ಜಮ್ಮುನಲ್ಲಿ ಗ್ರೆನೇಡ್ ಎಸೆದವ ಹಿಜ್ಬುಲ್ ಮುಜಾಹಿದ್ದಿನ್ ಉಗ್ರ ಯಾಸಿರ್ ಭಟ್
ಶ್ರೀನಗರ, ಮಾರ್ಚ್ 07 : ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಆತ್ಮಾಹುತಿ ದಾಳಿಯ ನಂತರ ಜಮ್ಮು ಬಸ್ ಸ್ಟ್ಯಾಂಡ್ ನಲ್ಲಿ ನಡೆದಿರುವ ಮತ್ತೊಂದು ಭಯೋತ್ಪಾದಕ ದಾಳಿ ಜಮ್ಮು ಜನರನ್ನು ಮತ್ತೆ ಭಯಭೀತರನ್ನಾಗಿಸಿದೆ.
ಜಮ್ಮುವಿನ ಹೃದಯಭಾಗದಲ್ಲಿರುವ ಜನನಿಬಿಡವಾಗಿದ್ದ ಬಸ್ ನಿಲ್ದಾಣದಲ್ಲಿ ನಿಂತಿದ್ದ ಬಸ್ ಮೇಲೆ ಗ್ರೆನೇಡ್ ಎಸೆದು ಉಗ್ರನೊಬ್ಬ ಪರಾರಿಯಾಗಿದ್ದ. ಆತನನ್ನು ಈಗ ಬಂಧಿಸಿರುವುದಾಗಿ ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಮಹಾನಿರ್ದೇಶಕರು ಹೇಳಿದ್ದಾರೆ. ಬಂಧಿತನನ್ನು ಯಾಸಿರ್ ಭಟ್ ಎಂದು ಗುರುತಿಸಲಾಗಿದೆ. ಹಿಜ್ಬುಲ್ ಮುಜಾಹಿದ್ದಿನ್ ಉಗ್ರ ಸಂಘಟನೆಯ ಜಿಲ್ಲಾ ಕಮಾಂಡರ್ ಫಾರೂರ್ ಅಹ್ಮದ್ ಭಟ್ ಅಲಿಯಾಸ್ ಓಮರ್ ನ ಆದೇಶದ ಮೇರೆಗೆ ಗ್ರೆನೇಡ್ ಎಸೆದಿರುವುದಾಗಿ ಹೇಳಿದ್ದಾನೆ.
ಜಮ್ಮು ಬಸ್ ನಿಲ್ದಾಣದಲ್ಲಿ ಗ್ರೆನೆಡ್ ಸ್ಫೋಟ: ಓರ್ವ ಸಾವು, ಹಲವರಿಗೆ ಗಾಯ
ಈ ಘಟನೆಯಲ್ಲಿ ಉತ್ತರಾಖಂಡ್ ನ ಹರಿದ್ವಾರದ 17 ವರ್ಷದ ಮೊಹಮ್ಮದ್ ಶಾರಿಕ್ ಎಂಬ ಯುವಕನೊಬ್ಬ ಬಲಿಯಾಗಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಆತನನ್ನು ಗಾಯಗೊಂಡಿರುವ ಇತರ 32 ಜನರೊಂದಿಗೆ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ಹೃದಯ ಭಾಗದಲ್ಲಿ ತೀವ್ರ ಗಾಯವಾಗಿದ್ದರಿಂದ ಆತ ಕೊನೆಯುಸಿರೆಳೆದ.
ಇದು ಕಳೆದ ವರ್ಷದ ಮೇ ತಿಂಗಳಿಂದೀಚೆಗೆ ಮೂರನೇ ಗ್ರೆನೇಡ್ ದಾಳಿಯಾಗಿದೆ. ಜಮ್ಮುವಿನಲ್ಲಿ ಕೋಮು ಸಾಮರಸ್ಯ ಕದಡಲೆಂದೇ ಇಂತಹ ದಾಳಿಗಳನ್ನು ಮಾಡಲಾಗುತ್ತಿದೆ. ಈ ಘಟನೆಗೆ ಸಂಬಂಧಿಸಿದಂತೆ ಒಟ್ಟು ಹನ್ನೊಂದು ಶಂಕಿತರನ್ನು ಬಂಧಿಸಲಾಗಿತ್ತು. ಅವರಲ್ಲೊಬ್ಬ ಗ್ರೆನೇಡ್ ದಾಳಿ ನಡೆಸಿದವನೇ ಸಿಕ್ಕಿಬಿದ್ದಿದ್ದಾನೆ. (ಪಿಟಿಐ ಚಿತ್ರಗಳು)
ನಾಲ್ವರ ಸ್ಥಿತಿ ಚಿಂತಾಜನಕ : ವೈದ್ಯರು
ಗಾಯಗೊಂಡವರಲ್ಲಿ ನಾಲ್ಕು ಜನರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಅವರಲ್ಲಿ ಇಬ್ಬರಿಗೆ ಶಸ್ತ್ರಚಿಕಿತ್ಸೆ ಮಾಡಬೇಕಾಯಿತು ಎಂದು ಜನರಲ್ ಮೆಡಿಕಲ್ ಆಸ್ಪತ್ರೆ ವೈದ್ಯರು ಹೇಳಿದ್ದಾರೆ. ಗಾಯಗೊಂಡವರಲ್ಲಿ 11 ಜನರು ಕಾಶ್ಮೀರದವರು, ಇಬ್ಬರು ಬಿಹಾರದವರು, ಛತ್ತೀಸ್ ಗಢ ಮತ್ತು ಹರ್ಯಾಣಾದಿಂದಲೂ ಕೆಲವರಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವ್ಯಕ್ತಿ ಗ್ರೆನೇಡ್ ಎಸೆದು ಪರಾರಿಯಾಗಿದ್ದ
ಪೊಲೀಸ್ ಮಹಾ ನಿರ್ದೇಶಕ ಮನೀಶ್ ಕುಮಾರ್ ಸಿನ್ಹಾ ಅವರ ಪ್ರಕಾರ, ಗುರುವಾರ ಮಧ್ಯಾಹ್ನದ ಸಮಯದಲ್ಲಿ ಜನನಿಬಿಡವಾಗಿದ್ದ ಜಮ್ಮು ಮತ್ತು ಕಾಶ್ಮೀರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ಸಿನ ಮೇಲೆ ಬಂಧಿತನಾಗಿರುವ ವ್ಯಕ್ತಿ ಗ್ರೆನೇಡ್ ಎಸೆದು ಪರಾರಿಯಾಗಿದ್ದ. ಭಾರೀ ಶಬ್ದದೊಂದಿಗೆ ಗ್ರೆನೇಡ್ ಸಿಡಿದ ನಂತರ ಪ್ರಯಾಣಿಕರು ಮಾತ್ರವಲ್ಲ ಬಸ್ ಕೂಡ ಛಿದ್ರವಾಗಿತ್ತು. ಸುತ್ತಲಿನ ಜನರೆಲ್ಲ ಕಕ್ಕಾಬಿಕ್ಕಿಯಾಗಿ ಓಡಲು ಆರಂಭಿಸಿದ್ದರು. ಮೊದಲಿಗೆ ಟೈರ್ ಸಿಡಿದಿರಬಹುದು ಎಂದು ಅಂದುಕೊಳ್ಳಲಾಗಿತ್ತು. ಆದರೆ ನಂತರ ಗೊತ್ತಾಗಿದ್ದು ಅದು ಗ್ರೆನೇಡ್ ದಾಳಿಯೆಂದು.
ಜಮ್ಮು ಬಸ್ ಸ್ಟ್ಯಾಂಡ್ ನಲ್ಲಿ ಗ್ರೆನೇಡ್ ಎಸೆದಿದ್ದ ವ್ಯಕ್ತಿಯ ಬಂಧನ
ಪುಲ್ವಾಮಾ ದಾಳಿಯ ನಂತರ ದುರ್ಘಟನೆ
ಪುಲ್ವಾಮಾ ದಾಳಿಯ ನಂತರ ಜಮ್ಮುವಿನಲ್ಲಿ ಭದ್ರತೆ ಬಿಗಿಯಾಗಿಯೇ ಇದೆ, ಸಾಕಷ್ಟು ಎಚ್ಚರಿಕೆಯ ಕ್ರಮಗಳನ್ನು ಕೂಡ ತೆಗೆದುಕೊಳ್ಳಲಾಗಿದೆ. ಎಲ್ಲೆಡೆ ನಿರಂತರವಾಗಿ ಉಗ್ರರ ಸುಳಿವಿನ ಬಗ್ಗೆ ತಪಾಸಣೆ ಮಾಡಲಾಗುತ್ತಿದೆ. ಆದರೂ, ಜನ ನಿಬಿಡ ಪ್ರದೇಶದಲ್ಲಿ ಇಂಥ ದಾಳಿ ನಡೆಸಿ ನುಸುಳಿಕೊಂಡು ಹೋಗುವವರು ಇದ್ದೇ ಇರುತ್ತಾರೆ. ಇಲ್ಲಿ ಕೂಡ ಅದೇ ಆಗಿದೆ. ಗ್ರೆನೇಡ್ ಎಸೆದವನೇ ಜನಜಂಗುಳಿಯಲ್ಲಿ ಉಗ್ರ ಪರಾರಿಯಾಗಿದ್ದ ಎಂದು ಎಂ ಕೆ ಸಿನ್ಹಾ ಅವರು ವಿವರಣೆ ನೀಡಿದ್ದಾರೆ.
ಕೋಮು ಸಾಮರಸ್ಯ ಕದಡುವ ಉದ್ದೇಶ
ಎಲ್ಲೆಡೆ ಎಚ್ಚರಿಕೆ ವಹಿಸಿ, ಹಲವು ದಾಳಿಯ ಸುಳಿವಿನ ಪತ್ತೆ ಹಚ್ಚಲಾಗುತ್ತಿತ್ತಾದರೂ, ಪೊಲೀಸರಿಗೆ ಇಂದಿನ ಘಟನೆಯ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಸಾಮಾನ್ಯವಾಗಿ ತಪಾಸಣೆ ನಡೆಯುತ್ತಿರುತ್ತದೆ. ಇಂದಿನ ಘಟನೆಯನ್ನು ಪರಿಶೀಲಿಸಿದರೆ, ಕೋಮು ಸಾಮರಸ್ಯ ಕದಡುವ ಮೂಲ ಉದ್ದೇಶದಿಂದಲೇ ಇಂಥ ಕೃತ್ಯಕ್ಕೆ ಕೈಹಾಕಲಾಗಿದೆ. ಆದರೂ ಸಾರ್ವಜನಿಕರು ಶಾಂತಿ ಕಾಪಾಡಬೇಕು ಎಂದು ಮತ್ತೊಬ್ಬ ಅಧಿಕಾರಿ ಮನವಿ ಮಾಡಿದ್ದಾರೆ.
ಲಕ್ನೋದಲ್ಲಿ ಕಾಶ್ಮೀರಿಗಳ ಮೇಲೆ ಹೀನಾಯ ಹಲ್ಲೆ, ವಿಡಿಯೋ ವೈರಲ್
ಸ್ಥಳಕ್ಕೆ ಶ್ವಾನ ದಳ ಮತ್ತು ಬೆರಳಚ್ಚು ತಜ್ಞ
ಸ್ಫೋಟ ನಡೆಯುತ್ತಿದ್ದಂತೆ ಪೊಲೀಸರು ಇಡೀ ಪ್ರದೇಶವನ್ನು ಸುತ್ತವರಿದಿದ್ದರು ಮತ್ತು ಹತ್ತಿರದ ನಿವಾಸಿಗಳಿಗೆ ಮನೆಯಿಂದ ಹೊರಬರದಂತೆ ತಾಕೀತು ಮಾಡಿದ್ದರು. ಬೆದರಿದ ಜನರನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸುವ ಕಾರ್ಯವನ್ನು ಪೊಲೀಸರು ಕೈಗೆತ್ತಿಕೊಂಡಿದ್ದರು. ಸ್ಥಳಕ್ಕೆ ಶ್ವಾನ ದಳ ಮತ್ತು ಬೆರಳಚ್ಚು ತಜ್ಞರನ್ನೂ ಕರೆಯಿಸಲಾಗಿತ್ತು. ಕೂಡಲೆ ಪೊಲೀಸರ ತಂಡವನ್ನು ರೆಡಿ ಮಾಡಿ ಶಂಕಿತ ಉಗ್ರರ ಬೇಟೆಗೆ ಕಳುಹಿಸಲಾಗಿತ್ತು. ಕೆಲವೇ ಘಂಟೆಗಳ ಅವಧಿಯಲ್ಲಿ ಗ್ರೆನೇಡ್ ಎಸೆದವನನ್ನು ಬಂಧಿಸಲಾಗಿದೆ.
ಜನರಲ್ ಮೆಡಿಕಲ್ ಆಸ್ಪತ್ರೆಯಲ್ಲಿ ದಾಖಲು
ರಸ್ತೆ ಬದಿಯಲ್ಲಿ ಪಂಜಾಬ್ ಗೆ ಹೊರಟು ನಿಂತಿದ್ದ ಬಸ್ಸಿಗೆ ಭಾರೀ ರಶ್ ಇತ್ತು. ಅವರಲ್ಲಿ ಒಬ್ಬರು ತಮ್ಮ ಹೆಂಡತಿಯನ್ನು ಬಸ್ಸಿಗೆ ಹತ್ತಿಸಲು ಬಂದಿದ್ದರು. ಆಗ ಇದ್ದಕ್ಕಿದ್ದಂತೆ ಭಾರೀ ಶಬ್ದದೊಂದಿದೆ ಗ್ರೆನೇಡ್ ಸ್ಫೋಟವಾಗಿದೆ. ಆ ಸ್ಫೋಟದಲ್ಲಿ ಗಂಡ ಮತ್ತು ಹೆಂಡತಿ ಇಬ್ಬರೂ ಗಾಯಗೊಂಡಿದ್ದಾರೆ. ಎಲ್ಲ ಗಾಯಾಳುಗಳನ್ನು ಸ್ಥಳೀಯರ ಸಹಾಯದಿಂದ ಜನರಲ್ ಮೆಡಿಕಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.
ಸತ್ತವನ ಕುಟುಂಬಕ್ಕೆ 5 ಲಕ್ಷ ರು. ಘೋಷಣೆ
ಜಮ್ಮು ಬಸ್ ನಿಲ್ದಾಣದಲ್ಲಿ ನಡೆದ ಈ ದುರ್ಘಟನೆಯ ಬಗ್ಗೆ ರಾಜ್ಯಪಾಲರಾದ ಸತ್ಯ ಪಾಲ್ ಮಲಿಕ್ ಅವರು ತೀವ್ರ ವಿಷಾದ ವ್ಯಕ್ತಪಡಿಸಿದ್ದು, ಸಾವಿಗೀಡಾದ 17 ವರ್ಷದ ವ್ಯಕ್ತಿಯ ಕುಟುಂಬಕ್ಕೆ 5 ಲಕ್ಷ ರುಪಾಯಿ ಪರಿಹಾರ ಘೋಷಿಸಿದ್ದಾರೆ. ಮತ್ತು ಗಾಯಗೊಂಡವರಿಗೆ ತಲಾ 20 ಸಾವಿರ ರುಪಾಯಿಯನ್ನು ನೀಡುವುದಾಗಿ ಹೇಳಿದ್ದಾರೆ.