ಜಮ್ಮು ಮತ್ತು ಕಾಶ್ಮೀರ; ಉಗ್ರರಿಂದ ಬಿಜೆಪಿ ಕಾರ್ಯಕರ್ತರ ಹತ್ಯೆ
ಶ್ರೀನಗರ, ಅಕ್ಟೋಬರ್ 29: ಜಮ್ಮು ಮತ್ತು ಕಾಶ್ಮೀರದ ಕುಲ್ ಗಾಮ್ ಜಿಲ್ಲೆಯಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ ಮೂವರು ಬಿಜೆಪಿ ಕಾರ್ಯಕರ್ತರು ಸಾವನ್ನಪ್ಪಿದ್ದಾರೆ. ಬಿಜೆಪಿ ಕಾರ್ಯಕರ್ತರು ಸಂಚಾರ ನಡೆಸುತ್ತಿದ್ದ ಕಾರಿನ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ.
ಗುರುವಾರ ರಾತ್ರಿ 8.20ರ ಸುಮಾರಿಗೆ ಕುಲ್ ಗಾಮ್ ಪೊಲೀಸ್ ಠಾಣೆಗೆ ದಾಳಿಯ ಬಗ್ಗೆ ಮಾಹಿತಿ ಬಂದಿದೆ. ತಕ್ಷಣ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದರು. ಗಾಯಗೊಂಡಿದ್ದ ಕಾರ್ಯಕರ್ತರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಯಿತು.
ಆಸ್ಪತ್ರೆಗೆ ಕರೆದುಕೊಂಡು ಬರುವಾಗಲೇ ಅವರು ಮೃತಪಟ್ಟಿದ್ದರು ಎಂದು ವೈದ್ಯರು ಹೇಳಿದ್ದಾರೆ. ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ನಾಯಕ ಒಮರ್ ಅಬ್ದುಲ್ಲಾ ಉಗ್ರರ ದಾಳಿಯನ್ನು ಖಂಡಿಸಿದ್ದಾರೆ. ಈ ಕುರಿತು ಅವರು ಟ್ವೀಟ್ ಮಾಡಿದ್ದಾರೆ.

ಮೃತಪಟ್ಟವರನ್ನು ಕುಲ್ ಗಾಮ್ ಜಿಲ್ಲೆಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಫಿದಾ ಹುಸೈನ್, ಪಕ್ಷದ ಕಾರ್ಯಕರ್ತರಾದ ಉಮರ್ ರಶೀದ್, ಸೋಹತ್ ದೇವಸರ್ ಎಂದು ಗುರುತಿಸಲಾಗಿದೆ. ಕಟ್ಟಡದ ಬಳಿ ಅಡಗಿ ಕುಳಿತಿದ್ದ ಉಗ್ರರು ಕಾರು ಬರುತ್ತಿದ್ದಂತೆ ಗುಂಡಿನ ದಾಳಿ ನಡೆಸಿದ್ದಾರೆ.
ಕುಲ್ ಗಾಮ್ ಪೊಲೀಸರು ಕೊಲೆ ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದಾರೆ. ಸ್ಥಳವನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದು, ಪರಾರಿಯಾಗಿರುವ ಉಗ್ರರಿಗಾಗಿ ಹುಡುಕಾಟವನ್ನು ನಡೆಸುತ್ತಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಜುಲೈ ತಿಂಗಳಿನಿಂದ ಬಿಜೆಪಿ ನಾಯಕರು, ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಉಗ್ರರು ದಾಳಿ ನಡೆಸುತ್ತಿದ್ದಾರೆ. ಜುಲೈ ಅಂತ್ಯದಲ್ಲಿ ಕುಲ್ ಗಾಮ್ ಪ್ರದೇಶದ ಸರ್ ಪಂಚ್, ಬಿಜೆಪಿ ನಾಯಕನನ್ನು ಉಗ್ರರು ಕೊಂದು ಹಾಕಿದ್ದರು.












Click it and Unblock the Notifications