ಉಗ್ರರ ದಾಳಿಗೆ ಬೆದರಿ ಕಾಶ್ಮೀರದಿಂದ ಓಡಿ ಹೋಗುವುದಿಲ್ಲ: ಇದು ಉದ್ಯಮಿ ಮಾತು!
ಶ್ರೀನಗರ, ನವೆಂಬರ್ 10: ನನ್ನ ಕಣ್ಣೆದುರಿಗೇ ನಮ್ಮ ಸೇಲ್ಸ್ ಮ್ಯಾನ್ ಉಗ್ರರ ಗುಂಡಿನ ದಾಳಿಯಲ್ಲಿ ಪ್ರಾಣ ಬಿಟ್ಟಿರಬಹುದು, ಆದರೆ ನಾನು ಯಾವುದೇ ಕಾರಣಕ್ಕೂ ಕಾಶ್ಮೀರವನ್ನು ತೊರೆದು ಹೋಗುವುದಿಲ್ಲ ಎಂದು ಪಂಡಿತ್ ಉದ್ಯಮಿ ಸಂದೀಪ್ ಮಾವಾ ಹೇಳಿದ್ದಾರೆ. ನಮ್ಮ ಕುಟುಂಬದ ವಿರೋಧದ ನಡುವೆ ನಾವು ಇಲ್ಲಿಯೇ ಉಳಿದುಕೊಳ್ಳುವುದಕ್ಕೆ ಬಯಸುತ್ತೇನೆ. ಯಾವುದೇ ಕಾರಣಕ್ಕೂ ಕಾಶ್ಮೀರವನ್ನು ಬಿಟ್ಟು ಹೋಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕಳೆದ ನವೆಂಬರ್ 8ರ ಸೋಮವಾರ ಶ್ರೀನಗರದ ಬೋಹ್ರಿ ಕಡಲ್ ಎಂಬ ಪ್ರದೇಶದಲ್ಲಿ ರಾತ್ರಿ 8.10 ಗಂಟೆ ಸುಮಾರಿಗೆ ಉಗ್ರರು ಗುಂಡಿನ ದಾಳಿ ನಡೆಸಿದರು. ಈ ವೇಳೆ ಅಂಗಡಿಯ ಸೇಲ್ಸ್ ಮ್ಯಾನ್ ಮೊಹಮ್ಮದ್ ಇಬ್ರಾಹಿಂ ಖಾನ್ ಗಂಭೀರವಾಗಿ ಗಾಯಗೊಂಡಿದ್ದರು, ಅವರನ್ನು ಆಸ್ಪತ್ರೆಗೆ ದಾಖಲಿಸಿದ ಕೆಲವೇ ಕ್ಷಣಗಳಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರು.
ಶ್ರೀನಗರದಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಒಬ್ಬ ವ್ಯಾಪಾರಿ ಸಾವು
"ಗುಪ್ತಚರ ಮಾಹಿತಿಯು ಮೊದಲೇ ಗೊತ್ತಾದ ಹಿನ್ನೆಲೆ ತಮ್ಮ ಅಂಗಡಿಯಿಂದ ಬೇಗನೆ ಹೊರಟಿದ್ದನು. ಹೀಗಾಗಿ ಉಗ್ರರ ದಾಳಿಯಿಂದ ಪಾರಾಗಿದ್ದೇನೆ ಎಂದು ಮಾವಾ ಹೇಳಿಕೊಂಡಿದ್ದಾರೆ. ಆದರೆ ಅವರ ಅಂಗಡಿಯ ಸೇಲ್ಸ್ ಮ್ಯಾನ್ ಮೊಹಮ್ಮದ್ ಇಬ್ರಾಹಿಂ ಖಾನ್, ನಗರದ ಬೋಹ್ರಿ ಕಡಲ್ ಪ್ರದೇಶದಲ್ಲಿನ ಅಂಗಡಿಯ ಬಳಿ ಉಗ್ರರ ಗುಂಡಿನ ದಾಳಿಗೆ ಬಲಿಯಾದನು," ಎಂದು ಮಾವಾ ಹೇಳಿದ್ದಾರೆ.
ಕಾಶ್ಮೀರವನ್ನು ತೊರೆದು ಹೋಗುವುದಿಲ್ಲ:
ಕಾಶ್ಮೀರದಲ್ಲಿಯೇ ಉಳಿದುಕೊಳ್ಳುವುದಕ್ಕೆ ನಾನು ಯಾವುದೇ ರೀತಿ ಹಿಂಜರಿಯುವುದಿಲ್ಲ, ಕಾಶ್ಮೀರವನ್ನು ತೊರೆದು ಹೋಗುವುದಿಲ್ಲ ಎಂದು ಪಂಡಿತ್ ಸಂದೀಪ್ ಮಾವಾ ಹೇಳಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ಉಗ್ರರು ನಡೆಸುತ್ತಿರುವ ಸರಣಿ ದಾಳಿಗಳ ಭೀತಿ ನಡುವೆ ಸೋಮವಾರವೂ ಅಂಥದ್ದೇ ಒಂದು ಘಟನೆ ನಡೆದಿತ್ತು. ಈ ಹಿನ್ನೆಲೆ ಕಾಶ್ಮೀರವನ್ನು ತೊರೆಯುತ್ತೀರಾ ಎಂಬ ಪ್ರಶ್ನೆಗೆ ಪಂಡಿತ್ ಸಂದೀಪ್ ಮಾವಾ ಉತ್ತರಿಸಿದರು. "ನಾನು ಕಾಶ್ಮೀರವನ್ನು ಬಿಟ್ಟು ಹೋಗುವುದಿಲ್ಲ. ಕಣಿವೆ ರಾಜ್ಯದಿಂದ ಓಡಿ ಹೋಗುವ ಪ್ರಶ್ನೆಯೇ ಇಲ್ಲ," ಎಂದು ಹೇಳಿದರು.
ಕಳೆದ ತಿಂಗಳು ಕಾಶ್ಮೀರಿ ಪಂಡಿತ್ ರಸಾಯನಶಾಸ್ತ್ರಜ್ಞ ಎಂಎಲ್ ಬಿಂದ್ರೂ ಅವರ ಅಂಗಡಿಯ ಬಳಿ ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ಸೋಮವಾರದ ದಾಳಿಯು ಕೂಡ ಅಲ್ಪಸಂಖ್ಯಾತ ಸಮುದಾಯದ ಸದಸ್ಯರ ಮೇಲಿನ ದಾಳಿಯ ಸರಣಿಯ ಒಂದು ಭಾಗವಾಗಿದೆ ಎಂದು ಸಂದೀಪ್ ಮಾವಾ ನಂಬಿದ್ದಾರೆ.
"ಇದು ಅಲ್ಪಸಂಖ್ಯಾತರ ಸಮುದಾಯ ಜನರ ಮೇಲಿನ ದಾಳಿಯ ಭಾಗವಾಗಿದೆ ಎಂದು ನಾನು ಭಾವಿಸುತ್ತೇನೆ. ದಾಳಿಕೋರರು ತಮ್ಮ ಮಾರಾಟಗಾರನನ್ನು ಅಲ್ಪಸಂಖ್ಯಾತ ಎಂದು ತಪ್ಪಾಗಿ ಭಾವಿಸಿದರು. ಸುಮಾರು 14 ವರ್ಷಗಳ ಕಾಲ ಕುಟುಂಬಕ್ಕಾಗಿ ಕೆಲಸ ಮಾಡಿದ ಖಾನ್ ಅವರು ಅಂಗಡಿಗೆ ಹೋದ ಸಂದರ್ಭದಲ್ಲಿ ಗುಂಡು ಹಾರಿಸಿದರು," ಎಂದು ಸಂದೀಪ್ ಹೇಳಿದ್ದಾರೆ.
2018ರಲ್ಲಿ ಕಾಶ್ಮೀರಕ್ಕೆ ಮರಳಿದ ಮಾವಾ, ಮತ್ತೆ ಹಿಂತಿರುಗಿ ಹೋಗುವ ಪ್ರಶ್ನೆಯೇ ಇಲ್ಲ. ಕುಟುಂಬದ ವಿರೋಧದ ಹೊರತಾಗಿಯೂ ಕಾಶ್ಮೀರದಲ್ಲಿ ಉಳಿಯಲು ನಿರ್ಧರಿಸಿದ್ದೇನೆ. ಕಾಶ್ಮೀರದ ಜನರು, ಮುಸ್ಲಿಮರು, ಹಿಂದೂಗಳು, ಕ್ರಿಶ್ಚಿಯನ್ನರು ಮತ್ತು ಸಿಖ್ಖರು ಎಲ್ಲರೂ ಸೇರಿಕೊಂಡು ಸಾಮೂಹಿಕವಾಗಿ ಹೋರಾಡಬೇಕಾಗಿದೆ. ನಾವು ಓಡಿಹೋಗಲು ಮತ್ತು ಈ ಜಾಗವನ್ನು ಅವರಿಗೆ ಬಿಟ್ಟು ಕೊಡುವುದಕ್ಕೆ ಸಾಧ್ಯವಿಲ್ಲ," ಎಂದು ಪಂಡಿತ್ ಸಂದೀಪ್ ಮಾವಾ ಹೇಳಿದ್ದಾರೆ.
ಪೊಲೀಸರಿಂದ ಮೊದಲೇ ಎಚ್ಚರಿಕೆ:
ಉಗ್ರರು ತನ್ನ ಕಾಶ್ಮೀರಿ ಮುಸ್ಲಿಂ ಮಾರಾಟಗಾರ ಮೊಹಮ್ಮದ್ ಇಬ್ರಾಹಿಂ ಖಾನ್ ರನ್ನು ಹೊಡೆದುರುಳಿಸುವ ಕೆಲವೇ ಗಂಟೆಗಳ ಮೊದಲು, ಸೋಮವಾರ ಮಧ್ಯಾಹ್ನ ತಮ್ಮ ಮೇಲೆ ಸಂಭವನೀಯ ದಾಳಿ ನಡೆಯುವ ಬಗ್ಗೆ ಪೊಲೀಸರು ಎಚ್ಚರಿಸಿದ್ದರು. "ನನಗೆ ಇನ್ಪುಟ್ ಇದೆ ಎಂದು ಪೊಲೀಸರು ಹೇಳಿದರು. ಪೊಲೀಸರು ನನಗೆ ಅಂಗಡಿಯಿಂದ ಹೊರಡುವಂತೆ ಸಲಹೆ ನೀಡಿದ ಹಿನ್ನೆಲೆ ನಾನು ಮಧ್ಯಾಹ್ನ 3:15 ರ ಸುಮಾರಿಗೆ ಹೊರಟೆನು" ಎಂದು ಮಾವಾ ಹೇಳಿದ್ದಾರೆ.
ನವೆಂಬರ್ ತಿಂಗಳಿನಲ್ಲಿ ಉಗ್ರರ ಹಾವಳಿ:
ಕಳೆದ ಅಕ್ಟೋಬರ್ ತಿಂಗಳ ಆರಂಭದಲ್ಲಿ ಜಮ್ಮು ಕಾಶ್ಮೀರದಲ್ಲಿ ಇರುವ ವಲಸೆ ಕಾರ್ಮಿಕರನ್ನು ಗುರಿಯಾಗಿಸಿಕೊಂಡು ಉಗ್ರರು ಸರಣಿ ದಾಳಿಗಳನ್ನು ನಡೆಸಿದ್ದರು. ಅಕ್ಟೋಬರ್ ತಿಂಗಳ ಆರಂಭದಲ್ಲೇ ನಡೆಸಿದ ಎರಡು-ಮೂರು ದಾಳಿಗಳಲ್ಲಿ ಐದಕ್ಕೂ ಹೆಚ್ಚು ವಲಸೆ ಕಾರ್ಮಿಕರನ್ನು ಕೊಂದು ಹಾಕಲಾಗಿತ್ತು. ಅದಾದ ನಂತರ ಮೊದಲ ಬಾರಿಗೆ ಉಗ್ರರು ಮತ್ತೊಮ್ಮೆ ಸಾರ್ವಜನಿಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ.
ನವೆಂಬರ್ 5ರಂದು ಸಾರ್ವಜನಿಕ ಆಸ್ಪತ್ರೆಯ ಸುತ್ತಮುತ್ತಲಿನಲ್ಲಿ ಕಾಣಿಸಿಕೊಂಡ ಉಗ್ರರು ಹಾಗೂ ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ಶುಕ್ರವಾರ ನಡೆದಿರುವ ಘಟನೆಯಿಂದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಉಗ್ರರ ಪತ್ತೆಗೆ ಭದ್ರತಾ ಪಡೆಗಳಿಂದ ಶೋಧ ಕಾರ್ಯಾಚರಣೆ ಮುಂದುವರಿಸಲಾಗಿದೆ. ಉಗ್ರರ ಮತ್ತಷ್ಟು ಉದ್ದೇಶಿತ ದಾಳಿಗಳನ್ನು ತಡೆಯಲು ಶ್ರೀನಗರದಲ್ಲಿ ಹೆಚ್ಚುವರಿ 50 ಭದ್ರತಾ ಪಡೆಗಳನ್ನು ನಿಯೋಜಿಸಲಾಗಿತ್ತು.