'ಕದಡಿದ ಕಾಶ್ಮೀರ, ಬೆಂಕಿಯೊಂದಿಗೆ ಸರಸ': ಕಣಿವೆ ರಾಜ್ಯದಲ್ಲಿ ಏನಾಗುತ್ತಿದೆ?
Recommended Video
ಕಳೆದೊಂದು ವಾರದಿಂದ ಭಾರತದ ಮುಕುಟ ಎಂದು ಕರೆಸಿಕೊಳ್ಳುವ ಜಮ್ಮು ಮತ್ತು ಕಾಶ್ಮೀರ ಯಥಾಸ್ಥಿತಿಯನ್ನು ಕಳೆದುಕೊಂಡಿದೆ ಮತ್ತು ಮತ್ತೆ ಪ್ರಕ್ಷುಬ್ಧತೆಯತ್ತ ಮುಖಮಾಡುವ ಸಾಧ್ಯತೆಗಳಿವೆ.
ಅಮರನಾಥ ಯಾತ್ರಿಕರ ರಕ್ಷಣೆ ನೆಪ ಮುಂದಿಟ್ಟು ಕೇಂದ್ರ ಸರಕಾರ ಸೇನಾ ಜಮಾವಣೆಯನ್ನು ಕಳೆದ ವಾರ ಆರಂಭಿಸಿತ್ತು. ಜತೆಗೆ, ಜಮ್ಮು ಮತ್ತು ಕಾಶ್ಮೀರ ರಾಜ್ಯದ ಆಡಳಿತ ಹೊಣೆ ಹೊತ್ತಿರುವ ರಾಜ್ಯಪಾಲ ಸತ್ಯ ಪಾಲ್ ಮಲ್ಲಿಕ್, "ಪಾಕಿಸ್ತಾನದ ಗಡಿಯಿಂದ 15ಕ್ಕೂ ಹೆಚ್ಚು ಫಿದಾಯಿನ್ಗಳು ಕಾಶ್ಮೀರಕ್ಕೆ ಬಂದಿದ್ದಾರೆ. ಅವರು ಯಾವುದೇ ಕ್ಷಣದಲ್ಲಿ ದಾಳಿಗಳನ್ನು ನಡೆಸುವ ಸಾಧ್ಯತೆ ಇದೆ. ಈ ಕಾರಣಕ್ಕೆ ಭದ್ರತೆಯನ್ನು ಹೆಚ್ಚಿಸಲಾಗಿದೆ,'' ಎಂದಿದ್ದರು. ಮೇಲ್ನೋಟಕ್ಕೆ ಇದು ಕಣಿವೆ ರಾಜ್ಯದ ಸುರಕ್ಷತೆ ವಿಚಾರವಾಗಿ ಕೇಂದ್ರ ತೆಗೆದುಕೊಳ್ಳುತ್ತಿರುವ ಕ್ರಮಗಳು ಅಂತ ಬಿಂಬಿಸುವ ಪ್ರಯತ್ನ ನಡೆದಿತ್ತು.
ಹೀಗೆ ಆರಂಭವಾದ ಕಾಶ್ಮೀರದ ಹೊಸ ಬಿಕ್ಕಟ್ಟೊಂದು ವಾರಾಂತ್ಯದಲ್ಲಿ ದೊಡ್ಡ ತಿರುವನ್ನೇ ತೆಗೆದುಕೊಂಡಿದೆ. ಜಮ್ಮು ಮತ್ತು ಕಾಶ್ಮೀರದ ರಾಜಕೀಯ ನಾಯಕರು, ಮಾಜಿ ಮುಖ್ಯಮಂತ್ರಿಗಳಾದ ಮೆಹಬೂಬ ಮುಫ್ತಿ ಹಾಗೂ ಓಮರ್ ಅಬ್ದುಲ್ಲಾರನ್ನು ರಾತ್ರೋ ರಾತ್ರೋ ಗೃಹ ಬಂಧನಕ್ಕೆ ಒಳಪಡಿಸಲಾಗಿದೆ.

ಕಳೆದ ಒಂದು ವಾರದಿಂದ ಕೇಂದ್ರದ ಸೇನಾ ಜಮಾವಣೆ ವಿಚಾರವಾಗಿ ಹಾಗೂ ಸೆಕ್ಷನ್ 144 ಹೇರಿರುವ ಸಂಬಂಧ ಇವರಿಬ್ಬರು ವಿರೋಧಿಸಿಕೊಂಡು ಬಂದಿದ್ದರು. ಇದು ಕಣಿವೆ ರಾಜ್ಯಕ್ಕೆ ನೀಡಿರುವ ವಿಶೇಷ ಸ್ಥಾನಮಾನವನ್ನು ರದ್ಧುಗೊಳಿಸುವ ಪ್ರಯತ್ನ ಎಂದು ಆರೋಪಿಸಿದ್ದರು. ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ, "ಕೇಂದ್ರ ಸರಕಾರ ಕಣಿವೆ ರಾಜ್ಯಕ್ಕೆ ನೀಡಿರುವ ವಿಶೇಷ ಸ್ಥಾನಮಾನವನ್ನು ವಾಪಾಸ್ ತೆಗೆದುಕೊಳ್ಳುವುದಿಲ್ಲ ಎಂದು ಭರವಸೆ ನೀಡಿತ್ತು. ಆದರೆ ಈಗ ತೆಗೆದುಕೊಳ್ಳುತ್ತಿರುವ ತೀರ್ಮಾನ ಇದಕ್ಕೆ ವ್ಯತಿರಿಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಸಂಸತ್ನಲ್ಲಿ ಪ್ರಧಾನಿ ಮೋದಿ ಹೇಳಿಕೆ ನೀಡಬೇಕು,'' ಎಂದು ಒತ್ತಾಯಿಸಿದ್ದರು.
ಒಂದು ಕಡೆ ರಾಜಕೀಯ ಕಿತ್ತಾಟಕ್ಕೆ ಜಮ್ಮ ಮತ್ತು ಕಾಶ್ಮೀರಾದ ಬೆಳವಣಿಗೆಗಳು ಕಾರಣವಾಗಿದ್ದರೆ, ತಳಮಟ್ಟದಲ್ಲಿ ಕಣಿವೆ ರಾಜ್ಯದಲ್ಲಿ ಸ್ತಬ್ಧಗೊಂಡ ಪರಿಸ್ಥಿತಿ ನಿರ್ಮಾಣವಾಗಿತ್ತು. ಶನಿವಾರದ ವೇಳೆಗೆ ಪೆಟ್ರೋಲ್ ಬಂಕ್ಗಳ ಮುಂದೆ ಸಾಲು ಸಾಲು ವಾಹನಗಳು ನೆರೆಯತೊಡಗಿದ್ದವು. ಜನ ಆಹಾಯ ಸಾಮಗ್ರಿಗಳನ್ನು ಖರೀದಿಸಲು ಮುಗಿಬಿದ್ದಿದ್ದರು. ಇವೆಲ್ಲವೂ ಕದಡಿದ ವಾತಾವರಣವನ್ನು ಬಿಂಬಿಸುತ್ತಿದ್ದವು.
ಹೀಗಿರುವಾಗಲೇ ಭಾನುವಾರ ಮಧ್ಯರಾತ್ರಿ ಕೇಂದ್ರ ಸರ್ಕಾರ ತೆಗೆದುಕೊಂಡ ರಾಜಕೀಯ ನಾಯಕರ ಗೃಹಬಂಧನ ಹಾಗೂ ದಿಲ್ಲಿಯಲ್ಲಿ ಸೋಮವಾರ ಆರಂಭವಾಗಿರುವ ಮಹತ್ವದ ಸಂಪುಟ ಸಭೆ ಜಮ್ಮು ಮತ್ತು ಕಾಶ್ಮೀರದ ವಿಚಾರದಲ್ಲಿ ತೆಗೆದುಕೊಳ್ಳುವ ಭವಿಷ್ಯದ ತೀರ್ಮಾನಗಳನ್ನು ಪರೀಕ್ಷೆಗೆ ಒಳಪಡಿಸುವ ಸಾಧ್ಯತೆಯನ್ನು ಮುಂದೆ ಮಾಡಿವೆ.
ಎರಡು ಸೂಕ್ಷ್ಮ ವಿಚಾರಗಳು:
ಜಮ್ಮು ಮತ್ತು ಕಾಶ್ಮೀರದ ಎಲ್ಲಾ ರಾಜಕೀಯ ಪಕ್ಷಗಳು ರಾಜ್ಯಕ್ಕೆ ನೀಡಿರುವ ವಿಶೇಷ ಸ್ಥಾನಮಾನ ಹಾಗೂ ಆರ್ಟಿಕಲ್ 35ಎ ಅಡಿಯಲ್ಲಿ ನೀಡಿರುವ ಅವಕಾಶಗಳನ್ನು ಮೊಟಕುಗೊಳಿಸುವ ವಿಚಾರದಲ್ಲಿ ಎಚ್ಚರಿಕೆಯ ಸಂದೇಶಗಳನ್ನು ನೀಡುತ್ತಲೇ ಬಂದಿವೆ. ಅದರಲ್ಲೂ ಆರ್ಟಿಕಲ್ 35ಎ ಇಲ್ಲಿನ ಅಸೆಂಬ್ಲಿಗೆ ಜಮ್ಮು ಮತ್ತ ಕಾಶ್ಮೀರದ ನಾಗರಿಕ ಹಕ್ಕುಗಳ ರಕ್ಷಣೆಗೆ ವಿಶೇಷ ಅವಕಾಶ ನೀಡಿದೆ. ಇದನ್ನು ಮೊಟಕುಗೊಳಿಸುವುದು ಕಣಿವೆ ರಾಜ್ಯದಲ್ಲಿ ದೊಡ್ಡ ಮಟ್ಟದ ರಕ್ತಪಾತಕ್ಕೆ ಕಾರಣವಾಗಬಹುದು ಎಂಬುದು ಆತಂಕ. ಸ್ಥಳೀಯ ಜನಪ್ರತಿನಿಧಿಗಳ ಸಭೆಗೆ ಇರುವ ಹಕ್ಕುಗಳನ್ನು ಕೇಂದ್ರ ಕಿತ್ತುಕೊಳ್ಳಲು ಬಿಡುವುದಿಲ್ಲ ಎಂಬುದು ಇಲ್ಲಿ ನಡೆದುಕೊಂಡು ಬಂದ ಹಲವು ಹೋರಾಟಗಳ ಆಗ್ರಹವಾಗಿದೆ.
ಇದರ ಜತೆಗೆ ಆರ್ಟಿಕಲ್ 370 ಅಡಿಯಲ್ಲಿ ನೀಡುರುವ ವಿಶೇಷ ಸ್ಥಾನಮಾನದ ವಿಚಾರ ಕೂಡ ಇಲ್ಲಿ ಆಗಾಗ್ಗೆ ಚರ್ಚೆಯ ಕೇಂದ್ರವಾಗಿದೆ. ಇದೀಗ ಕೇಂದ್ರ ಸರಕಾರ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಧಾರ ಈ ಎರಡು ಸಂಗತಿಗಳ ಸುತ್ತಲೇ ಗಿರಕಿಹೊಡೆಯುವ ಸಾಧ್ಯತೆ ಇದೆ.
ರಾಜಧಾನಿ ದಿಲ್ಲಿಯಲ್ಲಿ ಏನೇ ತೀರ್ಮಾನವಾಗಲಿ, ಅದು ಕಣಿವೆ ರಾಜ್ಯದ ಕದಡಿದ ವಾತಾವರಣದಲ್ಲಿ ದೊಡ್ಡ ಪರಿಣಾಮವಂತೂ ಬೀರಲಿದೆ. ಮತ್ತು ಬಿಜೆಪಿ ನೇತೃತ್ವದ ಸರಕಾರದ ಈ ನಡೆ 'ಬೆಂಕಿಯೊಂದಿಗೆ ಸರಸ' ಎಂದು ಪ್ರತಿಪಕ್ಷ ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನುಸಿಂಘ್ವಿ ಹೇಳಿದ್ದಾರೆ.












Click it and Unblock the Notifications