯಾಲಯದಲ್ಲಿ ಅರ್ಜಿ ಸಲ್ಲಿಸಲು ಮೂವರು ಯುವಕರು ಮಂಗಳವಾರ ಮನೆಯಿಂದ ಹೊರಟಿದ್ದರು ಎಂದು ಪ್ರತಿಪಾದಿಸಿದ್ದಾರೆ.

ಎನ್ಕೌಂಟರ್ನಲ್ಲಿ ಹತ್ಯೆಯಾದ ಹುಡುಗರು ಭಯೋತ್ಪಾದಕರಲ್ಲ ಎಂದು ಕುಟುಂಬದ ಸದಸ್ಯರು ಹೇಳುವ ಎರಡು ವಿಡಿಯೋಗಳನ್ನು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಹಂಚಿಕೊಂಡಿದ್ದಾರೆ. ಹತ್ಯೆಯಾದ ಮೂವರಲ್ಲಿ ಒಬ್ಬ ಬಾಲಕ 11ನೇ ತರಗತಿಯವನು ಎಂದು ಸಂಬಂಧಿಯೊಬ್ಬರು ಹೇಳಿದ್ದಾರೆ.
ಈ ಮೂವರು ಯುವಕರ ಹೆಸರು ಉಗ್ರರ ಪಟ್ಟಿಯಲ್ಲಿ ಇಲ್ಲದೆ ಹೋದರೂ ಅವರಲ್ಲಿ ಇಬ್ಬರು ಭಯೋತ್ಪಾದಕರ ಕಟ್ಟರ್ ಸಹವರ್ತಿಗಳಾಗಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.












Click it and Unblock the Notifications