ತ್ರಿವರ್ಣ ಧ್ವಜದ ಬಗ್ಗೆ ಹೇಳಿಕೆ: ಮೆಹಬೂಬ ಮುಫ್ತಿ ಪಕ್ಷ ತೊರೆದ ಮುಖಂಡರು
ಶ್ರೀನಗರ, ಅಕ್ಟೋಬರ್ 26: ತ್ರಿವರ್ಣ ಧ್ವಜದ ಕುರಿತು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ನೀಡಿರುವ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿರುವ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ (ಪಿಡಿಪಿ) ಮೂವರು ಮುಖಂಡರು ಪಕ್ಷ ತ್ಯಜಿಸಿದ್ದಾರೆ.
ಪಿಡಿಪಿ ನಾಯಕರಾದ ಟಿಎಸ್ ಬಾಜ್ವಾ, ವೇದ್ ಮಹಾಜನ್ ಮತ್ತು ಹುಸೇನ್ ಎ ವಾಫಾ ಪಕ್ಷದ ಮುಖ್ಯಸ್ಥೆ ಮೆಹಬೂಬ ಮುಫ್ತಿ ಅವರಿಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ. 'ಮೆಹಬೂಬ ಮುಫ್ತಿ ಅವರ ಕೆಲವು ನಡೆಗಳಿಂದ ಅಸಮಾಧಾನ ಹೊಂದಿದ್ದು, ಈ ಅನಪೇಕ್ಷಿತ ಹೇಳಿಕೆಗಳು ಮುಖ್ಯವಾಗಿ ನಮ್ಮ ದೇಶಭಕ್ತಿಯ ಭಾವನೆಗಳಿಗೆ ಘಾಸಿ ಉಂಟುಮಾಡಿದೆ' ಎಂದು ಪತ್ರದಲ್ಲಿ ಹೇಳಿದ್ದಾರೆ.
ಕಳೆದ ವಾರ ಮಾತನಾಡಿದ್ದ ಮೆಹಬೂಬ ಮುಫ್ತಿ, ಕಳೆದ ವರ್ಷ ಆಗಸ್ಟ್ 5ರಂದು ಜಾರಿಗೆ ತಂದ ಸಾಂವಿಧಾನಿಕ ಬದಲಾವಣೆಗಳನ್ನು ವಾಪಸ್ ನೀಡುವವರೆಗೂ ಚುನಾವಣೆಯಲ್ಲಿ ಸ್ಪರ್ಧಿಸಲು ಅಥವಾ ಭಾರತೀಯ ಬಾವುಟವನ್ನು ಹಿಡಿಯುವಲ್ಲಿ ಆಸಕ್ತಿ ತೋರಿಸುವುದಿಲ್ಲ ಎಂದಿದ್ದರು.

ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚೆಗೆ ರಚನೆಯಾಗಿರುವ ಗುಪ್ಕರ್ ಘೋಷಣೆಯ ಪೀಪಲ್ಸ್ ಅಲೈಯನ್ಸ್ ಮೈತ್ರಿಕೂಟವು ಮೆಹಬೂಬ ಮುಫ್ತಿ ಅವರ ಹೇಳಿಕೆಯಿಂದ ಅಂತರ ಕಾಪಾಡಿಕೊಂಡಿದೆ. ಮುಫ್ತಿ ಹೇಳಿಕೆಯನ್ನು ಖಂಡಿಸಿ ಜಮ್ಮು ಮತ್ತು ಕಾಶ್ಮೀರದಲ್ಲಿ ಸೋಮವಾರ ತಿರಂಗಾ ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಸಿದೆ.












Click it and Unblock the Notifications