ಸೇನಾ ದಾಳಿಯ ನಂತರ ಇದೇನು ಹೇಳುತ್ತಿದ್ದಾರೆ ಓಮರ್ ಅಬ್ದುಲ್ಲಾ?
ಶ್ರೀನಗರ, ಫೆಬ್ರವರಿ 26 : ಭಾರತ ಸರಕಾರವನ್ನು ಕೆಣಕುವುದರಲ್ಲಿ, ಉಡಾಫೆ ಮಾಡುವುದರಲ್ಲಿ, ಪಾಕಿಸ್ತಾನವನ್ನು ಭಾರತದ ವಿರುದ್ಧ ಪ್ರೇರೇಪಿಸುವುದರಲ್ಲಿ, ಸಿಗಬೇಕಾದ ಶ್ರೇಯಸ್ಸನ್ನು ಅಲ್ಲಗಳೆಯುವುದರಲ್ಲಿ, ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮಫ್ತಿಗಿಂತ, ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಅವರು ಹಿಂದಿಲ್ಲ ಎಂಬುದನ್ನು ಮತ್ತೆ ಸಾಬೀತುಪಡಿಸಿದ್ದಾರೆ.
ಪುಲ್ವಾಮಾದಲ್ಲಿ ಕೇಂದ್ರ ಪೊಲೀಸ್ ಮೀಸಲು ಪಡೆಯ ಮೇಲೆ ಆತ್ಮಾಹುತಿ ದಾಳಿ ನಡೆದ ನಂತರ, ಇಬ್ಬರೂ ಪಾಕಿಸ್ತಾನದ ಜೊತೆ ಶಾಂತಿ ಮಾತುಕತೆಯ ಬಗ್ಗೆ ಮಾತಾಡುತ್ತಿದ್ದಾರೆಯೇ ಹೊರತು, ಭಾರತ ತೆಗೆದುಕೊಂಡ ಮತ್ತು ತೆಗೆದುಕೊಳ್ಳುತ್ತಿರುವ ಕ್ರಮಕ್ಕೆ ಬೆಂಬಲವಾಗಿ ನಿಂತಿಲ್ಲ. ಫೆಬ್ರವರಿ 26ರಂದು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತದ ವಾಯು ಸೇನೆ ನಡೆಸಿದ ದಾಳಿಯ ಬಗ್ಗೆಯೂ ಇಬ್ಬರೂ ದೇಶವಿದ್ರೋಹಿ ರೀತಿಯ ಹೇಳಿಕೆಯನ್ನೇ ನೀಡುತ್ತಿದ್ದಾರೆ.
ವಾಯು ಸೇನೆ ಬಾಲಕೋಟ್, ಮುಜಾಫರಾಬಾದ್ ಮತ್ತು ಚಾಕೋಟಿಯಲ್ಲಿ ನಡೆಸಿದ ಪ್ರತಿರೋಧಕ ದಾಳಿಯ ನಂತರ, ವಿರೋಧ ಪಕ್ಷಗಳ ನಾಯಕರಿಂದ ವಾಯು ಸೇನೆಯ ಪ್ರಶಂಸೆ ಆಗುತ್ತಿದ್ದರೆ, ಮೆಹಬೂಬಾ ಮಫ್ತಿ ಮತ್ತು ಓಮರ್ ಅಬ್ದುಲ್ಲಾ ಅವರು, ಭಾರತದ ಮೇಲೆಯೇ ಸಂಶಯ ವ್ಯಕ್ತಪಡಿಸಿ, ತಮ್ಮ ನಿಜವಾದ ಬಣ್ಣ ಏನೆಂಬುದನ್ನು ಬಯಲು ಮಾಡಿಕೊಂಡಿದ್ದಾರೆ. ಸೋಮವಾರ ತಾನೆ ನರೇಂದ್ರ ಮೋದಿಯವರಿಗೆ ಸವಾಲು ಒಡ್ಡಿದ್ದರು. ಈಗ ಮತ್ತೆ ತಮ್ಮ ಬಾಲವನ್ನು ಬಿಚ್ಚಿದ್ದಾರೆ.
ಇನ್ನು, ನರೇಂದ್ರ ಮೋದಿ ಸರಕಾರವನ್ನು ಸಮಯ ಸಿಕ್ಕಾಗಲೆಲ್ಲ ಹಣಿಯುತ್ತ ಮತ್ತು ಹಳಿಯುತ್ತಲೇ ಇರುವ ಓಮರ್ ಅಬ್ದುಲ್ಲಾ ಅವರು, ಸರಣಿ ಟ್ವೀಟ್ ಮಾಡಿದ್ದು, ಒಂದೇ ಒಂದು ಟ್ವೀಟ್ ನಲ್ಲಿಯೂ ಅವರು ಭಾರತದ ಕ್ರಮವನ್ನು ಪ್ರಶಂಸಿಸಿಲ್ಲ ಮತ್ತು ಪಾಕಿಸ್ತಾನವನ್ನು ಕೆಣಕುವಂಥ ಮಾತುಗಳನ್ನಾಡಿದ್ದಾರೆ.

ಪಾಕಿಸ್ತಾನದ ಬಗ್ಗೆ ಚಿಂತಿಸುತ್ತಿದ್ದಾರೋ
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತದ ವಾಯುಸೇನೆ ದಾಳಿ ಆರಂಭಿಸಿದ ಸುದ್ದಿ ಹೊರಬೀಳುತ್ತಿದ್ದಂತೆ, ಈ ದಾಳಿಯಿಂದಾಗಿ ಪಾಕಿಸ್ತಾನಕ್ಕೆ ಅದರ ಪ್ರಧಾನಿ ನೀಡಿದ ವಾಗ್ದಾನ ಎಲ್ಲಕ್ಕಿಂತ ಮುಖ್ಯವಾಗುತ್ತದೆ. ಪಾಕಿಸ್ತಾನ ಕೇವಲ ಮರುದಾಳಿಯ ಬಗ್ಗೆ ವಿಚಾರ ಮಾಡುವುದಿಲ್ಲ, ಪ್ರತಿದಾಳಿ ಮಾಡಿಯೇ ತೀರುತ್ತದೆ. ಪ್ರತಿದಾಳಿ ಯಾವ ರೀತಿಯದಾಗಿರುತ್ತದೆ? ಎಲ್ಲೆಲ್ಲಿ ದಾಳಿ ಮಾಡುತ್ತದೆ? ಪಾಕಿಸ್ತಾನದ ದಾಳಿಗೆ ಭಾರತ ಮರುದಾಳಿ ಮಾಡಬೇಕೆ? ಇತ್ಯಾದಿ ಟ್ವೀಟ್ ಮಾಡಿದ್ದಾರೆ. ಇವರು ಭಾರತದ ಬಗ್ಗೆ ಚಿಂತಿಸುತ್ತಿದ್ದಾರೋ, ಪಾಕಿಸ್ತಾನದ ಬಗ್ಗೆ ಚಿಂತಿಸುತ್ತಿದ್ದಾರೋ ಎಂಬ ಸಂಶಯ ಬರದೆ ಇರದು.

ಪಾಕಿಸ್ತಾನವನ್ನು ಕೆರಳಿಸುವಂಥ ಮಾತು
ವಾವ್, ಒಂದು ವೇಳೆ ದಾಳಿ ನಡೆದಿರುವುದು ಖಚಿತವೇ ಆಗಿದ್ದಲ್ಲಿ, ಯಾವುದೇ ದೃಷ್ಟಿಯಿಂದ ನೋಡಿದರೂ ಇದು ಸಣ್ಣ ದಾಳಿಯೇನಲ್ಲ. ಆದರೆ, ಅಧಿಕೃತ ಪ್ರಕಟಣೆಗಾಗಿ ಕಾಯುತ್ತೇನೆ ಎಂದಿರುವ ಅವರು, ದಾಳಿಗೊಳಗಾಗಿರುವ ಬಾಲಕೋಟ್ ಸ್ವತಂತ್ರ ಕಾಶ್ಮೀರದಲ್ಲಿಲ್ಲ. ಅಲ್ಲಿ ದಾಳಿ ಮಾಡಿದ್ದಾರೆಂದರೆ ಅವರು ಗಡಿ ನಿಯಂತ್ರಣಾ ರೇಖೆ ದಾಟಿ ಬಂದಿದ್ದಾರೆಂದೇ ಅರ್ಧ. ಹಾಗಿದ್ದ ಮೇಲೆ ಭಾರತ ಗಡಿ ನಿಯಂತ್ರಣಾ ರೇಖೆಯ ಬಳಿ ದಾಳಿ ಮಾಡಿಲ್ಲ, ಪಾಕಿಸ್ತಾನದ ಮೇಲೆಯೇ ದಾಳಿ ಮಾಡಿದ್ದಾರೆಂಬ ಕೆಣಕುವಂಥ ಟ್ವೀಟನ್ನು ಓಮರ್ ರಿಟ್ವೀಟ್ ಮಾಡಿದ್ದಾರೆ. ಇಷ್ಟು ಸಾಲದೆಂಬಂತೆ, ಈ ಕ್ಯಾಂಪ್ ಗಳಲ್ಲಿ ಭಾರತದಿಂದ ಬಾಂಬ್ ದಾಳಿಗೆ ಗುರಿಯಾಗಲು ಜೈಷ್ ಫೋಕ್ಸ್ (ಉಗ್ರರು ಎಂದು ಹೇಳಿಲ್ಲ) ಮೂರ್ಖರಲ್ಲ ಎಂಬ ಮತ್ತೊಂದು ಟ್ವೀಟನ್ನು ಓಮರ್ ರಿಟ್ವೀಟ್ ಮಾಡಿದ್ದಾರೆ. ನೀವೇ ಲೆಕ್ಕ ಹಾಕಿ, ಓಮರ್ ಯಾರನ್ನು ಬೆಂಬಲಿಸುತ್ತಿದ್ದಾರೆಂದು.

ಈ ಸಮಯದಲ್ಲಿ ಮಿಲಿಟಂಟ್ ಕ್ಯಾಂಪ್ ಖಾಲಿ
ಪಾಕಿಸ್ತಾನದ ಖೈಬರ್ ಪಖಟುಂಖ್ವಾ ಪ್ರಾಂತ್ಯದಲ್ಲಿರುವ ಬಾಲಕೋಟ್ ಮೇಲೆ ದಾಳಿಯಾಗಿದ್ದರೆ ಖಂಡಿತವಾಗಿ (ಪಾಕ್ ಮೇಲೆ) ಆಕ್ರಮಣವಾಗುತ್ತದೆ ಮತ್ತು ಐಎಎಫ್ ನಿಂದ ಪ್ರಮುಖ ದಾಳಿಯಾಗುತ್ತದೆ. ಆದರೆ, ಗಡಿನಿಯಂತ್ರಣಾ ರೇಖೆಯ ಬಳಿಯ ಪೂಂಛ್ ಪ್ರದೇಶದಲ್ಲಿರುವ ಬಾಲಕೋಟ್ ಭಾಗದಲ್ಲಿ ಆಗಿರುವ ದಾಳಿಯಾಗಿದ್ದರೆ, ಇದು ಕೇವಲ ಸಾಂಕೇತಿಕ ದಾಳಿ ಮಾತ್ರವಾಗಿರುತ್ತದೆ. ಏಕೆಂದರೆ, ವರ್ಷದ ಈ ಸಮಯದಲ್ಲಿ ಫಾರ್ವರ್ಡ್ ಲಾಂಚ್ ಪ್ಯಾಡ್ ಮತ್ತು ಮಿಲಿಟಂಟ್ ಕ್ಯಾಂಪ್ ಗಳು ಖಾಲಿಯಾಗಿರುತ್ತವೆ ಮತ್ತು ಕೆಲಸ ನಿರ್ವಹಿಸುತ್ತಿರುವುದಿಲ್ಲ ಎಂದು ಭಾರತದ ದಾಳಿಯನ್ನು ವ್ಯಂಗ್ಯವಾಡಿದ್ದಾರೆ ಓಮರ್.

ಪಾಕಿಸ್ತಾನಕ್ಕೆ ಮುಜುಗರ ಮಾಡತ್ತಂತೆ
ಪಾಕಿಸ್ತಾನದ ಭಾಗದಲ್ಲಿರುವ ಬಾಲಕೋಟ್ ಮೇಲೆ ವಾಯು ಸೇನೆ ದಾಳಿ ಮಾಡಿರುವುದು ಖಚಿತವಾದ ನಂತರ, ಇದು ಪಾಕಿಸ್ತಾನದ ಒಳಭಾಗದಲ್ಲಿದ್ದು, ಆ ದೇಶಕ್ಕೆ ಖಂಡಿತ ಮುಜುಗರ ಉಂಟು ಮಾಡಿರುತ್ತದೆ ಎಂದು ಪಾಕಿಸ್ತಾನವನ್ನು ಕೆರಳಿಸಿದ್ದಾರೆ ಓಮರ್ ಅಬ್ದುಲ್ಲಾ. ಎರಡೂ ಬದಿಯವರು (ಪಾಕಿಸ್ತಾನ ಮತ್ತು ಭಾರತ) ದಾಳಿ ಮಾಡಿರುವ ಬಗ್ಗೆ ಮತ್ತು ಹಾನಿಯಾಗಿರುವ ಬಗ್ಗೆ ಏನೇ ಹೇಳಿಕೆ ನೀಡಲಿ, ಭಾರತದ ವಾಯು ಸೇನೆ ಬಾಂಬ್ ಗಳನ್ನು ಇಲ್ಲಿ ಹಾಕಿ, ಯಾವುದೇ ಹಾನಿಯಾಗದಂತೆ ವಾಪಸ್ ಮರಳಿದೆ ಎಂದು ಟ್ವೀಟ್ ಮಾಡಿದ್ದಾರೆ. ಅಂದರೆ, ಭಾರತದ ಮೇಲೆ ಪ್ರತಿದಾಳಿ ಮಾಡಲು ಅಲ್ಲಿ ಯಾರೂ ಉಗ್ರರು ಇರಲಿಲ್ಲ ಎಂಬ ಅರ್ಥ ಬರುವಂತೆ ಅವರು ಹೇಳಿದ್ದಾರೆ.

ದಾಳಿಯಾಗಬಹುದು ಎಂಬ ಊಹೆಯಿಂದ ದಾಳಿ
ಬಾಲಕೋಟ್ ಮೇಲ್ ದಾಳಿ ನಡೆದ ನಂತರ ಹೊಸ ಮಾದರಿಯ ದಾಳಿಯನ್ನು ನಾವಿಂದು ನೋಡುತ್ತಿದ್ದೇವೆ. ಉರಿಯಲ್ಲಿ ನಡೆದ ದಾಳಿಯ ನಂತರ, ಪ್ರತೀಕಾರ ತೀರಿಸಿಕೊಳ್ಳಲು ಭಾರತದ ಸೇನೆ ದಾಳಿ ಮಾಡಿತ್ತು. ಆದರೆ, ಬಾಲಕೋಟ್ ನಲ್ಲಿ ಜೈಷ್-ಎ-ಮೊಹಮ್ಮದ್ ದಾಳಿ ನಡೆಸಬಹುದು ಎಂಬ ಊಹೆಯಿಂದ ಮುಂಜಾಗ್ರತಾ ಕ್ರಮವಾಗಿ ಭಾರತದಿಂದ ದಾಳಿ ಮಾಡಲಾಗಿದೆ. ಇದು ಹೊಸ ಆಟ ಎಂದು ಮತ್ತೆ ವ್ಯಂಗ್ಯವಾಗಿ ಹೇಳಿದ್ದಾರೆ. ಇವರಿಗೇಕೆ ಪುಲ್ವಾಮಾ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಭಾರತದ ಸೇನೆ ಜೈಷ್ ಮೇಲೆ ದಾಳಿ ಮಾಡಿದೆ ಎಂದು ಅನ್ನಿಸಲಿಲ್ಲ? ಎದೆಯಲ್ಲಿ ಭಾರತದ ಬಗ್ಗೆ ಪ್ರೀತಿ, ಪ್ರೇಮವಿದ್ದಿದ್ದರೆ ಇಂಥ ಮಾತುಗಳು ಓಮರ್ ರಿಂದ ಬರುತ್ತಿರಲಿಲ್ಲ, ಅಲ್ಲವೆ?

ಪಾಕಿಸ್ತಾನ ಶಾಂತಿಯನ್ನು ಕದಡುತ್ತಿಲ್ಲವೆ?
ಭಾರತದ ವಿರುದ್ಧದ ವಾಗ್ದಾಳಿ ಇಲ್ಲಿಗೇ ಮುಂದುವರಿಯುವುದಿಲ್ಲ. ಬಾಲಕೋಟ್ ಮೇಲಿನ ದಾಳಿ ಹಲವಾರು ಪ್ರಥಮಗಳಿಗೆ ಸಾಕ್ಷಿಯಾಗಿದೆ. ಅವುಗಳಲ್ಲಿ ಎರಡು ಪ್ರಮುಖ ಸಂಗತಿಗಳೆಂದರೆ, ಶಾಂತಿ ಸಮಯದಲ್ಲಿ(?) ಪಾಕಿಸ್ತಾನದೊಳಗೆ ವಾಯು ಸೇನೆ ಬಳಸಿ ದಾಳಿ ಮಾಡಲಾಗಿದೆ (ಮೊದಲ ಬಾರಿ 1971ರಲ್ಲಿ ಭಾರತ ಮತ್ತು ಪಾಕ್ ಯುದ್ಧ ನಡೆಯುತ್ತಿದ್ದಾಗ ನಡೆದಿತ್ತು) ಮತ್ತು ಭಯೋತ್ಪಾದಕ ದಾಳಿ ಆಗಬಹುದೆಂದು ಊಹಿಸಿಕೊಂಡು ಇಡೀ ವಿಶ್ವಕ್ಕೆ ದೃಗ್ಗೋಚರವಾಗುವಂತೆ ಸೇನಾ ಶಕ್ತಿಯನ್ನು ಬಳಸಿಕೊಳ್ಳಲಾಗಿದೆ ಎಂದು ಓಮರ್ ಅಬ್ದುಲ್ಲಾ ಟ್ವೀಟಿಸಿದ್ದಾರೆ. ಪಾಕಿಸ್ತಾನ ಶಾಂತಿಯನ್ನು ಕದಡುತ್ತಿಲ್ಲವೆಂದೇ ಇವರ ಅರ್ಥ?












Click it and Unblock the Notifications