ಉಗ್ರರ ಜೊತೆ ಸಿಕ್ಕಿಬಿದ್ದ ಡಿವೈಎಸ್ಪಿ: ಕೆಲವು ಆತಂಕಕಾರಿ ಮಾಹಿತಿ
ಶ್ರೀನಗರ, ಜನವರಿ 13: ಪೊಲೀಸ್ ಅಧಿಕಾರಿಯೊಬ್ಬರು ಉಗ್ರರ ಜೊತೆ ಹೋಗುತ್ತಿದ್ದಾಗ ಸಿಕ್ಕಿಬಿದ್ದಿರುವ ಘಟನೆ ಕಾಶ್ಮೀರದಲ್ಲಿ ನಡೆದಿದೆ.
ಕಾಶ್ಮೀರದಲ್ಲಿ ಭಯೋತ್ಪಾದಕರನ್ನು ಬಗ್ಗು ಬಡಿಯಬೇಕಾದ ಹೊಣೆ ಹೊತ್ತಿರುವ , ರಾಷ್ಟ್ರಪತಿ ಪದಕ ಪುರಸ್ಕೃತ ಪೊಲೀಸ್ ಅಧಿಕಾರಿ ಇವರಾಗಿದ್ದು ಇಬ್ಬರು ಉಗ್ರಗಾಮಿಗಳ ಜೊತೆಗೆ ಪ್ರಯಾಣಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ.
ಉಗ್ರ ದಾಳಿಗೆ ಉಗ್ರರನ್ನು ಕರೆದೊಯ್ಯುತ್ತಿದ್ದ
ದೆಹಲಿಯಲ್ಲಿ ಸಂಭವನೀಯ ಉಗ್ರ ದಾಳಿಗೆ ಉಗ್ರರನ್ನು ಆತ ಕರೆದೊಯ್ಯುತ್ತಿದ್ದ ಎನ್ನಲಾಗಿದೆ. ಡಿವೈಎಸ್ಪಿ ದರ್ಜೆಯ ಆ ಅಧಿಕಾರಿಯನ್ನು ಉಗ್ರರ ಸಮೇತ ಪೊಲೀಸರು ಬಂಧಿಸಿದ್ದು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.
ಜಮ್ಮು- ಕಾಶ್ಮೀರದಲ್ಲಿ ನಾಲ್ವರು ಉಗ್ರಗಾಮಿಗಳನ್ನು ಹೊಡೆದುರುಳಿಸಿದ ಯೋಧರು
ಸಂಸತ್ ದಾಳಿಯಲ್ಲೂ ಇವರ ಕೈವಾಡ?
ದವಿಂದರ್ 2001ರಲ್ಲಿ ನಡೆದ ಸಂಸತ್ ಮೇಲಿನ ದಾಳಿಯಲ್ಲಿ ಕೂಡ ಪಾತ್ರ ವಹಿಸಿದ್ದ, ಆದರೆ ತನಿಖೆಯಲ್ಲಿ ಆತನಿಗೆ ಕ್ಲೀನ್ಚಿಟ್ ನೀಡಲಾಗಿತ್ತು ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಆದರೆ ಈ ಬಗ್ಗೆ ನಮಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ತನಿಖೆ ವೇಳೆ ದವಿಂದರ್ ಬಳಿ ಈ ವಿಷಯದ ಬಗ್ಗೆ ಪ್ರಶ್ನಿಸಲಾಗುತ್ತದೆ ಎಂದು ಐಜಿಪಿ ವಿಜಯ್ ಕುಮಾರ್ ತಿಳಿಸಿದ್ದಾರೆ.
ದವಿಂದರ್ ಸಿಕ್ಕಿಬಿದ್ದಿದ್ದು ಹೇಗೆ?
ನವೀದ್ ಅಹಮದ್ ಶಾ ಅಲಿಯಾಸ್ ನವೀದ್ ಬಾಬು ಎಂಬಾತ ಪೊಲೀಸ್ ಪೇದೆಯಾಗಿದ್ದ . 2017ರಲ್ಲಿ ಕರ್ತವ್ಯ ತ್ಯಜಿಸಿದ ಆತ 4 ಬಂದೂಕುಗಳನ್ನು ಕದ್ದು ಹಿಜ್ಬುಲ್ ಮುಜಾಹಿದಿನ್ ಉಗ್ರ ಸಂಘಟನೆಗೆ ಸೇರ್ಪಡೆಯಾಗಿದ್ದ. ಪೊಲೀಸ್ ಸಿಬ್ಬಂದಿ , ನಾಗರಿಕ ಹತ್ಯೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ. ನವೀದ್ ಹಾಗೂ ಮತ್ತೊಬ್ಬ ಉಗ್ರಗಾಮಿ ಶನಿವಾರ ಜಮ್ಮುವಿನ ಕಡೆಗೆ ಕಾರಿನಲ್ಲಿ ತೆರಳುತ್ತಿರುವ ಖಚಿತ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ನಾಕಾ ಬಂದಿ ಹಾಕಿ ಐ10 ಕಾರೊಂದನ್ನು ತಪಾಸಣೆ ಮಾಡಿದಾಗ ಪೊಲೀಸರಿಗೆ ಅಚ್ಚರಿ ಕಾದಿತ್ತು. ಉಗ್ರರ ಜೊತೆ ಪೊಲೀಸ್ ಅಧಿಕಾರಿ ಕೂಡ ಪ್ರಯಾಣಿಸುತ್ತಿದ್ದರು.
ಗುಪ್ತಚರ, ರಾ, ಸಿಐಡಿ ಕೂಡ ವಿಚಾರಣೆಯಲ್ಲಿ ಭಾಗಿ
ಗುಪ್ತಚರ ದಳ, ರಾ, ಸಿಐಡಿ, ಪೊಲೀಸ್ ಭದ್ರತಾ ಪಡೆಗಳು ಕೂಡ ವಿಚಾರಣೆಯಲ್ಲಿ ಭಾಗವಹಿಸಿವೆ. ದವೀಂದರ್ ಸಿಂಗ್ ಎಂಬ ಡಿವೈಎಸ್ಪಿ ಉಗ್ರರ ಜೊತೆ ಪ್ರಯಾಣಿಸುವಾಗ ಸಿಕ್ಕಿಬಿದ್ದಿರುವ ಅಧಿಕಾರಿ. ಶ್ರೀನಗರ ವಿಮಾನ ನಿಲ್ದಾಣದಲ್ಲಿನ ಅಪಹರಣ ನಿಗ್ರಹ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಈತ. ಕಳೆದ ವಾರ ಕಾಶ್ಮೀರಕ್ಕೆ ವಿದೇಶಿ ರಾಜತಾಂತ್ರಿಕರು ಭೇಟಿ ನೀಡಿದಾಗ ಅವರ ಜೊತೆಗೆ ಸಿದ್ದ ಎಂಬ ಆತಂಕಕಾರಿ ಮಾಹಿತಿಯೂ ಬೆಳಕಿಗೆ ಬಂದಿದೆ.