ನಿಷೇಧಿತ ಜಮಾತ್-ಈ-ಇಸ್ಲಾಮಿ ಮುಖಂಡರ ಮನೆ, ಕಚೇರಿಗೆ ಬೀಗ
ಶ್ರೀನಗರ, ಮಾರ್ಚ್ 02 : ನಿಷೇಧಿಸಲಾಗಿರುವ ಜಮಾತ್-ಈ-ಇಸ್ಲಾಮಿ ಸಂಘಟನೆಯ ನಾಯಕರು ಮತ್ತು ಕಾರ್ಯಕರ್ತರ ಮನೆಗಳಿಗೆ ಕೇಂದ್ರ ಸರಕಾರ ಬೀಗ ಜಡಿದಿದೆ. ಕಾಶ್ಮೀರದ ಹಲವಾರು ಪ್ರದೇಶಗಳಲ್ಲಿರುವ ಮನೆಗಳನ್ನು ಸೀಲ್ ಮಾಡಲಾಗಿದೆ.
ಜಮಾತ್-ಈ-ಇಸ್ಲಾಮಿ ಸಂಘಟನೆಗೆ ಸೇರಿದ ಎಲ್ಲ ಸಂಸ್ಥೆಗಳ ಕಟ್ಟಡಗಳಿಗೆ ಬೀಗ ಜಡಿಯಬೇಕೆಂದು ಮ್ಯಾಜಿಸ್ಟ್ರೇಟ್ ಆದೇಶಿಸಿದ್ದಾರೆ. ಕಳೆದ ಗುರುವಾರ, ಜಮಾತ್-ಈ-ಇಸ್ಲಾಮಿ ಸಂಘಟನೆಯನ್ನು ಕಾನೂನು ವಿರೋಧಿ ಸಂಘ ಎಂದು ಕೇಂದ್ರ ಘೋಷಿಸಿದ್ದು, ಸಂಘಟನೆಯ 200ಕ್ಕೂ ಹೆಚ್ಚು ಕಾರ್ಯಕರ್ತರನ್ನು ಈಗಾಗಲೆ ಬಂಧಿಸಿದ್ದಾರೆ.
ಕೇಂದ್ರ ಸರ್ಕಾರದ ಮಹತ್ವದ ನಡೆ: ಜಮಾತ್ ಇ ಇಸ್ಲಾಮಿ ಸಂಘಟನೆಗೆ ನಿಷೇಧ
ಪುಲ್ವಾಮಾದಲ್ಲಿ ಭಯೋತ್ಪಾದಕ ದಾಳಿ ನಡೆದು, 40ಕ್ಕೂ ಹೆಚ್ಚು ಸಿಆರ್ಪಿಎಫ್ ಜವಾನರು ಹುತಾತ್ಮರಾದ ನಂತರ ಪಾಕಿಸ್ತಾನವನ್ನು ಮತ್ತು ಪ್ರತ್ಯೇಕತಾವಾದಿಗಳನ್ನು ಹೆಡೆಮುರಿ ಕಟ್ಟಲು ಇಂತಹ ಅನೇಕ ಕ್ರಮಗಳನ್ನು ನರೇಂದ್ರ ಮೋದಿ ನೇತೃತ್ವದ ಸರಕಾರ ಈಗಾಗಲೆ ತೆಗೆದುಕೊಂಡಿದೆ. ಈಗಾಗಲೆ ಹಲವಾರು ಪ್ರತ್ಯೇಕತಾವಾದಿಗಳನ್ನು ಬಂಧಿಸಲಾಗಿದೆ.
ಇದರ ಮುಂದುವರಿದ ಭಾಗವಾಗಿ, ಭಯೋತ್ಪಾದನಾ ಸಂಘಟನೆಗಳಿಗೆ ಬೆಂಬಲ ನೀಡುತ್ತಿದೆ ಎಂದು ಜಮಾತ್-ಈ-ಇಸ್ಲಾಮಿ ಸಂಘಟನೆಯ ಮೇಲೆ 5 ವರ್ಷಗಳ ಕಾಲ ನಿಷೇಧ ಹೇರಲಾಗಿದೆ ಮತ್ತು ಇದೀಗ ಆ ಸಂಸ್ಥೆಗೆ ಸೇರಿದೆ ಎಲ್ಲ ಕಚೇರಿಗಳಿಗೆ, ಮುಖಂಡರ ಮತ್ತು ಕಾರ್ಯಕರ್ತರ ಮನೆಗಳಿಗೆ ಬೀಗ ಜಡಿಯಲಾಗಿದೆ.
ಬಾಲಾಕೋಟ್ ಟೆರರಿಸ್ಟ್ ಕ್ಯಾಂಪ್ ಬಗ್ಗೆ ಬೆಚ್ಚಿ ಬೀಳಿಸುವ ಸಂಗತಿಗಳು
ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರು ಚಿಗಿತುಕೊಳ್ಳಲು ಜಮಾತ್-ಈ-ಇಸ್ಲಾಮಿ ಕೂಡ ಕಾರಣಕರ್ತ ಎಂದು ಕೇಂದ್ರ ದೂರಿದೆ. ಕಠಿಣ ಕಾನೂನುಬಾಹಿರ ಚಟುವಟಿಕೆ (ತಡೆ) ಕಾಯ್ದೆಯ ಅಡಿಯಲ್ಲಿ ಈ ಸಂಸ್ಥೆಯನ್ನು ನಿಷೇಧಿಸಲು ಕೇಂದ್ರ ಗೃಹ ಸಚಿವಾಲಯ ನೋಟಿಫಿಕೇಷನ್ ಹೊರಡಿಸಿತ್ತು. ಈ ಸಭೆಯ ಅಧ್ಯಕ್ಷತೆಯನ್ನು ನರೇಂದ್ರ ಮೋದಿಯವರೇ ವಹಿಸಿದ್ದರು.
ಈ ತೀರ್ಮಾನವನ್ನು ಪೀಪಲ್ಸ್ ಡೆಮಾಕ್ರೆಟಿಕ್ ಪಾರ್ಟಿಯ ನಾಯಕಿ ಮೆಹಬೂಬಾ ಮಫ್ತಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ನ ನಾಯಕ ಫಾರೂಕ್ ಅಬ್ದುಲ್ಲಾ ಅವರು ತೀವ್ರವಾಗಿ ಖಂಡಿಸಿದ್ದಾರೆ. ಜಮಾತ್-ಈ-ಇಸ್ಲಾಮಿ ಸಂಘಟನೆಯಿಂದ ನಿಮಗೇನು ತೊಂದರೆ? ಎಂದು ಮೆಹಬೂಬಾ ಮಫ್ತಿ ಅವರು ಪ್ರಶ್ನಿಸಿದ್ದು, ಕೇಂದ್ರದ ಕ್ರಮದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.