'ನಾನು ಕಾಶ್ಮೀರಿ ಪಂಡಿತ, ಮನೆಯಲ್ಲಿದಂತಹ ಭಾವ': ವೈಷ್ಣೋ ದೇವಿ ದೇಗುಲ ಭೇಟಿ ಬಳಿಕ ರಾಹುಲ್
ಶ್ರೀನಗರ, ಸೆಪ್ಟೆಂಬರ್ 10: ಜಮ್ಮು ಕಾಶ್ಮೀರಕ್ಕೆ ಎರಡು ದಿನಗಳ ಕಾಲದ ಭೇಟಿಯಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, "ನಾನು ಕಾಶ್ಮೀರಿ ಪಂಡಿತ," ಎಂದು ಹೇಳಿಕೊಂಡಿದ್ದಾರೆ. ಹಾಗೆಯೇ "ಮಾತಾ ವೈಷ್ಣೋ ದೇವಿ ದೇವಾಲಯಕ್ಕೆ ಭೇಟಿ ನೀಡಿದ ಬಳಿಕ ಮನೆಯಲ್ಲೇ ಇದ್ದಂತಹ ಭಾವ ಉಂಟಾಗಿದೆ," ಎಂದು ಕೂಡಾ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ.
"ನನ್ನ ಕುಟುಂಬಕ್ಕೆ ಜಮ್ಮು ಹಾಗೂ ಕಾಶ್ಮೀರದೊಂದಿಗೆ ದೀಘ್ರವಾದ ಸಂಬಂಧವನ್ನು ಹೊಂದಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ಬಂದಿರುವ ನನಗೆ ನನ್ನ ಮನೆಗೆ ಬಂದಂತಹ ಭಾವ ಉಂಟಾಗಿದೆ," ಎಂದು ಜಮ್ಮುವಿನಲ್ಲಿ ಶುಕ್ರವಾರ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡುತ್ತಾ ತಿಳಿಸಿದ್ದಾರೆ.
ಜಮ್ಮುವಿನ ವೈಷ್ಣೋ ದೇವಿ ದೇಗುಲ ಸಂಕೀರ್ಣದಲ್ಲಿ ಭಾರಿ ಅಗ್ನಿ ಅವಘಡ: ನಗದು ಕೌಂಟರ್ಗೆ ಹಾನಿ
"ನಾನು ಕಾಶ್ಮೀರಿ ಪಂಡಿತ ಹಾಗೂ ನನ್ನ ಕುಟುಂಬವೂ ಕೂಡಾ ಕಾಶ್ಮೀರಿ ಪಂಡಿತರು. ಇಂದು ಬೆಳಿಗ್ಗೆ ನನ್ನನ್ನು ಕಾಶ್ಮೀರಿ ಪಂಡಿತರ ನಿಯೋಗವು ಭೇಟಿಯಾಗಿದೆ. ಕಾಂಗ್ರೆಸ್ ಕಾಶ್ಮೀರಿ ಪಂಡಿತರಿಗಾಗಿ ಹಲವಾರು ಕಲ್ಯಾಣ ಯೋಜನೆಗಳನ್ನು ಜಾರಿ ಮಾಡಿದೆ, ಆದರೆ ಬಿಜೆಪಿ ಏನನ್ನೂ ಮಾಡಿಲ್ಲ ಎಂದು ಈ ಸಂದರ್ಭದಲ್ಲಿ ತಿಳಿಸಿದ್ದಾರೆ," ಎಂದು ವಯನಾಡು ಸಂಸದ ರಾಹುಲ್ ಗಾಂಧಿ ವಿವರಿಸಿದರು.
"ನಾನು ನನ್ನಿಂದ ಸಾಧ್ಯವಾದ ಏನಾನ್ನದರೂ ಕಾಶ್ಮೀರಿ ಪಂಡಿತರಿಗೆ ಮಾಡುತ್ತೇನೆ ಎಂದು ನಾನು ನನ್ನ ಕಾಶ್ಮೀರಿ ಪಂಡಿತ ಸಹೋದರರಿಗೆ ತಿಳಿಸುತ್ತೇನೆ," ಎಂದ ರಾಹುಲ್ ಗಾಂಧಿ, ಇದೇ ಸಂದರ್ಭದಲ್ಲಿ "ಜಮ್ಮು ಮತ್ತು ಕಾಶ್ಮೀರದ ಭೇಟಿಯ ಬಳಿಕ ಲಡಾಖ್ಗೂ ನಾನು ಭೇಟಿ ನೀಡುತ್ತೇನೆ," ಎಂದಿದ್ದಾರೆ.
"ಜಮ್ಮು ಮತ್ತು ಕಾಶ್ಮೀರಕ್ಕೆ ನನ್ನ ಹೃದಯದಲ್ಲಿ ವಿಶೇಷವಾದ ಸ್ಥಾನವಿದೆ. ಆದರೆ ನನಗೆ ನೋವು ಕೂಡಾ ಉಂಟಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಸಹೋದರ ಮನೋಭಾವನೆ ಇದೆ. ಆದರೆ ಬಿಜೆಪಿ ಹಾಗೂ ಆರ್ಎಸ್ಎಸ್ ಈ ಸೌಹಾರ್ದತೆಯನ್ನು ಒಡೆಯುವ ಎಲ್ಲಾ ಯತ್ನವನ್ನು ಮಾಡುತ್ತಿದ್ದಾರೆ," ಎಂದು ರಾಹುಲ್ ಆರೋಪ ಮಾಡಿದ್ದಾರೆ.
ವೈಷ್ಣೋದೇವಿ ದರ್ಶನಕ್ಕೆ ತೆರಳುವ ಯಾತ್ರಾರ್ಥಿಗಳಿಗೆ ವಿಶೇಷ ಸೂಚನೆ!
ಇನ್ನು ತನ್ನ ಕೈಗಳನ್ನು ಜನರತ್ತ ಬೀಸಿದ ರಾಹುಲ್ ಗಾಂಧಿ, "ಈ 'ಕೈ' (ಕಾಂಗ್ರೆಸ್ ಪಕ್ಷದ ಚಿಹ್ನೆ) ಎಂದರೆ ಹೆದರಬೇಡಿ ಎಂದು ಅರ್ಥ. ವಾಹೆ ಗುರು ಹಾಗೂ ಶಿವನ ಕೈಯಲ್ಲಿ ನೀವು ಈ ಕೈ ಯನ್ನು ನೋಡುತ್ತೀರಿ," ಎಂದು ಹೇಳುವ ಮೂಲಕ ಕಾಂಗ್ರೆಸ್ ಎಂದರೆ ಸುರಕ್ಷತೆ ಎಂದು ಪರೋಕ್ಷವಾಗಿ ನುಡಿದಿದ್ದಾರೆ.
ಇನ್ನು ಈ ಸಂದರ್ಭದಲ್ಲೇ ಬಿಜೆಪಿಯ ವಿರುದ್ದ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಮಾಜಿ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ, "ಬಿಜೆಪಿ ಪಕ್ಷವು ಜಮ್ಮು ಕಾಶ್ಮೀರವನ್ನು ಇಷ್ಟು ದುರ್ಬಲಗೊಳಿಸಿದೆ. ನಿಮ್ಮ ರಾಜ್ಯತ್ವವನ್ನು ನಿಮ್ಮಿಂದ ಕಸಿದುಕೊಳ್ಳಲಾಗಿದೆ. ಜಮ್ಮು ಹಾಗೂ ಕಾಶ್ಮೀರಕ್ಕೆ ಪುನಃ ಇದರ ರಾಜ್ಯತ್ವ ಬೇಕು," ಎಂದು ಇದೇ ಸಂದರ್ಭದಲ್ಲಿ ರಾಹುಲ್ ಗಾಂಧಿ ಹೇಳಿದರು.
ಇನ್ನು ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿಗೆ ಜಮ್ಮುವಿನ ವಿಮಾನ ನಿಲ್ದಾಣದಲ್ಲಿ ಭರ್ಜರಿ ಸ್ವಾಗತವನ್ನು ಮಾಡಲಾಗಿದೆ. ಹಿರಿಯ ನಾಯಕರು ಸೇರಿದಂತೆ ಹಲವಾರು ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿಯನ್ನು ವಿಮಾನ ನಿಲ್ದಾಣದಲ್ಲಿ ಡೋಲಾಕ್ನ ಸದ್ದಿನೊಂದಿಗೆ ಸ್ವಾಗತಿಸಿದರು. ರಾಹುಲ್ ಗಾಂಧಿ ಗುರುವಾರ ಮಾತಾ ವೈಷ್ಣೋದೇವಿ ದೇವಾಲಯಕ್ಕೆ ತೆರಳಿ ದೇವರ ದರ್ಶನ ಮಾಡಿದರು. ಕತ್ರಾ ಬೇಸ್ ಕ್ಯಾಂಪ್ನಿಂದ ತ್ರಿಕುಟಾ ಬೆಟ್ಟದ ಮೂಲಕ ಸುಮಾರು 13 ಕಿಲೋ ಮೀಟರ್ ಕಾಲ್ನಡಿಗೆಯ ಮೂಲಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾತಾ ವೈಷ್ಣೋದೇವಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ ಎಂದು ಕಾಂಗ್ರೆಸ್ ನಾಯಕರು ತಿಳಿಸಿದರು.
ಇನ್ನು ಭವನದಲ್ಲಿ ಮುಖ್ಯ ಅರ್ಚಕ ಹಾಗೂ ಪೂಜೆ ಅರ್ಚಕರನ್ನು ರಾಹುಲ್ ಗಾಂಧಿ ಬೇಟಿಯಾಗಿದ್ದು ಅವರ ಆಶೀರ್ವಾದ ಪಡೆದಿದ್ದಾರೆ. ಬೆಟ್ಟಕ್ಕೆ ರಾಹುಲ್ ಗಾಂಧಿ ತೆರಳಿದ ಸಂದರ್ಭದಲ್ಲಿ ಕಾಂಗ್ರೆಸ್ ಮಾಜಿ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿಯ ಜೊತೆಗೆ ಹಲವಾರು ನಾಯಕರು ಇದ್ದರು ಎಂದು ವರದಿಯಾಗಿದೆ.
(ಒನ್ ಇಂಡಿಯಾ ಸುದ್ದಿ)