ರಕ್ತ-ಸಿಕ್ತ ರಾಜಕಾರಣ: ಕಾಶ್ಮೀರದಲ್ಲಿ ಬಿಜೆಪಿ ಮುಖಂಡನ ಬರ್ಬರ ಹತ್ಯೆ
ಶ್ರೀನಗರ, ಮೇ 05: ಜಮ್ಮು ಕಾಶ್ಮೀರದ ರಕ್ತ-ಸಿಕ್ತ ರಾಜಕಾರಣ ಮುಂದುವರೆದಿದ್ದು, ಶನಿವಾರ ರಾತ್ರಿ ಅನಂತ್ನಾಗ್ ಜಿಲ್ಲೆಯಲ್ಲಿ ಬಿಜೆಪಿ ಮುಂಖಂಡರೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಅನಂತ್ನಾಗ್ ಜಿಲ್ಲೆಯ ಬಿಜೆಪಿ ಉಪಾಧ್ಯಕ್ಷರಾಗಿರುವ ಗುಲ್ ಮೊಹಮ್ಮದ್ ಮಿರ್ ಎಂಬುವರನ್ನು ನಿನ್ನೆ ರಾತ್ರಿ ಕೆಲವು ಅಪರಚಿತ ಉಗ್ರಗಾಮಿಗಳು ಹತ್ಯೆ ಮಾಡಿದ್ದಾರೆ. ಅವರು ವಾಹನ ಚಲಾಯಿಸುತ್ತಿದ್ದಾಗ ಮತ್ತೊಂದು ವಾಹನದಲ್ಲಿ ಬಂದ ಉಗ್ರಗಾಮಿಗಳು ಅವರನ್ನು ಹತ್ಯೆ ಮಾಡಿದ್ದಾರೆ.
ಅವರಿಗೆ ಉಗ್ರಗಾಮಿಗಳಿಂದ ಸತತ ಜೀವ ಬೆದರಿಕೆ ಇತ್ತು, ಅದಾಗ್ಯೂ ಅವರಿಗೆ ಒದಗಿಸಿದ್ದ ಭದ್ರತೆ ಹಿಂತೆಗೆದುಕೊಳ್ಳಲಾಗಿತ್ತು, ಹೀಗಾಗಿ ಅವರು ಉಗ್ರಗಾಮಿಗಳಿಗೆ ಸುಲಭ ಬಲಿಯಾಗಿದ್ದಾರೆ.

ಮಿರ್ ಅವರ ಹತ್ಯೆಯನ್ನು ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ಮುಖಂಡರು ಖಂಡಿಸಿದ್ದಾರೆ. ಉಗ್ರಗಾಮಿಗಳ ವಿರುದ್ಧ ಶೀಘ್ರವೇ ಕ್ರಮ ಜರುಗಿಸಬೇಕು ಎಂದು ಜಮ್ಮು-ಕಾಶ್ಮೀರ ಬಿಜೆಪಿ ಒತ್ತಾಯಿಸಿದೆ. ಓಮರ್ ಅಬ್ದುಲ್ಲಾ , ಮೆಹಬೂಬಾ ಮಫ್ತಿ ಅವರು ಸಹ ದಾಳಿಯನ್ನು ಖಂಡಿಸಿ ಟ್ವೀಟ್ ಮಾಡಿದ್ದಾರೆ.
ಕಾಶ್ಮೀರದಲ್ಲಿ ರಕ್ತ-ಸಿಕ್ತ ರಾಜಕೀಯ ಪದೇ ಪದೇ ನಡೆಯುತ್ತಲೇ ಇದೆ. ಪ್ರಸ್ತುತ ಅಲ್ಲಿ ಚುನಾವಣೆಗಳು ನಡೆಯುತ್ತಿದ್ದು, ನಾಳೆ (ಸೋಮವಾರ) ಸಹ ಕೆಲವು ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಮತಚಲಾಯಿಸದಂತೆ ಉಗ್ರಗಾಮಿಗಳು, ಪ್ರತ್ಯೇಕವಾದಿಗಳು ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications