ಕಾಶ್ಮೀರ; ಉಗ್ರ ನಿಗ್ರಹ ಕಾರ್ಯಾಚರಣೆ ವೇಳೆ ಮೇ. ರಘುನಾಥ್ ಹುತಾತ್ಮ
ಶ್ರೀನಗರ, ಮೇ 6: ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್ ಬಳಿ ಉಗ್ರರ ವಿರುದ್ಧದ ಕಾರ್ಯಾಚರಣೆ ವೇಳೆ ಭಾರತದ ಸೇನಾಧಿಕಾರಿಯೊಬ್ಬರು ಹುತಾತ್ಮರಾಗಿದ್ದಾರೆ. ಮೇಜರ್ ರಘುನಾಥ್ ಅಹ್ಲಾವತ್ (34 ವರ್ಷ) ಹುತಾತ್ಮರಾದ ಸೇನಾಧಿಕಾರಿ. ಕಾರ್ಯಾಚರಣೆ ವೇಳೆ ಕಾಲುಜಾರಿ ಹಳ್ಳಕ್ಕೆ ಬಿದ್ದು ಮೃತಪಟ್ಟಿದ್ದಾರೆ.
ಉಗ್ರರು ಗಡಿಯಿಂದ ನುಸುಳಿ ಬಂದಿರುವ ಬಗ್ಗೆ ಗುಪ್ತಚರ ಮಾಹಿತಿ ಬಂದ ಹಿನ್ನೆಲೆಯಲ್ಲಿ ಮೇಜರ್ ರಘುನಾಥ್ ಅಹ್ಲಾವತ್ ನೇತೃತ್ವದ ತಂಡದಿಂದ ಕಾರ್ಯಾಚರಣೆ ನಡೆದಿತ್ತು. ಈ ವೇಳೆ ಅವಘಡ ಸಂಭವಿಸಿದೆ.
ಉಗ್ರ ನಿಗ್ರಹ ಕಾರ್ಯಾಚರಣೆ ವೇಳೆ ತಂಡವನ್ನು ಸುರಕ್ಷಿತವಾಗಿ ಮುನ್ನಡೆಸುವ ಉದ್ದೇಶದಿಂದ ಮೇಜರ್ ರಘುನಾಥ್ ಅಹಲಾವತ್ ಸ್ವತಃ ಮುಂಚೂಣಿಯಲ್ಲಿ ನಿಂತು ಸಾಗುತ್ತಿದ್ದರು. ಉಗ್ರರ ಇರುವಿಕೆಯನ್ನು ಗುರುತಿಸಲು ಅವರು ಕಡಿದಾದ ಬೆಟ್ಟದ ದಾರಿಯಲ್ಲಿ ಸಾಗುತ್ತಿದ್ದರು.

ಆಗ ಕೆಟ್ಟ ಹವಾಮಾನ ಹಾಗೂ ತೇವದ ಕಾರಣ ನೆಲ ಜಾರುತ್ತಿತ್ತು. ಅವರು 60 ಮೀಟರ್ ಆಳದ ಕಂದಕಕ್ಕೆ ಜಾರಿ ಬಿದ್ದರೆನ್ನಲಾಗಿದೆ. ಬಲವಾಗಿ ಗಾಯಗೊಂಡ ಅವರು ಸಮೀಪದ ಆರ್ಮಿ ಆಸ್ಪತ್ರೆಗೆ ಸಾಗಿಸುವುಷ್ಟರಲ್ಲಿ ಪ್ರಾಣ ಪಕ್ಷಿ ಹಾರಿಹೋಗಿತ್ತು ಎಂದು ಭಾರತೀಯ ಸೇನಾ ಅಧಿಕಾರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಶುಕ್ರವಾರ ಬೆಳಗ್ಗೆ ಈ ಘಟನೆ ನಡೆದಿದೆ. ಶ್ರೀನಗರದಲ್ಲಿ ಬಾದಾಮಿ ಬಾಗ್ ಕಂಟೋನ್ಮೆಂಟ್ನಲ್ಲಿ ಸೇನೆಯಿಂದ ಹುತಾತ್ಮ ಯೋಧನಿಗೆ ಗೌರವಾರ್ಪಣೆ ಸಲ್ಲಿಸಲಾಗಿದೆ.
ದೆಹಲಿಯವರಾದ ಹುತಾತ್ಮ ಮೇಜರ್ ರಘುನಾಥ್ ಅಹಲಾವತ್ 2012ರಲ್ಲಿ ಸೇನೆಗೆ ನಿಯೋಜಿತರಾಗಿದ್ದರು. ಅವರು ಪತ್ನಿ ಮತ್ತು ಪೋಷಕರನ್ನು ಅಗಲಿದ್ದಾರೆ. ದಿ. ಮೇಜರ್ ರಘುನಾಥ್ ಅಹ್ಲಾವತ್ ಅವರ ಅಂತ್ಯ ಸಂಸ್ಕಾರವನ್ನು ಸ್ವಗ್ರಾಮದಲ್ಲಿ ನಡೆಸಲಾಗಿದೆ.

ಇಬ್ಬರು ಉಗ್ರ ಸಹಚರರ ಬಂಧನ: ಇಂದು ಬುದಗಾಮ್ ಜಿಲ್ಲೆಯ ಹುರೂ ಎಂಬಲ್ಲಿ ಅನ್ಸಾರ್ ಗಜ್ವತ್ ಉಲ್ ಹಿಂದ್ ಎಂಬ ಭಯೋತ್ಪಾದಕ ಸಂಘಟನೆಗೆ ಸೇರಿದ ಇಬ್ಬರು ಕಾರ್ಯಕರ್ತರನ್ನು ಭದ್ರತಾ ಪಡೆಗಳು ಬಂಧಿಸಿವೆ.
ಬಂಧಿತರನ್ನು ಆಮಿರ್ ಮಂಜೂರ್ ಬುದೂ ಮತ್ತು ಶಾಹಿದ್ ರಸೂಲ್ ಗನಾಯ್ ಎಂದು ಗುರುತಿಸಲಾಗಿದೆ. ಇವರಿಂದ ಒಂದು ಹ್ಯಾಂಡ್ ಗ್ರಿನೇಡ್, ಎಕೆ-47 ಗುಂಡುಗಳನ್ನ ವಶಪಡಿಸಿಕೊಳ್ಳಲಾಗಿದೆ. ಬುಡಗಾಂವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications